Karnataka Rains: ಬೆಂಗಳೂರು ಸಹಿತ ಎಲ್ಲೆಡೆ ಗಣೇಶನ ಹಬ್ಬಕ್ಕೆ ಮಳೆ ಬಿಡುವು: ಕರಾವಳಿಯಲ್ಲಿ ಮಾತ್ರ ಭಾರೀ ಮಳೆ ಮುನ್ನೆಚ್ಚರಿಕೆ
Sep 17, 2023 11:11 AM IST
ಉತ್ತಮ ಮಳೆಯಿಂದಾಗಿ ಚಿಕ್ಕ ಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹೇರೂರು ಗ್ರಾ.ಪಂ ವ್ಯಾಪ್ತಿಯ ನರೇಗಾ ಯೋಜನೆಯಡಿ ನಿರ್ಮಾಣ ಮಾಡಲಾದ ಕೃಷಿಹೊಂಡ ಭರ್ತಿಯಾಗಿದೆ.
- Karnataka rains Ganeshotsav time ಕರ್ನಾಟಕದಲ್ಲಿ ಮಳೆ ವಾತಾವರಣ ಕಡಿಮೆಯಾಗಿದೆ. ಹಾಗೆಂದು ಗಣೇಶನ ಹಬ್ಬಕ್ಕೆ ಮಳೆ ಬಿಡುವು ಕೊಡಬಹುದು. ಕರಾವಳಿ ಭಾಗದಲ್ಲಿ ಮಂಗಳವಾರ ಹಬ್ಬ ಇರುವುದರಿಂದ ಅಂದು ಮಳೆ ಪ್ರಮಾಣ ಕಡಿಮೆಯೇ ಇದೆ ಎಂದು ಭಾರತೀಯ ಹಮಾಮಾನ ಇಲಾಖೆ( IMD) ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ಮಳೆಯ ವಾತಾವರಣವೇ ಕರ್ನಾಟಕದ ಬಹುತೇಕ ಕಡೆಯಿದೆ. ಕರ್ನಾಟಕದಲ್ಲಿ ಸೋಮವಾರವೇ ಹಬ್ಬ ಆಚರಿಸಲಾಗುತ್ತಿದೆ. ಆದರೆ ಕರಾವಳಿಯಲ್ಲಿ ಈ ಬಾರಿ ಮಂಗಳವಾರ ಗೌರಿ ಹಾಗೂ ಗಣೇಶ ಹಬ್ಬವಿದ್ದು, ಈ ವೇಳೆಯೂ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ.
ಅಂದರೆ ಹಬ್ಬದ ವೇಳೆ ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಕೊಂಚಬಿಡುವು ಸಿಗಲಿದೆ. ಆದರೆ ಕರಾವಳಿ ಭಾಗದಲ್ಲಿ ಮಾತ್ರ ಮುಂದಿನ ಎರಡು ದಿನವೂ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ( IMD) ನೀಡಿದೆ.
ಈ ನಡುವೆ ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಶನಿವಾರದಂದು ಧರ್ಮಸ್ಥಳ ಸೇರಿದಂತೆ ಬಹುತೇಕ ಕಡೆ ಭಾರೀ ಮಳೆಯೇ ಆಗಿದೆ. ಭಾನುವಾರ ಬೆಳಿಗ್ಗೆಯಿಂದಲೂ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಮುಂದುವರಿಸಿದೆ.
ಕರಾವಳಿಯಲ್ಲಿ ಮಳೆಯಬ್ಬರ
ನೈರುತ್ಯ ಮುಂಗಾರು ಕರಾವಳಿಯಲ್ಲಿ ಶನಿವಾರ ಚುರುಕಾಗಿದ್ದುದು ಕಂಡು ಬಂದಿದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಮುಂಗಾರು ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಸಾಮಾನ್ಯವಾಗಿತ್ತು. ಕರಾವಳಿಯಲ್ಲಿ ಮಳೆ ವ್ಯಾಪಕವಾಗಿದ್ದರೆ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಳೆ ಧರ್ಮಸ್ಥಳದಲ್ಲಿ ಅಂದರೆ 140 ಮಿ.ಮೀ ನಷ್ಟು ದಾಖಲಾಗಿದೆ. ಚಿಕ್ಕಮಗಳೂರಿನ ಕೊಟ್ಟಿಗೆ ಹಾರದಲ್ಲೂ ಭಾರೀ ಮಳೆಯಾದ ವರದಿಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಉಡುಪಿ ಜಿಲ್ಲೆಯ ಕೊಲ್ಲೂರು, ಧರ್ಮ ಸ್ಥಳ ಸಮೀಪದ ಬೆಳ್ತಂಗಡಿ,ಪಣಂಬೂರು, ಕೊಡಗಿನ ಭಾಗಮಂಡಲದಲ್ಲೂ ಭಾರೀ ಮಳೆಯಾಗಿದೆ.
ದಕ್ಷಿಣ ಕನ್ನಡದ ಉಪ್ಪಿನಂಗಡಿ, ಪುತ್ತೂರು, ಮಾಣಿ, ಸುಳ್ಯ, ಮುಲ್ಕಿ, ಕೊಡಗಿನ ವೀರಾಜಪೇಟೆ, ನಾಪೊಕ್ಲು, ಪೊನ್ನಂಪೇಟೆ, ಉತ್ತರ ಕನ್ನಡದ ಗೇರುಸೊಪ್ಪ, ಹೊನ್ನಾವರ, ಅಂಕೋಲಾ, ಕಾರವಾರ, ಬೇಲಿಕೇರಿ, ಕದ್ರಾ, ಮಂಕಿ, ಗೋಕರ್ಣ, ಯಲ್ಲಾಪುರ, ಮಂಚಿಕೆರೆಯಲ್ಲೂ ಮಳೆಯಾಗಿದೆ. \
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಾಳೆಹೊನ್ನೂರು, ಜಯಪುರ, ಕಳಸ, ಶೃಂಗೇರಿ, ಹಾಸನ ನಗರ, ಸಕಲೇಶಪುರ, ಉಡುಪಿ ಜಿಲ್ಲೆಯ ಸಿದ್ದಾಪುರ, ಕುಂದಾಪುರ, ಉಡುಪಿ, ಕಾರ್ಕಳ, ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ, ಹುಂಚದಕಟ್ಟೆ, ತಾಳಗುಪ್ಪ, ಬೆಳಗಾವಿ ಜಿಲ್ಲೆಯ ಲೋಂಡಾ, ಕೋಲಾರ ಜಿಲ್ಲೆಯ ರಾಯಲ್ಪಾಡು. ಕೊಪ್ಪಳ ಜಿಲ್ಲೆಯ ಗಂಗಾವತಿ, ಚಿಕ್ಕಬಳ್ಳಾಪುರದಲ್ಲಿ ಮಳೆಯಾದ ವರದಿಯಾಗಿದೆ.
ಯಾವ ಜಿಲ್ಲೆಯಲ್ಲಿಎಷ್ಟು ಮಳೆ
ಕರ್ನಾಟಕದಲ್ಲಿ ಉಡುಪಿಯಲ್ಲಿ102.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಮಿ.ಮೀ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 76 ಮಿ.ಮೀ. ಕೋಲಾರ ಜಿಲ್ಲೆಯಲ್ಲಿ 55.5 ಮಿ.ಮೀ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 54 ಮೀ.ಮಿ ಮಳೆಯಾಗಿದೆ. ಬೆಂಗಳೂರು ನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 38 ಸೆ.ಮೀನಷ್ಟು ಮಳೆಯಾಗಿದೆ.
ಕೊಡಗಲ್ಲಿ ಮುನ್ನೆಚ್ಚರಿಕೆ
ಮುಂದಿನ ಇಪ್ಪತ್ತಾಲ್ಕು ಗಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಇದಲ್ಲದೇ ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಎರಡೂ ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು. ಬಹಳಷ್ಟು ಕಡೆ ಮೋಡ ಕವಿದ ವಾತಾವರಣವಿದೆ.
ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಅಧಿಕವಾಗಿದೆ. ಬಿರುಗಾಳಿಯೂ ಪ್ರತಿ ಗಂಟೆಗೆ 30-40 ಕಿ.ಮಿ. ವೇಗದಲ್ಲಿ ಸಂಚರಿಸುವ ಸಾಧ್ಯತೆಯಿದೆ.
ಮೀನುಗಾರರಿಗೆ ಸೂಚನೆ
ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಅಧಿಕವಾಗಿರಲಿದೆ. ಗಾಳಿಯು ಗಂಟೆಗೆ 40-45 ರಿಂದ 55 ಕಿ.ಮಿ. ವೇಗದಲ್ಲಿ ಸಂಚರಿಸಲಿದೆ. ಗಾಳಿಯ ವೇಗದಿಂದ ಅಲೆಯ ಏರಳಿತವೂ ಅಧಿಕವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರಲ್ಲಿಯೂ ಅಂತಹ ವಾತಾವರಣದಲ್ಲಿ ಬದಲಾವಣೆ ಏನು ಕಂಡು ಬಂದಿಲ್ಲ. ಮುಂದಿನ ಎರಡು ದಿನವೂ ಸಾಮಾನ್ಯ ವಾತಾವರಣವೇ ಇರಲಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಕಡೆ ಹಗುರ ಅಥವಾ ಸಾಧಾರಣ ಮಳೆಯಾಗಲಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳೂ ಇವೆ.
ಕೆಲವೊಮ್ಮೆ ಬಲವಾದ ಮೇಲ್ಮೈನಲ್ಲಿಯೇ ಗಾಳಿ ಬೀಸುವ ಸಾಧ್ಯತೆಯೂ ಇದೆ. ಆದರೆ ಭಾರೀ ಮಳೆಯ ಆತಂಕವಂತೂ ಇಲ್ಲ. ಬೆಂಗಳೂರು ನಗರದ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ. ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬೆಂಗಳೂರಿನ ಹವಾಮಾನದಲ್ಲಿ ಕೊಂಚ ಬದಲಾವಣೆ ಆಗಲಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ಗೆ ಏರಿದರೆ, ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯನಷ್ಟು ದಾಖಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ ಮುಂದಿನ ನಲವತ್ತೆಂಟು ಗಂಟೆಗಳ ಹೊತ್ತಿಗೆ ಕರಾವಳಿ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಪ್ರಮಾಣದಲ್ಲಿ ಗಣನೀಯ ಕಡಿಮೆಯಾಗಲಿದೆ. ಭಾರೀ ಮಳೆಯ ಮುನ್ಸೂಚನೆಯಂತೂ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.