Mahua Moitra: 'ನಾಚಿಕೆಯಿಲ್ಲದ ಸರ್ಕಾರ'.. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರನ್ನ ರಾಜ್ಯಪಾಲರನ್ನಾಗಿ ಮಾಡಿದಕ್ಕೆ ಟಿಎಂಸಿ ಸಂಸದೆ ಕಿಡಿ
Feb 13, 2023 01:24 PM IST
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
- ಆಂಧ್ರಪ್ರದೇಶದ ನೂತನ ಗವರ್ನರ್ ಆಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಎಸ್ ಅಬ್ದುಲ್ ನಜೀರ್ ಅವರ ನೇಮಕವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಟೀಕಿಸಿದ್ದಾರೆ.
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಆಂಧ್ರಪ್ರದೇಶದ ನೂತನ ಗವರ್ನರ್ ಆಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಎಸ್ ಅಬ್ದುಲ್ ನಜೀರ್ ಅವರ ನೇಮಕವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಟೀಕಿಸಿದ್ದಾರೆ.
“ಎರಡು ತಿಂಗಳೊಳಗೆ ಮತ್ತೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಅವರ ನಿವೃತ್ತಿಯ ನಂತರ ರಾಜ್ಯಪಾಲರನ್ನು ನೇಮಿಸಲಾಗಿದೆ. ಬಹುಮತದ ಸರ್ಕಾರವು ಗ್ರಹಿಕೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಆದರೆ ಅದನ್ನು ಒಪ್ಪಿಕೊಳ್ಳಲು ಎಷ್ಟು ನಾಚಿಕೆ ಇಲ್ಲದವರು ನೀವು? ” ಎಂದು ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ನಿವೃತ್ತರಾದ 30 ದಿನಗಳ ಒಳಗೆ ಅವರ ನೇಮಕಕ್ಕೆ ಸಂಬಂಧಿಸಿದಂತೆ ದೊಡ್ಡ ವಿವಾದ ಭುಗಿಲೆದ್ದಿದೆ. ಅವರು ನವೆಂಬರ್ 2019 ರಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಐದು ನ್ಯಾಯಾಧೀಶರ ಪೀಠದ ಭಾಗವಾಗಿದ್ದರು. ಅಲ್ಲದೇ ಅವರು 2016 ರಲ್ಲಿ ನರೇಂದ್ರ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ಕ್ರಮವನ್ನು ಎತ್ತಿಹಿಡಿದ ಪೀಠದ ನೇತೃತ್ವ ವಹಿಸಿದ್ದರು. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ಅಬ್ದುಲ್ ನಜೀರ್ ಇದ್ದರು. ಆ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು ತ್ರಿವಳಿ ತಲಾಖ್ ಅನ್ನು ಅಸಿಂಧುಗೊಳಿಸಿತ್ತು.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿಯವರಾದ ಅಬ್ದುಲ್ ನಜೀರ್ ಅವರು ಕಳೆದ ಜನವರಿ 14 ರಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.
ಜಸ್ಟಿಸ್ ನಜೀರ್ ಅವರನ್ನು ಆಂಧ್ರದ ರಾಜ್ಯಪಾಲರನ್ನಾಗಿ ನೇಮಿಸಿರುವುದನ್ನು ಟಿಎಂಸಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು 2012 ರಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅರುಣ್ ಜೇಟ್ಲಿ ಅವರು 2012 ರಲ್ಲಿ ನಿವೃತ್ತಿಯ ನಂತರದ ಕೆಲಸಗಳು ನಿವೃತ್ತಿಯ ಪೂರ್ವ ತೀರ್ಪುಗಳ ಮೇಲೆ ಪ್ರಭಾವಿತವಾಗಿರುತ್ತವೆ ಎಂದು ಹೇಳಿದ್ದನ್ನು ಕೇಳಬಹುದಾಗಿದೆ. "ಕಳೆದ 3-4 ವರ್ಷಗಳಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳು" ಇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ನಿವೃತ್ತಿಯ ನಂತರದ ಕೆಲಸಗಳು ನಿವೃತ್ತಿಯ ಪೂರ್ವ ತೀರ್ಪುಗಳ ಮೇಲೆ ಪ್ರಭಾವಿತವಾಗಿರುತ್ತವೆ ಎಂಬ ಅರುಣ್ ಜೇಟ್ಲಿ ಅವರ ಮಾತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬೆದರಿಕೆಯಾಗಿದೆ ಎಂದರು.
ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಮತ್ತು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆಯನ್ನು ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ 12 ರಾಜ್ಯಗಳಿಗೆ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ಗೆ ಒಬ್ಬ ಲೆಫ್ಟಿನೆಂಟ್ ಗವರ್ನರ್ ಅನ್ನು ನೇಮಕ ಮಾಡಿದ್ದಾರೆ.
ಜಾರ್ಖಂಡ್ನ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಈಗ ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಅರುಣಾಚಲ ಪ್ರದೇಶದ ಗವರ್ನರ್ ಆಗಿರುವ ಬಿ.ಡಿ. ಮಿಶ್ರಾ ಅವರು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.