Belthangady News: ಧರ್ಮಸ್ಥಳ ಸಮೀಪವೇ ಮತ್ತೆ ಬಂದಿವೆ ಕಾಡಾನೆಗಳ ಹಿಂಡು: ಮುಂಡಾಜೆ ಅರಣ್ಯ ನರ್ಸರಿ ಧ್ವಂಸ
Sep 24, 2023 02:22 PM IST
ಧರ್ಮಸ್ಥಳ ಸಮೀಪದ ಮುಂಡಾಜೆ ಅರಣ್ಯ ನರ್ಸರಿಗೆ ನುಗ್ಗಿದ ಕಾಡಾನೆಗಳು ಸಸಿಗಳನ್ನು ಧ್ವಂಸ ಮಾಡಿವೆ.
- Elephants enter Forest nursery ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಸಮೀಪದ ಮುಂಡಾಜೆ ಅರಣ್ಯ ನರ್ಸರಿಗೆ ಆನೆಗಳ ಹಿಂಡು( Elephant Herd) ನುಗ್ಗಿ ಸಸಿ ನಾಶ ಮಾಡಿ ಹಾಕಿವೆ. ಇದು ಈ ಭಾಗದ ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಅರಣ್ಯ ಇಲಾಖೆ( Karnataka Forest Department) ಕ್ರಮ ವಹಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಜೋರಾಗಿದ್ದು, ಪ್ರವಾಸಿ ಹಾಗೂ ಧಾರ್ಮಿಕ ಸ್ಥಳ ಧರ್ಮಸ್ಥಳ ಸಮೀಪಕ್ಕೆ ಈ ವರ್ಷವೂ ಲಗ್ಗೆ ಇಟ್ಟಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವುದು ಕಂಡು ಬಂದಿದೆ.
ಇಲ್ಲಿ ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು,ಬಿದಿರು,ಗಾಳಿ,ಹೆಬ್ಬಲಸು,ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು, ತುಳಿದು ಸಂಪೂರ್ಣ ಧ್ವಂಸ ಮಾಡಿವೆ.
ಮರಿಯೊಂದಿಗೆ ಎರಡು ಆನೆ
ಒಂದ್ಯ ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಮಾಡಿವೆ. ಕಳೆದ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ ವರ್ಷವೂ ಈ ನರ್ಸರಿಗೆ ಕಾಡಾನೆಗಳು ದಾಳಿ ಇಟ್ಟು ಸಾವಿರಾರು ಗಿಡ ಹಾಗೂ ನರ್ಸರಿ ಸೊತ್ತುಗಳಿಗೆ ಹಾನಿ ಉಂಟುಮಾಡಿದ್ದವು
ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 20 ಕಿ.ಮೀ.ಅಂತರದಲ್ಲಿದೆ. ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ.
ಸುಮಾರು ಹದಿನೈದು ದಿನಗಳಿಂದ ತಾಲೂಕಿನ ಒಂದಲ್ಲ ಒಂದು ಕಡೆ ಕಾಡಾನೆಗಳ ಉಪಟಳ ನಿರಂತರವಾಗಿ ನಡೆಯುತ್ತಿದೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಸಿಬ್ಬಂದಿ ಸದಾನಂದ, ಉಮೇಶ್ ನರ್ಸರಿ ವಾಚರ್ ಭೇಟಿ ನೀಡಿ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಗೆ ಮಾಹಿತಿ ನೀಡಿದ್ದಾರೆ.
ನಾಡಿಗೆ ಬರುತ್ತಿರುವ ಕಾಡಾನೆ
ದ.ಕ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಲ್ಲಿ ಕಾಡಾನೆ ದಾಳಿ ಮಿತಿ ಮೀರಿದೆ. ಕಾಡಾನೆ ದಾಳಿಯಿಂದ ಕೃಷಿಕರು, ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಕೃಷಿ ತೋಟಗಳಿಗೆ ದಾಳಿ ಮಾಡುವುದರ ಜಗೆ ಜನರ ಮೇಲೂ ದಾಳಿಯಾಗುತ್ತಿವೆ. ಜನವಸತಿ ಪ್ರದೇಶಗಳತ್ತ ಬರುತ್ತಿರುವ ಕಾಡಾನೆಗಳು ಜನರನ್ನು ಭೀತಿಗೆ ತಳ್ಳುತ್ತಿವೆ. ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ದಂಡು ಇದೀಗ ಹಗಲಲ್ಲೇ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು, ಭೀತಿ ತಂದೊಡ್ಡಿದೆ. ಹಲವು ತೋಟಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೃಷಿ ನಾಶಕ್ಕೆ ಕಾರಣವಾಗಿರುವ ಕಾಡಾನೆಗಳ ಕಾಟಕ್ಕೆ ಅಂಕುಶ ಹಾಕಬೇಕಾದ ಅಗತ್ಯವಿದೆ ಎನ್ನುವುದು ಸ್ಥಳೀಯರ ಆಗ್ರಹ.
ಆನೆ ಮಾರ್ಗಕ್ಕೆ ಅಡ್ಡಿ
ಆನೆಗಳು ತಿರುಗಾಡುವ ದಾರಿ ಕಾಡಿನಲ್ಲಿ ಮುಚ್ಚಿಹೋಗಿದ್ದು, ಒಮ್ಮೆ ಒಂದು ಕಡೆ ಬಂದ ಆನೆಗಳು ಮತ್ತೆ ಹಿಂದಿರುಗಿ ತಮ್ಮ ಮೂಲ ನೆಲೆ ತಲುಪಲು ಸಾಧ್ಯವಾಗುತ್ತಿಲ್ಲ. ಕಾಡಿನಲ್ಲಿ ಉಂಟಾಗುವ ಬೆಂಕಿ ಅನಾಹುತಗಳು ಕೂಡ ಆನೆಗಳು ನಾಡಿಗೆ ಇಳಿಯಲು ಕಾರಣವಾಗುತ್ತಿದೆ. ಕಾಡಿನಲ್ಲಿರುವ ಕೆರೆಗಳ ನಿರ್ವಹಣೆ ಇಲ್ಲದೆ ಹೂಳು ತುಂಬಿ ಮುಚ್ಚಿಹೋಗಿದೆ.
ನೀರನ್ನು ಅರಸಿ ನದಿ ಪ್ರದೇಶ ಹುಡುಕಿ ಬರುವ ಕಾಡಾನೆಗಳು ಅಗತ್ಯ ಆಹಾರಕ್ಕೆ ಕೃಷಿ ತೋಟಗಳನ್ನು ಆಕ್ರಮಿಸುತ್ತಿವೆ. ಅನಧಿಕೃತವಾಗಿ ಬೇಟೆಗೆ ತೆರಳುವ ಮಂದಿ ಕಾಡಿನಲ್ಲಿ ಸ್ಫೋಟಕಗಳನ್ನು ಸಿಡಿಸುವ ಸಮಯದಲ್ಲಿ ಆನೆಗಳ ಗುಂಪು ದಿಕ್ಕಾಪಾಲಾಗಿ ಜನವಸತಿ ಪ್ರದೇಶಗಳತ್ತ ಮುಖ ಮಾಡುತ್ತಿದೆ.
ಕ್ರಮಕ್ಕೆ ಆಗ್ರಹ
ಬೆಳ್ತಂಗಡಿ ತಾಲೂಕಿನ ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಶಿಶಿಲ, ನಿಡ್ಲೆ, ಶಿಬಾಜೆ, ಹತ್ಯಡ್ಕ ಹಾಗೂ ಸುಳ್ಯ ತಾಲೂಕಿನ ಸಂಪಾಜೆ, ಆಲೆಟ್ಟಿ, ಮಂಡೆಕೋಲು, ಅಜ್ಜಾವರ, ಕೊಲ್ಲಮೊಗ್ರು, ಹರಿಹರ ಪಲ್ಲತಡ್ಕ, ಅರಂತೋಡು, ತೊಡಿಕಾನ, ಮರ್ಕಂಜ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಪ್ರದೇಶದ ಜನರು ಭೀತಿ ಎದುರಿಸುತ್ತಿದ್ದಾರೆ.
ಸ್ಥಳೀಯರ ಜತೆಗೆ ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರೂ ಇರುವುದರಿಂದ ಕಾಡಾನೆಗಳು ಇತ್ತ ಬಾರದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.