Vijayapura News: ವಿಜಯಪುರ ಜಿಲ್ಲೆಯ ಲಚ್ಯಾಣ ಜಾತ್ರೆಯ ರಥದಡಿ ಸಿಲುಕಿ ಇಬ್ಬರು ಭಕ್ತರ ಸಾವು
Apr 28, 2024 09:45 PM IST
ವಿಜಯಪುರ ಜಿಲ್ಲೆ ಲಚ್ಯಾಣದಲ್ಲಿ ದುರಂತ ಸಂಭವಿಸಿದೆ.
ರಥ ಹರಿದು ಇಬ್ಬರು ಮೃತಪಟ್ಟ ದುರ್ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ನಡೆದಿದೆ.
ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಮಗು ಆಳದ ಕಂದಕಕ್ಕೆ ಬಿದ್ದು ಬದುಳಿದ ಪವಾಡ ನಡೆದ ಘಟನೆ ಮಾಸುವ ಮುನ್ನವೇ ಅದೇ ಗ್ರಾಮದ ಪ್ರಸಿದ್ದ ಜಾತ್ರೋತ್ಸವದಲ್ಲಿ ರಥ ಉರುಳಿ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ಹಿನ್ನೆಲೆಯಲ್ಲಿ ಆತಂಕಗೊಂಡ ಭಕ್ತರು ಅತ್ತಿತ್ತ ಓಡಿದ್ದರಿಂದ ಅನಾಹುತವಾಗಿದೆ. ಅದರೆ ಅಲ್ಲಿದ್ದವರು ಸಮಾಧಾನಪಡಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ರಥೋತ್ಸವಕ್ಕೂ ಮುನ್ನ ಗ್ರಾಮದಲ್ಲಿ ಭದ್ರತೆ ಹಾಕಲಾಗಿತ್ತಾದರೂ ಪೊಲೀಸ್ ಕಡಿಮೆ ಸಂಖ್ಯೆಯಲ್ಲಿದ್ದರು ದುರಂತದ ನಂತರ ಹೆಚ್ಚಿನ ಪೊಲೀಸರು ಅಲ್ಲಿ ನಿಯೋಜನೆಗೊಂಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿಯೇ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ರಥೋತ್ಸವ ಬಹು ಜನಪ್ರಿಯ.ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಭಾಗದಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ವಾರದಿಂದಲೂ ನಾನಾ ಧಾರ್ಮಿಕ ಚಟುವಟಿಕೆಗಳು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆದಿವೆ. ಭಾನುವಾರ ಸಂಜೆ ರಥೋತ್ಸವವಿತ್ತು. ಇದಕ್ಕೆ ಸಹಸ್ರಾರು ಭಕ್ತರು ಸೇರಿದ್ದರು. ಸಂಜೆ ವೇಳೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸ್ವಲ್ಪ ದೂರ ರಥ ಎಳೆಯುವ ಹೊತ್ತಿಗೆ ಅದರ ಅಡಿ ಸಿಲುಕಿ ಬಂಡು ಕಟಕದೊಂಡ ಎಂಬಾತ ತೀವ್ರವಾಗಿ ಗಾಯಗೊಂಡ. ಶೋಭು ಮಹದೇವ ಸಿಂಧೆ ಎಂಬಾತ ಗಾಯಗೊಂಡಿದ್ದರಿಂದ ಆತ ಅಲ್ಲಿಯೇ ಜೀವ ಬಿಟ್ಟಿದ್ದಾನೆ. ಇದೇ ವೇಳೆ ನೂಕು ನುಗ್ಗಲು ಉಂಟಾಗಿದ್ದರಿಂದ ಇನ್ನೊಬ್ಬ ಕೂಡ ರಥದ ಗಾಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇಬ್ಬರ ದೇಹವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು, ಇದೇ ವೇಳೆ ನರೇಂದ್ರ ಕಟಕದೊಂಡ ಎಂಬಾತ ಕೂಡ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದುರಂತದ ಕಾರಣದಿಂದ ಕೂಡಲೇ ರಥವನ್ನು ನಿಲ್ಲಿಸಿ ಅನಾಹುತ ಆಗುವುದನ್ನು ತಪ್ಪಿಸಲಾಯಿತು. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.
ನಾವು ರಥೋತ್ಸವಕ್ಕೆ ಬಂದಿದ್ದೆವು. ಬಹಳ ಜನ ಇದ್ದುದರಿಂದ ದೂರವೇ ನಿಂತಿದ್ದೆವು. ಜನ ಜಂಗುಳಿ ಜಾಸ್ತಿಯಾಗಿ ರಥದ ಪಕ್ಕವೇ ಜನ ಹೋಗಲು ಅಣಿಯಾದರು. ಈ ವೇಳ ಕಾಲ್ತುಳಿತ ಉಂಟಾಗಿ ಕೆಲವರು ರಥಕ್ಕೆ ಸಿಲುಕಿದರು. ಕೂಗಾಟ, ಚೀರಾಟ ಜೋರಾಗಿತ್ತು. ಆನಂತರ ಏನಾಯಿತು ಎನ್ನುವುದು ತಿಳಿಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಭಾಗ