Mangaluru News: ಉಜಿರೆಯಲ್ಲಿ ಮಗನನ್ನೇ ಕೊಂದ ತಂದೆ; ಕಾಸರಗೋಡಿನಲ್ಲಿ ರೈಲು ಡಿಕ್ಕಿಯಾಗಿ ಯುವಕ ಸಾವು
Oct 30, 2023 09:43 AM IST
ಉಜಿರೆಯಲ್ಲಿ ಮಗನನ್ನೇ ಕೊಲೆ ಮಾಡಿದ ತಂದೆ; ಕಾಸರಗೋಡಿನಲ್ಲಿ ರೈಲು ಡಿಕ್ಕಿಯಾಗಿ ಯುವಕ ಸಾವು
- Mangaluru Crime Oct 30: ತಂದೆ, ಮಗನ ನಡುವೆ ನಡೆದ ಜಗಳ ತಾರಕಕ್ಕೇರಿ ತಂದೆಯೇ ಮಗನನ್ನು ಚೂರಿ ಇರಿದು ಕೊಲೆ ಮಾಡಿರುವ ಘಟನೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆದಿದೆ. ಕಾಸರಗೋಡಿನಲ್ಲಿ ರೈಲು ಹಳಿಯ ಮೇಲೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ರೈಲು ಡಿಕ್ಕಿಯಾಗಿ ಯುವಕನೊಬ್ಬ ಮೃತ ಪಟ್ಟಿರುವ ವರದಿ ದಾಖಲಾಗಿದೆ.
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಜಗದೀಶ್(30) ಎನ್ನಲಾಗಿದೆ. ಈತನ ತಂದೆ ಕೃಷ್ಣಯ್ಯ ಆಚಾರ್ ಎಂಬಾತನೇ ಕೊಲೆ ಆರೋಪಿ. ಈ ಕುರಿತು ಸೋಮವಾರ ಬೆಳಗ್ಗೆ ಪ್ರಕರಣ ದಾಖಲಾಗಿದೆ.
ರಾತ್ರಿಯ ವೇಳೆ ತಂದೆ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದಾರೆ. ಮಗ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಬಾಗಿಲು ತೆಗೆದ ಕೃಷ್ಣಯ್ಯ ಆಚಾರ್ ಕೋಣೆಯ ಒಳಗಿನಿಂದ ಹೊರಬಂದು ಜಗದೀಶನಿಗೆ ಚೂರಿಯಿಂದ ಇರಿದಿದ್ದಾರೆ. ಇರಿತಕ್ಕೆ ಒಳಗಾಗಿ ಕುಸಿದು ಬಿದ್ದು ಜಗದೀಶ್ ಮೃತಪಟ್ಟಿದ್ದಾನೆ. ಈ ಬಗ್ಗೆ ಜಗದೀಶನ ಅಣ್ಣ ಗಣೇಶ್ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಣಿಪಾಲದಲ್ಲಿ ಮನೆಯಿಂದ ಲಕ್ಷಾಂತರ ರೂ ಕಳವು
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. 1,50,000 ರೂ ಮೌಲ್ಯದ ನಗದು ಸಹಿತ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹುಲಿವೇಷಧಾರಿಗಳ ಜಗಳ: ಇರಿತ ಪ್ರಕರಣ ಆರೋಪದಲ್ಲಿ ಮೂವರ ಸೆರೆ
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ಶಾರದೋತ್ಸವದ ಹುಲಿವೇಷಧಾರಿಗಳ ನಡುವಿನ ಜಗಳದ ಮುಂದುವರಿದ ಭಾಗವಾಗಿ ಬ್ಯಾನರ್ ತೆರವು ವಿಚಾರದಲ್ಲಿ ಚೂರಿ ಇರಿತ ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಪಾಣೆಮಂಗಳೂರು ನಿವಾಸಿ ಶೋಧನ್, ನರಿಕೊಂಬು ನಿವಾಸಿ ಪ್ರಕಾಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಯಲ್ಲಿ ಗಾಯಾಳು ದೇವದಾಸ್ ಚೇತರಿಸಿಕೊಳ್ಳುತ್ತಿದ್ದಾರೆಯಾದರೂ ಅವರ ಚಿಕಿತ್ಸೆಗೆ ಲಕ್ಷಾಂತರ ರೂ ಖರ್ಚು ಇರುವುದರಿಂದ ನಿಧಿ ಸಂಗ್ರಹ ಕಾರ್ಯವೂ ನಡೆಯುತ್ತಿದೆ.
ಕಾಸರಗೋಡು: ರೈಲು ಡಿಕ್ಕಿ, ಯುವಕ ಸಾವು
ಕಾಸರಗೋಡಿನಲ್ಲಿ ರೈಲು ಡಿಕ್ಕಿಯಾಗಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ರೈಲ್ವೆ ಹಳಿಯಲ್ಲಿ ಬಿದ್ದ ಮೊಬೈಲ್ ತೆಗೆಯಲೆಂದು ಹೋದಾಗ ರೈಲು ಡಿಕ್ಕಿಯಾಗಿ ಬಾಸಿತ್ ಎಂಬಾತ ಸಾವನ್ನಪ್ಪಿದ್ದಾನೆ. ಈ ಕುರಿತು ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.