Amit Shah in Manipur: ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳ ಮಣಿಪುರ ಪ್ರವಾಸ; ರಾಜ್ಯಪಾಲರು, ಗುಪ್ತಚರ ಅಧಿಕಾರಿಗಳೊಂದಿಗೆ ಸಭೆ
May 30, 2023 09:47 AM IST
ಇಂಫಾಲದಲ್ಲಿ ಮಣಿಪುರ ರಾಜ್ಯಪಾಲರಾದ ಅನುಸೂಯ ಯುಕೆ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅಮಿತ್ ಶಾ (PTI)
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರು ಅಲ್ಲಿನ ರಾಜ್ಯಪಾಲರಾದ ಅನುಸೂಯ ಯುಕೆ ಅವರನ್ನು ಭೇಟಿ ಮಾಡಿದ್ದು, ಸದ್ಯದ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಇಂಫಾಲ(ಮಣಿಪುರ): ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ನಾಲ್ಕು ದಿನಗಳ ಪ್ರವಾಸದಲ್ಲಿ ಇದ್ದು, ರಾಜ್ಯಪಾಲರಾದ ಅನುಸೂಯ ಯುಕೆ (Anusuiya Uikey) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಗುಪ್ತಚರ ಹಿರಿಯ ಅಧಿಕಾರಿಗಳೊಂದಿಗೆ (Intelligence Officer) ಸಭೆ ಪ್ರಸ್ತುತ ಪರಿಸ್ಥಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ನಿನ್ನೆ (ಮೇ 29, ಸೋಮವಾರ) ಈಶಾನ್ಯ ರಾಜ್ಯ ಮಣಿಪುರವನ್ನು ತಲುಪಿದ ಕೂಡಲೇ ಇಂಫಾಲದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಮಿತ್ ಶಾ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ.
ಇದಾದ ಬಳಿಕ ಗುಪ್ತಚರ ದಳದ ಮುಖ್ಯಸ್ಥ ತಪನ್ ದೇಕಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆ ಬಳಿಕ ಮಾತನಾಡಿರುವ ಅಮಿತ್ ಶಾ ಅವರು, ರಾಜ್ಯದಲ್ಲಿನ ವೈವಿದ್ಯಮಯ ಸಮುದಾಯಗಳನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಎಲ್ಲಾ ಸಮುದಾಯದ ನಾಯಕರೊಂದಿಗೆ ಚರ್ಚೆ ಮಾಡಲಾಗುತ್ತದೆ. ಶಾಂತಿ ಸಂದೇಶವನ್ನು ಸಾರಬೇಕಿದೆ. ಈ ವಿಷಯದಲ್ಲಿ ನ್ಯಾಯ ಒದಗಿಸಲಾಗುವುದು ಎಂದು ಅಮಿತ್ ಶಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಶಾ ಅವರ ನಾಲ್ಕು ದಿನಗಳ ಮಣಿಪುರ ಪ್ರವಾಸ ನಿನ್ನೆಯಿಂದ (ಮೇ 29, ಸೋಮವಾರ) ಆರಂಭವಾಗಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿನ ಹಿಂಸಾಚಾರದ ಮೌಲ್ಯಮಾಪವನ್ನು ಮಾಡುವ ಉದ್ದೇಶದಿಂದ ಭದ್ರತೆಗೆ ಸಂಬಂಧಿಸಿದ್ದಂತೆ ಹಿರಿಯ ಅಧಿಕಾರಿಗಳ ಹಲವು ಸಭೆಗಳನ್ನು ನಡೆಸಲಿದ್ದಾರೆ. ಶಾಂತಿ, ಸುವ್ಯವಸ್ಥೆ ಹಾಗೂ ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ ಎಂದು ಹೇಳಿದೆ.
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ಆರಂಭವಾದ ನಂತರ ಅಮಿತ್ ಶಾ ಅವರು ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರ ನಂತರ ಹೆಚ್ಚಿದ ಉದ್ವಿಗ್ನತೆಯಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಈವರೆಗೆ ಕನಿಷ್ಠ 80 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಮಣಿಪುರದಲ್ಲಿ ಪ್ರಬಲವಾಗಿರುವ ಮೈತೇಯಿ ಸಮುದಾಯದವರಿಗೆ ಸರ್ಕಾರಿ ಉದ್ಯೋಗಕ್ಕಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅಲ್ಲಿನ ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಇಲ್ಲಿ ಜನಾಂಗೀಯ ಹಿಂಸಾಚಾರ ಶುರವಾಗಿತ್ತು.
ಇಂಫಾಲ ಕಣಿವೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸೇನೆ, ಅರೆಸೇನಾ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ವೇಳೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ವಿವರಿಸಿದ್ದಾರೆ.
24 ಗಂಟೆಗಳಲ್ಲಿ 10 ಮಂದಿ ಬಲಿ ಸೇನೆ ಕಟ್ಟೆಚ್ಚರ
ಮಣಿಪುರದಲ್ಲಿ ಜನಾಂಗೀಯ ದ್ವೇಷದಲ್ಲಿ ಇತ್ತೀಚಿಗೆ ನಡೆದ ಘರ್ಷಣೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬಂಡುಕೋರರು ಸೇನೆ ಪಡೆಗಳ ವಾಹನಗಳ ಮೇಲೆಯೇ ಪದೇ ಪದೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಸೇನೆ, ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿದೆ.
ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಇದನ್ನು ತಡೆಯಲು ರಾಷ್ಟ್ರಪತಿ ಆಳ್ವಿಕೆಯನ್ನು ತಕ್ಷಣವೇ ಹೇರಬೇಕೆಂದು ಚುರಚಂದ್ಪುರದ ಮಾನ್ಯತೆ ಪಡೆದ ಬುಡಕಟ್ಟು ಒಕ್ಕೂಟವಾಗಿರುವ ಬುಡಕಟ್ಟು ನಾಯಕರ ವೇದಿಕೆ ಒತ್ತಾಯಿಸಿದೆ.