CM Bommayi Inaugurated Hampi Utsav: ವಿಜಯನಗರ ಸಾಮ್ರಾಜ್ಯದ ಗತ ವೈಭವ ಬಿಂಬಿಸುವ ಹಂಪಿ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ
Jan 28, 2023 07:45 AM IST
ಹಂಪಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ರಾಜ್ಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, 8,000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. 5 ಲಕ್ಷ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಹಂಪಿ (ವಿಜಯನಗರ ಜಿಲ್ಲೆ): ವಿಜಯನಗರ ಸಾಮ್ರಾಜ್ಯದ ಗತ ವೈಭವ ಬಿಂಬಿಸುವ ಅದ್ಧೂರಿ ಹಂಪಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ (ಜ.27, ಶುಕ್ರವಾರ) ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಅತ್ಯಂತ ಸುಭಿಕ್ಷ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಮೌಲ್ಯಗಳನ್ನಿಟ್ಟುಕೊಂಡು ಈಗಿನ ಅಗತ್ಯಕ್ಕೆ ತಕ್ಕಂತೆ ನವಕರ್ನಾಟಕ ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಹಂಪಿ ಪ್ರವಾಸಿಗರಿಗೆ ಸಕಲ ಸೌಕರ್ಯಕ್ಕೆ ಕ್ರಮ:
ವಿಜಯನಗರ ಸಾಮ್ರಾಜ್ಯದ ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸಕಲ ಸೌಕರ್ಯಗಳನ್ನು ನಮ್ಮ ಸರ್ಕಾರ ಕಲ್ಪಿಸಲಿದೆ. ಹಂಪಿಯ ಇನ್ನಷ್ಟು ಅಭಿವೃದ್ಧಿಗೆ ಭಾರತೀಯ ಪುರಾತತ್ವ ಇಲಾಖೆಯ ಅನುಮತಿ ಪಡೆದು ಯಾತ್ರಿಕರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಸರ್ಕಿಟ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರನ್ನು ಸರ್ಕಿಟ್ ಆಗಿ ಶೀಘ್ರ ಮಾಡಲಾಗುವುದು ಎಂದರು.
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 120 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ನೀಡಿದ್ದು,ಇನ್ನೂ ಎರಡು ವಾರದೊಳಗೆ ಅಡಿಗಲ್ಲು ನೆರವೇರಿಸುವುದರ ಮೂಲಕ ಭಕ್ತರಿಗೆ ರೋಪ್ ವೇ, ರಸ್ತೆ ನಿರ್ಮಾಣ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು.
ಉದ್ಯೋಗ ಸೃಷ್ಟಿಗೆ ಒತ್ತು
ರಾಜ್ಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, 8,000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. 5 ಲಕ್ಷ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. 6 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ, 3 ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ. 8 ಬಂದರುಗಳ ಆಧುನೀಕರಣ, 02 ಬಂದರುಗಳ ವಿಸ್ತರಣೆ, ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
8 ಲಕ್ಷ ಕೋಟಿ ರೂ.ಹೂಡಿಕೆ ಈ ವರ್ಷ ಬರುವ ನಿರೀಕ್ಷೆ ಇದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಉದ್ಯೋಗಗಳು ಹರಿದುಬರಲಿವೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸುಭಿಕ್ಷ ಕರ್ನಾಟಕ ಕಟ್ಟಲು ಚಿಂತಿಸಬೇಕು
ಭಾರತದಲ್ಲಿ ಅತ್ಯಂತ ಸುಭಿಕ್ಷವಾಗಿದ್ದ ವಿಜಯನಗರ ಸಾಮ್ರಾಜ್ಯ ಇಲ್ಲಿಂದ ತಮಿಳುನಾಡಿನ ಕಾವೇರಿಯವರೆಗೆ ಹರಡಿತ್ತು. ಬಹಮನಿಯರನ್ನು ಹಿಮ್ಮೆಟ್ಟಿಸಿದ ಕೃಷ್ಣದೇವರಾಯನನ್ನು ನಂತರ ಮೋಸದಿಂದ ಗೆಲ್ಲಲಾಯಿತು. ಕನ್ನಡಿಗರಾಗಿ ನಾವು ಸುಭಿಕ್ಷ ಕರ್ನಾಟಕ ಕಟ್ಟಲು ಚಿಂತನೆ ಮಾಡಬೇಕು ಆಗ ಮಾತ್ರ ನಮಗೆ ಹಂಪಿಯ ಗತವೈಭವದ ಬಗ್ಗೆ ಮಾತನಾಡಲು ನೈತಿಕ ಹಕ್ಕಿರುತ್ತದೆ ಎಂದರು.
ನಾಡಿನ ಗತವೈಭವ ಬಿಂಬಿಸುವ ಉತ್ಸವ
ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ.
ಗತವೈಭವ ಬಿಂಬಿಸುವ ಸಡಗರ, ಸಂಭ್ರಮದ ಉತ್ಸವ ಹಂಪಿ ಉತ್ಸವವಾಗಿದೆ. ಎಂ.ಪಿ.ಪ್ರಕಾಶ್ ಅವರ ಕಾಲದಲ್ಲಿ ಹಂಪಿ ಉತ್ಸವ ಆರಂಭವಾಯಿತು. ಪ್ರಥಮ ಹಂಪಿ ಉತ್ಸವದಲ್ಲಿ ಪಾಲ್ಗೊಂಡ ನೆನಪನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡ ಸಿಎಂ ಬೊಮ್ಮಾಯಿ, ವಿಜೃಂಭಣೆಯಿಂದ ವೈಭವದ ಹಂಪಿ ಉತ್ಸವ ಆಚರಣೆಗೆ ಸಚಿವರಾದ ಆನಂದಸಿಂಗ್,ಶ್ರೀರಾಮುಲು ಕಾರಣೀಕರ್ತರು ಎಂದರು.
ವಿಜಯನಗರ ಸಾಮ್ರಾಜ್ಯದ ಪುಣ್ಯಭೂಮಿ ಈ ಪ್ರದೇಶ. ಬಹಳ ವೈಭವಾಯುತವಾಗಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದರು. ಕರ್ನಾಟಕದ ಗತವೈಭವ ಮತ್ತೊಮ್ಮೆ ಬಿಂಬಿಸುವ ಕಾರ್ಯಕ್ರಮ ಅದಾಗಿತ್ತು ಎಂದು ಸ್ಮರಿಸಿದರು. ನಮ್ಮ ಕಲೆ, ಸಂಸ್ಕೃತಿ, ಇತಿಹಾಸ ಬಿಂಬಿಸುವ ಕೆಲಸ ಈ ಮೂರು ದಿನಗಳು ನಡೆಯಲಿದೆ. ಹೊಸ ಜಿಲ್ಲೆಯದ ನಂತರ ಮೊದಲನೇ ಹಂಪಿ ಉತ್ಸವ ಇದಾಗಿದೆ ಎಂದರು.
ಸಚಿವರಾದ ಬಿ.ಶ್ರೀರಾಮುಲು, ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪರಣ್ಣ ಮನವಳ್ಳಿ, ಹುಡಾ ಅಧ್ಯಕ್ಷ ಅಶೋಕ್ ಜೀರೆ ಮತ್ತಿತರರು ಇದ್ದರು.