Swadesh Darshan Scheme: ಸ್ವದೇಶ್ ದರ್ಶನ್ ಯೋಜನೆಯಲ್ಲಿ ಮೈಸೂರು ಹಾಗೂ ಹಂಪಿ ಸೇರ್ಪಡೆ, ರಾಜ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ
Jan 05, 2023 07:57 PM IST
Swadesh Darshan Scheme: ಸ್ವದೇಶ್ ದರ್ಶನ್ ಯೋಜನೆಯಲ್ಲಿ ಮೈಸೂರು ಹಾಗೂ ಹಂಪಿ ಸೇರ್ಪಡೆ
- ಕೇಂದ್ರ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ವತಿಯಿಂದ ಪ್ರಾರಂಭಿಸಲಾದ ಸ್ವದೇಶ ದರ್ಶನ್ 2.0 ಯೋಜನೆಯಲ್ಲಿ ರಾಜ್ಯದ ಹಂಪಿ ಹಾಗೂ ಮೈಸೂರು ಸೇರ್ಪಡೆಯಾಗಿದೆ.
ಬೆಂಗಳೂರು: ಕೇಂದ್ರ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ವತಿಯಿಂದ ಪ್ರಾರಂಭಿಸಲಾದ ಸ್ವದೇಶ ದರ್ಶನ್ 2.0 ಯೋಜನೆಯಲ್ಲಿ ರಾಜ್ಯದ ಹಂಪಿ ಹಾಗೂ ಮೈಸೂರು ಸೇರ್ಪಡೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವೆ ಶಶಿಕಲಾ ಅ ಜೊಲ್ಲೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2014-15 ರಲ್ಲಿ ಪ್ರಾರಂಭಿಸಿದ ಕೇಂದ್ರ ವಲಯದ ಯೋಜನೆಯಾದ ಸ್ವದೇಶ್ ದರ್ಶನ್ 2.0 ಯೋಜನೆಯಲ್ಲಿ ಹಂಪಿ ಮತ್ತು ಮೈಸೂರು ಸೇರಿರುವುದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ, ಇದು ಪ್ರವಾಸೋದ್ಯಮ ಮತ್ತು ಥೀಮ್ ಆಧಾರಿತ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಸ್ವದೇಶ ದರ್ಶನ್ 2.0 ಯೋಜನೆಯಲ್ಲಿ ರಾಜ್ಯದ ಹಂಪಿ ಹಾಗೂ ಮೈಸೂರು ಸೇರ್ಪಡೆಯಾಗಿರುವದರ ಬಗ್ಗೆ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ, ಹಜ್ ಮತ್ತು ವಕ್ಪ್ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಸಂತಸ ವ್ಯಕ್ತಪಡಿಸಿದ್ದಾರೆ.
ಸ್ವದೇಶ್ ದರ್ಶನ್ ಯೋಜನೆಯು ಕೇಂದ್ರೀಯ ವಲಯದ ಯೋಜನೆಯಾಗಿದ್ದು 2014-15 ರಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರವು ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್ಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯು ಭಾರತದಲ್ಲಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಉತ್ತೇಜಿಸಲು, ಅಭಿವೃದ್ಧಿಪಡಿಸಲು ಮತ್ತು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಸಚಿವಾಲಯವು ಕೇಂದ್ರ ಹಣಕಾಸು ನೆರವನ್ನು ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಸರ್ಕ್ಯೂಟ್ಗಳ ಮೂಲಸೌಕರ್ಯ ಅಭಿವೃದ್ಧಿಗೆ ಒದಗಿಸುತ್ತದೆ.
ಇದರಿಂದಾಗಿ ಆಯಾ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪ್ರೇರಕ ಶಕ್ತಿ, ವಿವಿಧ ಕ್ಷೇತ್ರಗಳೊಂದಿಗೆ ಸಿನರ್ಜಿ ನಿರ್ಮಿಸಲು ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರಮುಖವಾಗಿರಿಸುವ ಕಲ್ಪನೆಯೊಂದಿಗೆ ಸ್ವಚ್ಛ ಭಾರತ ಅಭಿಯಾನ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮುಂತಾದ ಇತರ ಯೋಜನೆಗಳೊಂದಿಗೆ ಸಂಯೋಜಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಆಯಾ ನಗರಗಳಲ್ಲಿ ಪ್ರವಾಸೋದ್ಯಮವನ್ನ ಉತ್ತೇಜಿಸಲು ಹಾಗೂ ಅಭಿವೃದ್ದಿಗೊಳಿಸಲು ಇದು ಬಹಳ ಅನುಕೂಲವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಹಂಪಿ ಹಾಗೂ ಮೈಸೂರು ನಗರಗಳು ಇನ್ನಷ್ಟು ಅಭಿವೃದ್ದಿಯನ್ನು ಹೊಂದಲಿವೆ ಎಂದು ಅವರು ಹೇಳಿದ್ದಾರೆ.
ಸ್ವದೇಶ್ ದರ್ಶನ್ ಯೋಜನೆಯು ದೇಶದ ಪ್ರವಾಸೋದ್ಯಮ ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲಾಗಿದೆ. ಭಾರತದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂಖ್ಯೆಗೆ ಕೊರತೆಯಿಲ್ಲ. ಹೀಗಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿದೆ. ವಿಭಿನ್ನ ವಿಷಯದ ಪ್ರವಾಸಿ ಸರ್ಕ್ಯೂಟ್ಗಳನ್ನು ಸಂಯೋಜಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಕನಿಷ್ಠ ಮೂರು ಪ್ರಮುಖ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಮಾರ್ಗಕ್ಕೆ ಪ್ರವಾಸಿ ಸರ್ಕ್ಯೂಟ್ ಎಂದು ಕರೆಯಲಾಗುತ್ತದೆ. ಪ್ರವಾಸಿಗರು ಆರಾಮದಾಯಕ ಪ್ರಯಾಣ ಮತ್ತು ಪ್ರವಾಸಿ ಸ್ಥಳದ ಆಕರ್ಷಣೆಯನ್ನು ಆನಂದಿಸಬಹುದು. ಸರ್ಕ್ಯೂಟ್ ಒಂದು ರಾಜ್ಯಕ್ಕೆ ಸೀಮಿತವಾಗಿರಬಹುದು ಅಥವಾ ಹಲವಾರು ರಾಜ್ಯಗಳಿಗೆ ವಿಸ್ತರಿಸಬಹುದು. ಈಗ ಹಂಪಿ ಮತ್ತು ಮೈಸೂರು ಇಂತಹ ಸರ್ಕ್ಯೂಟ್ಗೆ ಸೇರಿದೆ.