Karnataka Budget 2023: ಮುಜರಾಯಿ ಇಲಾಖೆಗೆ ಬಜೆಟ್ನಲ್ಲಿ 1,000 ಕೋಟಿ ರೂಪಾಯಿ ಮೀಸಲು, ಶಶಿಕಲಾ ಜೊಲ್ಲೆ ಹರ್ಷ
Feb 17, 2023 04:15 PM IST
Karnataka Budget 2023: ಮುಜರಾಯಿ ಇಲಾಖೆಗೆ ಬಜೆಟ್ನಲ್ಲಿ 1,000 ಕೋಟಿ ರೂಪಾಯಿ ಮೀಸಲು, ಶಶಿಕಲಾ ಜೊಲ್ಲೆ ಹರ್ಷ
- Karnataka Budget: ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಐತಿಹಾಸಿಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಮುಜರಾಯಿ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ಅವರು ಬಣ್ಣಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಸಾಲಿನ ಬಜೆಟ್ ಕುರಿತು ಹಲವು ಪ್ರತಿಕ್ರಿಯೆಗಳು ಬರುತ್ತಿವೆ. ಸಹಜವಾಗಿ ಬಿಜೆಪಿ ಸರಕಾರದ ಸಚಿವರು, ಮಂತ್ರಿಗಳು ಇದು ಅತ್ಯುತ್ತಮ ಬಜೆಟ್ ಎಂದಿದ್ದಾರೆ. ವಿರೋಧ ಪಕ್ಷ, ಇತರೆ ಪಕ್ಷಗಳ ನಾಯಕರು, ರಾಜಕಾರಣಿಗಳು ಬಜೆಟ್ ಅನ್ನು ಟೀಕಿಸುತ್ತಿದ್ದಾರೆ. ಇದೀಗ ರಾಜ್ಯ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಈ ಬಜೆಟ್ನಲ್ಲಿ ಮುಜರಾಯಿ ಇಲಾಖೆಗೆ ನೀಡಿದ ಅನುದಾನದ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಜರಾಯಿ ಇಲಾಖೆ ಮತ್ತು ಮಹಿಳಾ ಕಲ್ಯಾಣಕ್ಕೆ ದಾಖಲೆಯ ಅನುದಾನ ನೀಡುವ ಮೂಲಕ ಹಣಕಾಸು ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಐತಿಹಾಸಿಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಮುಜರಾಯಿ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ಅವರು ಬಣ್ಣಿಸಿದ್ದಾರೆ.
ಮುಜರಾಯಿ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ 1,000 ಕೋಟಿ ರೂಪಾಯಿ ಮೀಸಲಿಟ್ಟಿರುವುದರಿಂದ ರಾಜ್ಯದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಗೆ ಸಹಕಾರಿಯಾಗಲಿದೆ. ಈ ದೊಡ್ಡ ಪ್ರಮಾಣದ ಅನುದಾನದಿಂದಾಗಿ ದೇವಸ್ಥಾನಗಳು ಮತ್ತು ಮಠಗಳ ಕಾಯಕಲ್ಪಕ್ಕೆ ವೇಗ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವದ ಮೊದಲ ಸಂಸತ್ತೆನಿಸಿದ ಅನುಭವ ಮಂಟಪದ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದರ ಕಾಮಗಾರಿ ಭರದಿಂದ ಸಾಗಿದ್ದು, ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಹಿಂದು ಧಾರ್ಮಿಕ ಭೂಮಿಗಳ ವರ್ಷಾಸನವನ್ನು 48,000 ರೂಪಾಯಿಯಿಂದ 60,000 ರೂಪಾಯಿವರೆಗೆ ಹೆಚ್ಚಳ ಮಾಡಿರುವುದರಿಂದ ರಾಜ್ಯದ 3721 ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಹಿಳೆಯರ ಸಬಲೀಕರಣಕ್ಕೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ಮಹಿಳಾ ಕಾರ್ಮಿಕರಿಗೆ 500 ರೂ. ಮಾಸಾಶನ, ರೈತರಿಗೆ ʼಭೂ ಸಿರಿ’ ಯೋಜನೆ ಸೇರಿದಂತೆ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಕಟಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಸ್ನೇಹಿ ಬಜೆಟ್ ಅನ್ನು ನೀಡಿದ್ದಾರೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸರ್ವಜನಪರ ಬಜೆಟ್ ಎಂದ ಸಚಿವ ಅಶ್ವತ್ಥ್ ನಾರಾಯಣ
ಉಳಿತಾಯ ಬಜೆಟ್ ಅನ್ನು ಮಂಡಿಸುವ ಮೂಲಕ ಕರ್ನಾಟಕವನ್ನು ಆರ್ಥಿಕವಾಗಿ ಸ್ವಾವಲಂಬಿ ರಾಜ್ಯವಾಗಿ ಪರಿವರ್ತಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ವಜನಪರ ಬಜೆಟ್ ಅನ್ನು ಮಂಡಿಸಿ ಸರ್ವೇ ಜನಾಃ ಸುಖಿನೋ ಭವಂತು ಎಂಬ ತತ್ವದಲ್ಲಿ ನಮ್ಮ ಪಕ್ಷಕ್ಕೆ ನಂಬಿಕೆ ಇರುವುದನ್ನು ಸಾದರ ಪಡಿಸಿದ್ದಾರೆ ಎಂದು ಡಾ. ಸಿಎನ್ ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.
ಐಐಟಿ ಮಾದರಿ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹಲವು ನವೀನ ಯೋಜನೆಗಳನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿ ಅವುಗಳಿಗೆ ಅನುದಾನ ಒದಗಿಸುವ ಮೂಲಕ ಮುಖ್ಯಮಂತ್ರಿಗಳಾದ ಮಾನ್ಯ ಬಸವರಾಜ ಬೊಮ್ಮಾಯಿಯವರು ಉನ್ನತ ಶಿಕ್ಷಣದಲ್ಲಿ ಹಿಂದೆ ಎಂದೂ ಇಲ್ಲದ ದಾಪುಗಾಲಿನ ಪ್ರಗತಿ ಸಾಧಿಸಲು ಮತ್ತು ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಗೆ ವೇದಿಕೆ ಸೃಷ್ಟಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.