Dakshina Kannada News: ಧರ್ಮಸ್ಥಳದಿಂದ ಪಾಕಿಸ್ತಾನಕ್ಕೆ ಉತ್ಸಾಹಿ ಯುವಕರ ಜರ್ನಿ; 6,400 ಕಿಮೀ ದೂರ ಕಾರಿನಲ್ಲಿಯೇ ಪ್ರಯಾಣ
Aug 05, 2023 04:30 PM IST
ಧರ್ಮಸ್ಥಳದಿಂದ ಪಾಕಿಸ್ತಾನಕ್ಕೆ ಉತ್ಸಾಹಿ ಯುವಕರ ಜರ್ನಿ; 6,400 ಕಿಮೀ ದೂರ ಕಾರಿನಲ್ಲಿಯೇ ಪ್ರಯಾಣ
- Mangaluru: ಪಾಕಿಸ್ತಾನದ ಹೆಸರು ಕೇಳಿದಾಗಲೇ ಒಂದ್ಸಲ ಎದೆ ಝಲ್ ಎನ್ನುತ್ತದೆ. ಆದರೆ ಈ ಯುವಕರು ಪ್ರಯಾಣದಲ್ಲಿಯೇ ಭಾರತದ ಗಡಿ ದಾಟಿ ಪಾಕಿಸ್ತಾನದ ನೆಲಕ್ಕೆ ಹೋಗಿ ಬಂದಿದ್ದಾರೆ. ಚೇತನ್ ದೊಂಡೋಲೆ ಹಾಗೂ ಪ್ರದೀಪ್ ಚಿಕ್ಕಮಗಳೂರು ಪಾಕಿಸ್ತಾನಕ್ಕೆ ಹೋಗಿಬಂದಿರುವವರು.
ಮಂಗಳೂರು: ರಾಜ್ಯದೆಲ್ಲೆಡೆಯಿಂದ ಎಲ್ಲರೂ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಯಾತ್ರಾರ್ಥಿಗಳಾಗಿ ಬರುತ್ತಾರೆ. ಆದರೆ ಉತ್ಸಾಹಿ ಯುವಕರಿಬ್ಬರು ಧರ್ಮಸ್ಥಳದಿಂದ ಲಾಂಗ್ ಜರ್ನಿ ಹೊರಟು ಪಾಕಿಸ್ತಾನದ ನೆಲವನ್ನು ಮೆಟ್ಟಿ ಬಂದಿದ್ದಾರೆ.
ಪಾಕಿಸ್ತಾನದ ಹೆಸರು ಕೇಳಿದಾಗಲೇ ಒಂದ್ಸಲ ಎದೆ ಝಲ್ ಎನ್ನುತ್ತದೆ. ಆದರೆ ಈ ಯುವಕರು ಪ್ರಯಾಣದಲ್ಲಿಯೇ ಭಾರತದ ಗಡಿ ದಾಟಿ ಪಾಕಿಸ್ತಾನದ ನೆಲಕ್ಕೆ ಹೋಗಿ ಬಂದಿದ್ದಾರೆ. ಚೇತನ್ ದೊಂಡೋಲೆ ಹಾಗೂ ಪ್ರದೀಪ್ ಚಿಕ್ಕಮಗಳೂರು ಪಾಕಿಸ್ತಾನಕ್ಕೆ ಹೋಗಿಬಂದಿರುವವರು. ಚೇತನ್ ಧರ್ಮಸ್ಥಳದ ದೋಂಡೋಲೆಯವರು. ವೃತ್ತಿಯಲ್ಲಿ ನೇತ್ರಾವತಿ ಪವರ್ ಪಾಯಿಂಟ್ ನಲ್ಲಿ ಇಲೆಕ್ಟ್ರಿಷನ್ ಆಗಿರುವ ಇವರು ಪಾರ್ಟ್ ಟೈಮ್ ಆಟೊಚಾಲಕರೂ ಹೌದು. ಚೇತನ್ ದೊಂಡೊಲೆ ಸ್ನೇಹಿತ ಎನ್ಎಂಸಿ ಕಂಪೆನಿಯಲ್ಲಿ ಲೀಡ್ ಆಗಿ ವೃತ್ತಿನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರಿನ ಪ್ರದೀಪ್ ಟ್ರೆಕ್ಕಿಂಗ್, ಟ್ರಾವೆಲಿಂಗ್ ಹವ್ಯಾಸವುಳ್ಳವರು. ಈ ಊರು ಸುತ್ತಾಟದ ಪ್ರವೃತ್ತಿ ಅವರನ್ನು ಪಾಕಿಸ್ತಾನದವರೆಗೆ ಕರೆದೊಯ್ದಿದೆ.
ಬೈಕ್ ರೈಡಿಂಗ್ ಮಾಡುತ್ತಿದ್ದ ಪ್ರದೀಪ್ ಬಳಿಕ ಕಾರು ಖರೀದಿಸಿದ್ದಾರೆ. ಅಲ್ಲಿಂದ ಪ್ರದೀಪ್ ಜೊತೆಗೆ ಚೇತನ್ ದೊಂಡೊಲೆ ಸೇರಿದ್ದಾರೆ. ಇವರು ಉತ್ತರಭಾರತದ ಬಹಳಷ್ಟು ಪ್ರದೇಶಗಳನ್ನು ಕಾರಿನಲ್ಲಿಯೇ ಸುತ್ತಾಡಿದ್ದಾರೆ. ಇದೀಗ ಕಾರಿನಲ್ಲಿಯೇ ಪಾಕ್ ನೆಲವನ್ನು ಮುಟ್ಟಿ ಬಂದಿದ್ದಾರೆ. ಪಾಕಿಸ್ತಾನದ ಕರ್ತರ್ ಪುರ ಕಾರಿಡಾರ್ ನ ಗುರುದ್ವಾರಕ್ಕೆ ಹೋಗಲು ಸರಕಾರ2018ರಲ್ಲಿ ಹೊಸ ವೆಬ್ ಸೈಟ್ ಮೂಲಕ ವೀಸಾ ಇಲ್ಲದೆ ಹೋಗಲು ಅವಕಾಶ ನೀಡಿತ್ತು. ಆದ್ದರಿಂದ ಜುಲೈ 6ರಂದು ಧರ್ಮಸ್ಥಳದಿಂದ 6,400 ಕಿ.ಮೀ. ಕಾರಿನಲ್ಲಿಯೇ ಪ್ರಯಾಣ ಮಾಡಿ ಇವರು ಜು.14ರಂದು ಗುರುದ್ವಾರ ತಲುಪಿದ್ದಾರೆ. ದಾರಿಯಲ್ಲಿ ಮಳೆ, ಗಾಳಿ, ಪ್ರವಾಹವನ್ನು ಲೆಕ್ಕಿಸದೆ ಈ ಪ್ರಯಾಣ ಮಾಡಿದ್ದಾರೆ.
ಕರ್ತರ್ ಪುರದಲ್ಲಿರುವ ಗುರುನಾನಕ್ ಮಂದಿರ ಸಿಖ್ ಹಾಗೂ ಮುಸ್ಲಿಂ ಸಮುದಾಯದ ಪವಿತ್ರ ಸ್ಥಳ. ಇದು ಗುರುನಾನಕ್ ಅವರು ದೇಹಾಂತ್ಯ ಮಾಡಿರುವ ಸ್ಥಳ. ಇಲ್ಲಿ ಅವರು ತೋಡಿರುವ ಬಾವಿ ಈಗಲೂ ಇದೆ. ಅದರ ಭರ್ತಿ ನೀರು ಈಗಲೂ ಇದೆ. ಅಲ್ಲದೆ ಇಂಡಿಯನ್ ಆರ್ಮಿ ಈ ಮಂದಿರಕ್ಕೆ ಹಾಕಿರುವ ಬಾಂಬ್ ಸಿಡಿಯಲಿಲ್ಲ. ಆದ್ದರಿಂದ ಈಗಲೂ ಈ ಬಾಂಬ್ ಅನ್ನು ಶೇಖರಿಸಲಾಗಿದೆ. ದೇಶ ವಿಭಜನೆಯ ಬಳಿಕ ಪಂಜಾಬ್ ಪ್ರಾಂತ್ಯದ ಈ ಪ್ರದೇಶ. ಪಾಕಿಸ್ತಾನಕ್ಕೆ ಸೇರಿತ್ತು. ಬಳಿಕ ಆ ಸ್ಥಳಕ್ಕೆ ಭಾರತೀಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಇದೀಗ ಅಲ್ಲಿಗೆ ಭೇಟಿ ನೀಡುವ ಅವಕಾಶವನ್ನು ಸರ್ಕಾರ ಕಲ್ಪಿಸಲಾಗಿದ್ದು ಅನೇಕ ಸಿಖ್, ಹಿಂದೂ, ಮುಸ್ಲಿಂ ಸಮುದಾಯದವರು ಭೇಟಿ ನೀಡುತ್ತಿದ್ದಾರೆ.
ಪಾಕಿಸ್ತಾನ ಗಡಿ ಪ್ರವೇಶಕ್ಕಿಂತ ಮೊದಲು ಕೋವಿಡ್ ತಪಾಸಣೆಯೊಂದಿಗೆ ಪೋಲಿಯೊ ಲಸಿಕೆ ನೀಡುತ್ತಾರೆ. ಗಡಿಯಿಂದ ಪಾಕ್ ಗೆ ಹೋಗಬೇಕಾದರೆ ಭಾರತಕ್ಕೆ ಸಂಭಂದಿಸಿದ ಯಾವುದೇ ಧ್ವಜ, ಕೀ-ಪಂಚ್, ಹಾಗೂ ಮಾರಕಾಯುಧಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
ಪಾಕಿಸ್ತಾನದಿಂದ ಮರಳಿ ಬರುವಾಗಲೂ ಪಾಕಿಸ್ತಾನದ ಮಣ್ಣು, ಅಲ್ಲಿನ ವಸ್ತುಗಳು ತರುವಂತಿಲ್ಲ. ಕೇವಲ ಸಿಹಿತಿಂಡಿಗಳನ್ನು ಮಾತ್ರ ತರಲು ಅವಕಾಶ ಇದೆ.
ಪಾಕಿಸ್ತಾನಿ ಜನರು ಒಳ್ಳೆಯ ರೀತಿಯಲ್ಲಿ ಸ್ವಂದಿಸಿದ್ದು, ದಕ್ಷಿಣ ಭಾರತೀಯರನ್ನು ಕಂಡರೆ ಅಲ್ಲಿಯವರಿಗೆ ಅಚ್ಚುಮೆಚ್ಚು. ಇವರೊಂದಿಗೆ ಸೆಲ್ಪಿಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದವರೆಂದು ತಿಳಿದ ತಕ್ಷಣ ಪಾಕ್ ಸೈನಿಕರು ಹಿಜಾಬ್ ವಿವಾದದ ಬಗ್ಗೆ ಇವರಲ್ಲಿ ಕೇಳಿದ್ದರು. ಒಟ್ಟಿನಲ್ಲಿ ಕರಾವಳಿಯಿಂದ ಈ ಯುವಕರು ಸದ್ದಿಲ್ಲದೆ ಪಾಕ್ ಜರ್ನಿ ಮಾಡಿದ್ದು, ಅಲ್ಲಿ ತುಳುಭಾಷೆಯಲ್ಲಿ ಮಾತನಾಡಿದ್ದಾರೆ.