Mobile phone ban in temples: ಕರುನಾಡ ದೇಗುಲಗಳಲ್ಲೂ ಮೊಬೈಲ್ ಬ್ಯಾನ್?; ಮುಜರಾಯಿ ಇಲಾಖೆ ಮೇಲೆ ಒತ್ತಡ- ಏನಿದು ಸುದ್ದಿ? ವಿವರ ಇಲ್ಲಿದೆ
Dec 12, 2022 08:26 PM IST
ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧ (ಸಾಂಕೇತಿಕ ಚಿತ್ರ)
Mobile phone ban in temples: ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ತಮಿಳುನಾಡಿನಲ್ಲಿ ಮೊಬೈಲ್ ಫೋನ್ ಬ್ಯಾನ್ ಮಾಡಿದ ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ದೇಗುಲಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಬೇಕು. ಹೀಗೊಂದು ಒತ್ತಡ ಈಗ ರಾಜ್ಯ ಮುಜರಾಯಿ ಇಲಾಖೆ ಮೇಲಿದೆ. ಒತ್ತಡ ಹಾಕ್ತಿರೋದು ಯಾರು ಮತ್ತು ಯಾಕೆ? ಇಲ್ಲಿದೆ ವಿವರ.
ಬೆಂಗಳೂರು: ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ತಮಿಳುನಾಡಿನಲ್ಲಿ ಮೊಬೈಲ್ ಫೋನ್ ಬ್ಯಾನ್ ಮಾಡಿದ ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ದೇಗುಲಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಬೇಕು. ಹೀಗೊಂದು ಒತ್ತಡ ಈಗ ರಾಜ್ಯ ಮುಜರಾಯಿ ಇಲಾಖೆ ಮೇಲಿದೆ.
ತಮಿಳುನಾಡಿನಲ್ಲಿ ದೇವಾಲಯಗಳ ಪಾವಿತ್ರ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದಕ್ಕಾಗಿ ರಾಜ್ಯದ ಉದ್ದಗಲಕ್ಕೂ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಸದಂತೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಆರ್. ಮಹದೇವನ್, ಜೆ ಸತ್ಯನಾರಾಯಣ ಪ್ರಸಾದ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿತ್ತು. ಎಂ. ಸೀತಾರಾಮನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಈ ತೀರ್ಪು ನೀಡಿದೆ.
ತಮಿಳುನಾಡಿನ ಆರು ಪ್ರಮುಖ ಮುರುಗಾ ದೇವಾಲಯಗಳ ಪೈಕಿ ತೂತುಕುಡಿಯ ತಿರುಚೆಂಡೂರಿನ ಅರುಲ್ಮಿಗು ಸುಬ್ರಮಣಿಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಂಡ್ರಾಯ್ಡ್ ಫೋನ್ ಕೊಂಡೊಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಸೀತಾರಾಮನ್ ಆಗ್ರಹಿಸಿದ್ದರು.
ಈ ವಿದ್ಯಮಾನದ ಬೆನ್ನಿಗೆ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೂಡ ಇದೇ ಬೇಡಿಕೆ ಹೆಚ್ಚಾಗಿದೆ. ನಗರದ ದೇಗುಲಗಳಲ್ಲಿ ಸೆಲ್ಫಿ ಮತ್ತು ಫೋಟೋ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ದೇವಸ್ಥಾನಗಳ ನಿತ್ಯಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಮೊಬೈಲ್ ಕಳವು ಕೂಡ ಹೆಚ್ಚಾಗುತ್ತಿದೆ. ಈ ಎಲ್ಲ ಅಡ್ಡಿ ಆತಂಕ ನಿವಾರಿಸಲು ದೇವಾಲಯಗಳಲ್ಲಿ ಮೊಬೈಲ್ ಬಳಸುವುದು ನಿಷೇಧಿಸುವುದು ಒಂದೇ ಪರಿಹಾರ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟ ಹೇಳಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ಸದ್ಯ ಅರ್ಚಕರ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ದೇವಸ್ಥಾನಗಳ ನಿತ್ಯ ಚಟುವಟಿಕೆಗಳಾದ ಪೂಜೆ ಮಾಡುವುದಕ್ಕೆ ಕೂಡ ಭಕ್ತರ ಮೊಬೈಲ್ ಬಳಕೆ ಅಡ್ಡಿ ಆಗುತ್ತಿರುವ ಕಾರಣ ಇದು ಭಕ್ತರಿಗೂ ಅನ್ವಯವಾಗಬೇಕು. ದೇವಸ್ಥಾನ ಪ್ರವಾಸಿ ತಾಣವಲ್ಲ. ದೇಗುಲಕ್ಕೆ ಭಕ್ತಿಯಿಂದ ಬರುವ ಕಾರಣ, ಇತರರಿಗೂ ಇದು ತೊಂದರೆ ಉಂಟು ಮಾಡುತ್ತದೆ ಎಂಬುದನ್ನೂ ಪರಿಗಣಿಸಬೇಕು ಎಂದು ಒಕ್ಕೂಟ ಹೇಳಿದ್ದು, ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ ಎಂದು ವರದಿ ಹೇಳಿದೆ.
ಕಳ್ಳಕಾಕರರ ಕಾಟ!
ದೇವಸ್ಥಾನಗಳಲ್ಲಿ ಕಳ್ಳಕಾಕರರ ಕಾಟವೂ ಹೆಚ್ಚಾಗಿದೆ. ಇಂಥವರು ದೇವಸ್ಥಾನದ ಬಾಗಿಲು, ಬೀಗ, ಹುಂಡಿಗಳ ಬೀಗದ ಫೋಟೋ ತಗೊಂಡು ಹೋಗುತ್ತಿರುವುದು ಕಂಡುಬಂದಿದೆ.ಕೆಲವು ದೇಗುಲಗಳ ಹುಂಡಿ ಕಳವು ಪ್ರಕರಣದ ಹಿಂದೆ ಇಂತಹ ಕುಕೃತ್ಯ ಕೂಡ ಇದೆ ಎಂದು ಒಕ್ಕೂಟ ಗಮನಸೆಳೆದಿದೆ.
ಸದ್ಯ ಎಲ್ಲ ದೇಗುಲಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂಬ ಬೋರ್ಡ್ ಹಾಕಲಾಗಿದೆಯೇ ಹೊರತು, ಅಧಿಕೃತ ಆದೇಶ ಇಲ್ಲ. ಹೀಗಾಗಿ ಭಕ್ತಾದಿಗಳ ಬಳಿ ಮೊಬೈಲ್ ಬಳಸಬೇಡಿ ಎಂದು ಹೇಳುವುದಕ್ಕೆ ಕಷ್ಟವಾಗುತ್ತಿದೆ ಎಂಬ ಅಂಶದ ಕಡೆಗೂ ಒಕ್ಕೂಟ ಮುಜರಾಯಿ ಇಲಾಖೆಯ ಗಮನಸೆಳೆದಿದೆ.
ಕೊನೆಯ ಅಸ್ತ್ರವಾಗಿ ಹೈಕೋರ್ಟ್ ಮೊರೆ
ಮುಜರಾಯಿ ಇಲಾಖೆಯು ಮನವಿಯನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ, ಕೊನೆಯದಾಗಿ ಹೈಕೋರ್ಟ್ಗೆ ಮೊರೆ ಹೋಗಬೇಕಾಗುತ್ತದೆ. ತಮಿಳುನಾಡಿನಂತೆ ಕರ್ನಾಟಕ ಹೈಕೋರ್ಟ್ನಲ್ಲೂ ಪಿಐಎಲ್ ದಾಖಲಿಸಲಾಗುವುದು. ಆ ಕೆಲಸ ಮಾಡಲು ಕೂಡ ಸಿದ್ಧವಿರುವುದಾಗಿ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟ ಹೇಳಿದೆ.
ಗಮನಿಸಬಹುದಾದ ಇತರೆ ವಿಚಾರಗಳು
Winter Special Tea: ಫುಲ್ ಚಳಿ ಅಲ್ವಾ? ಈ ಚಳಿಗೊಂದು ಚಹಾ ಸಿಕ್ಕರೆ!; ಈ ಚಳಿಗಾಲದಲ್ಲಿ ಈ 8 ಸ್ಪೆಷಲ್ ಟೀ ಟ್ರೈ ಮಾಡಿ!
Winter Special Tea: ಚಳಿಗಾಲ ಶುರುವಾಗಿದೆ. ಈಗ ಮುಂಜಾನೆ ಎದ್ದು ಹೊರಗೆ ಬಂದರೆ ಫುಲ್ ಚಳಿ ಅಲ್ವ? ಈ ಚಳಿಯಲ್ಲಿ ಒಂದು ಕಪ್ ಚಹಾ ಬೇಕು ಅಂತ ಅನ್ನಿಸೋದು ಸಹಜ. ಅಂದ ಹಾಗೆ ಈ ಸಲ ಚಳಿಗಾಲದಲ್ಲಿ ನೀವು ಈ 8 ಸ್ಪೆಷಲ್ ಚಹಾಗಳ ಸ್ವಾದ ಸ್ವವಿಯಲು ಪ್ರಯತ್ನಿಸಿ! ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.
Re-KYC RBI rule and process: ಮರು ಕೆವೈಸಿ ಮಾಡಿಸಲು ಬ್ಯಾಂಕ್ಗೆ ಹೋಗಬೇಕಾಗಿಲ್ಲ; ಆರ್ಬಿಐ ನಿಯಮ ಏನು ಹೇಳುತ್ತೆ ಚೆಕ್ ಮಾಡಿ
Re-KYC RBI rule and process: ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್ಲೈನ್ನಲ್ಲಿ ಇದನ್ನು ಮಾಡಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.