KS Eshwarappa: ಸಾಬರು ಇರೋ ಕ್ಷೇತ್ರದಲ್ಲೇ ಸಿದ್ದರಾಮಯ್ಯ ನಿಲ್ಲೋದು; ಕೆ.ಎಸ್.ಈಶ್ವರಪ್ಪ
Jul 19, 2022 03:24 PM IST
ಸಿದ್ದರಾಮೋತ್ಸವ ಟೀಕಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ಸಿದ್ದರಾಮೋತ್ಸವಕ್ಕೆ 75 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದರ ಅಗತ್ಯವಾದರೂ ಏನಿತ್ತು. ಇದೇ ಹಣವನ್ನು ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಬೇಕಿತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ: 2023ರ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಬಲ ರಾಜಕೀಯ ಸಂದೇಶ ರವಾನಿಸುವ ಉದ್ದೇಶದಿಂದ ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮ ಸಿದ್ದರಾಮೋತ್ಸವವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರಪ್ಪ, ಸಿದ್ದರಾಮೋತ್ಸವಕ್ಕೆ 75 ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯವಾದರೂ ಏನಿತ್ತು. ಈ ಹಣವನ್ನು ನೆರೆಯಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಬೇಕಿತ್ತು ಎಂದು ಹೇಳಿದ್ದಾರೆ.
ಅರೆ ಕಾಂಗ್ರೆಸ್ ನಾಯಕರು ಹೇಳೋದೊಂದು ಮಾಡೊಂದು ಒಂದು. ಪ್ರತಿದಿನ ನಾಚಿಕೆ ಇಲ್ಲದೆ ಮಾತನಾಡುತ್ತಿದ್ದಾರೆ. ಜಿಎಸ್ ಟಿ ಬಗ್ಗೆ ನಿನ್ನೆ ಹೇಳಿಕೆ ಕೊಟ್ಟಿದ್ದಾರೆ. ನಾನು ಸಿದ್ದರಾಮಯ್ಯ ಅವರಿಗೆ ಕೇಳುತ್ತಿದ್ದೇನೆ. ಜಿಎಸ್ ಟಿ ಬಿಜೆಪಿ ತೀರ್ಮಾನನಾ? ರಾಜಸ್ಥಾನ ಮತ್ತು ಜಾರ್ಖಂಡ್ ಕಾಂಗ್ರೆಸ್ ಸರ್ಕಾರ ಅಲ್ವಾ, ಇವರು ಅಲ್ಲಿ ಕೂತು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಮಾಡ್ತೀರಾ. ನಿಮ್ಮ ರಾಜಕೀಯ ನಾಟಕಗಳು ಸಿದ್ದರಾಮೋತ್ಸವ ಕೊನೆಯ ನಾಟಕವಾಗಿದೆ. ಮುಂದಿನ ಚನಾವಣೆ ವೇಳೆಗೆ ನಿಮ್ಮ ಪಕ್ಷದ ಪರಿಸ್ಥಿತಿ ಏನಾಗುತ್ತೋ ನೋಡಿ ಎಂದಿದ್ದಾರೆ.
ಕಳೆದ ಬಾರಿಯೂ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಾನು ಬದಾಮಿಯಿಂದ ನಿಲ್ಲುತ್ತೇನೆ ಎಲ್ಲೂ ಹೋಗಲ್ಲ ಎಂದಿದ್ದರು. ನಿನ್ನೆ ಹೇಳಿಕೆ ಕೊಟ್ಟಿದ್ದಾರೆ. ಕೋಲಾರ, ವರುಣ, ಕೊಪ್ಪಳ ಏನೇನೋ ಹೇಳಿದ್ದಾರೆ. ಬರೆದಿಟ್ಟುಕೊಳ್ಳಿ ಅವರು ನಿಲ್ಲುವುದೇ ಸಾಬರು ಜಾಸ್ತಿ ಇರುವಂತ ಏರಿಯಾದಲ್ಲಿ. ರಾಹುಲ್ ಗಾಂಧಿ ಕೇರಳದ ವೈಯನಾಡಿಗೆ ಬಂದ್ರಲ್ಲ, ಅದೇ ರೀತಿ ಅತಿ ಹೆಚ್ಚು ಮುಸಲ್ಮಾನರು ಇರುವಂತಹ ಚಾಮರಾಜಪೇಟೆಯ ಜಮೀರ್ ಅವರ ಕಾಲಿಗೆ ಇವರು ಬೀಳೋದು. ಅಲ್ಲೇ ನಿಲ್ಲೋದು. ಹಿಂದುಗಳು ಇರುವಂತಹ ಕ್ಷೇತ್ರದಲ್ಲಿ ನಿಂತರೇ ಖಂಡಿತ ಸೋಲುತ್ತಾರೆ. ಯಾಕೆಂದರೆ ಕಾಂಗ್ರೆಸ್ ನವರು ಹಿಂದುಗಳಿಗೆ ದ್ರೋಹ ಮಾಡಿದ್ದಾರೆ. ಹೀಗಾಗಿ ತುಂಬಾ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಸಿದ್ದರಾಮೋತ್ಸವ ಮುಗಿಯುತ್ತಿದ್ದಂತೆ ಇನ್ನೂ ಕಾಂಗ್ರೆಸ್ ನಲ್ಲಿ ಏನೇನು ನಾಟಕಗಳು ಆಗ್ತಾವೆ ಅನ್ನೋದನ್ನು ನೋಡ್ತಾ ಇರಿ ಎಂದಿದ್ದಾರೆ.
ನಾನು ಸಮಾಜವಾದಿ, ಬಹಳ ಸರಳ ವ್ಯಕ್ತಿತ್ವ, ವೈಭವೀಕರಿಸಲ್ಲ ಎಂದು ಹೇಳುತ್ತಿದ್ದ ವ್ಯಕ್ತಿ ಇವತ್ತು ಯಾವ ಮಹಾಪುರುಷರೂ ಮಾಡಿಕೊಳ್ಳದ ಹಾಗೆ ಸಿದ್ದರಾಮೋತ್ಸವ ಮಾಡಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆಗೆ ನನ್ನದೇನು ವಿರೋಧ ಇಲ್ಲ. 75 ಕೋಟಿ ರೂಪಾಯಿ ಖರ್ಚು ಸಿದ್ದರಾಮೋತ್ಸವ ಮಾಡಿಕೊಳ್ಳುವ ಅಗತ್ಯ ಏನಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನು ನೋಡಿದರೆ ಯಾರಿಗೆ ಹೊಟ್ಟೆಕಿಚ್ಚು ಎಂಬುದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನವರಿಗೆ ಪ್ರಧಾನಿ ಮೋದಿ ಅವರನ್ನು ಕಂಡರೆ ಭಯವಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದರೆ ಇಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಬಹಳ ಹಿಂದೆಯೇ ಆಯೋಜಿಸಲಾಗಿತ್ತು. ಸಿಎಂ ಆಗಿ ಸಿದ್ದರಾಮಯ್ಯ ಅವರ ಕೊಡುಗೆಯನ್ನು ಗಮನಿಸಿದರೆ ಅವರನ್ನು ಕಾಂಗ್ರೆಸ್ ಅಥವಾ ಒಂದು ನಿರ್ದಿಷ್ಟ ಸಮುದಾಯದ ನಾಯಕ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ 50 ಎಕರೆ ಜಾಗದಲ್ಲಿ ವೇದಿಕೆ ಸಜ್ಜುಗೊಳಿಸಿ, ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಲಕ್ಷ ಜನರನ್ನು ಕರೆದೊಯ್ಯಲಾಗಿದೆ. ಆಹಾರವನ್ನು ತಯಾರಿಸಲು ಬರೋಬ್ಬರಿ 2.5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹಿರಿಯ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಸಮಿತಿಯ ಪ್ರಮುಖರಾದ ಆರ್.ವಿ.ದೇಶಪಾಂಡೆ, ಕೆ.ಎನ್.ರಾಜಣ್ಣ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಬೈರತಿ ಸುರೇಶ್, ಹೆಚ್.ಸಿ.ಮಹದೇವಪ್ಪ ಅವರು ಮೆಗಾ ಶೋ ನಡೆಸಲು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.