Mysuru Dasara: ಮೈಸೂರು ಅರಮನೆ ಆವರಣದಲ್ಲಿ ಅಂಬಾರಿಗೂ ಮುನ್ನ ಜಟ್ಟಿ ಕಾಳಗ, ರಕ್ತ ಚಿಮ್ಮಿಸಿದ ಜಟ್ಟಿಗಳು
Oct 24, 2023 01:36 PM IST
ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ನಡೆದ ಜಟ್ಟಿ ಕಾಳಗದ ನೋಟ
- jatti vajarmusti kalaga ಮೈಸೂರು ದಸರಾ ಭಾಗವಾಗಿ ಅರಮನೆ ಅಂಗಳದಲ್ಲಿ ನಡೆಯುವ ಜಟ್ಟಿಗಳ ವಜ್ರಮುಷ್ಟಿ ಕಾಳಗಕ್ಕೆ ಇತಿಹಾಸ ಹಾಗೂ ಮಹತ್ವವಿದೆ. ಜಟ್ಟಿಗಳ ಕಾಳಗ ಮುಗಿದ ನಂತರವೇ ಜಂಬೂಸವಾರಿಯ ಅಂಬಾರಿ ಹೊರಡುವ ಸಿದ್ದತೆ ಶುರುವಾಗುತ್ತದೆ.
ಮೈಸೂರು: ಮೈಸೂರು ಅರಮನೆ ಅಂಗಳದ ಕರಿಕಲ್ಲು ತೊಟ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ಜಟ್ಟಿಗಳು ಕಾಳಗದಲ್ಲಿ ಪಾಲ್ಗೊಂಡರು. ಇಬ್ಬರು ಜೆಟ್ಟಿಗಳು ಕೆಲ ಹೊತ್ತು ಸೆಣೆಸಿದರು. ಚಿಮ್ಮಿತು ರಕ್ತ. ಸಂಪ್ರದಾಯದಂತೆ ವಜ್ರಮುಷ್ಠಿ ಕಾಳಗ ನಡೆಯಿತು.
ಮೈಸೂರು ಅರಮನೆಗೂ ಇಲ್ಲಿನ ಸಂಪ್ರದಾಯಕ್ಕೂ ಬಿಡಿಸಲಾಗದ ನಂಟು. ಮೈಸೂರು ಭಾಗದಲ್ಲಿ ನೆಲೆಸಿರುವ ಜಟ್ಟಿ ಸಮುದಾಯದ ಪ್ರತಿನಿಧಿಗಳಾಗಿ ಚಾಮರಾಜನಗರದ ವೆಂಕಟೇಶ್ ಹಾಗೂ ಬೆಂಗಳೂರಿನ ಪ್ರವೀಣ್ ಜೋಡಿ ವಜ್ರಮುಷ್ಟಿ ಕಾಳಗದಲ್ಲಿ ಸೆಣೆಸಾಡುವ ಸನ್ನಿವೇಶ.
ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಟ್ಟಿಗೆ ಹಾಗೂ ಜಟ್ಟಿಗಳಿಗೆ ಪೂಜೆ ಸಲ್ಲಿಸುವ ಮೂಲಕ ವಜ್ರಮುಷ್ಟಿ ಕಾಳಗಕ್ಕೆ ಚಾಲನೆ ನೀಡಿದರು. ಅರಮನೆ ಮೇಲ್ಭಾಗದಲ್ಲಿ ನಿಂತು ಕೊಂಡೇ ಪ್ರಮೋದಾದೇವಿ ಒಡೆಯರ್ ತ್ರಿಷಿಕಾಕುಮಾರಿ ಒಡೆಯರ್ ಹಾಗೂ ಆದ್ಯವೀರ್ ಒಡೆಯರ್ ಮತ್ತು ಕುಟುಂಬದವರು ಅಲ್ಲಿಂದಲೇ ಕೈ ಬೀಸಿ ನಮಸ್ಕರಿಸಿದರು.
ಚಾಮರಾಜನಗರದ ವೆಂಕಟೇಶ್ ಜಟ್ಟಿ ಪುಟ್ಟರಂಗ ಜಟ್ಟಿ ಅವರಿಂದ ತರಬೇತಿ ಪಡೆದು ಚಾಮರಾಜನಗರದಲ್ಲಿ ಜಟ್ಟಿಗಳ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಬಳಿಕ ಮೈಸೂರು ಅರಮನೆಗೆ ಆಗಮಿಸಿದರು. ಇದೇ ರೀತಿ ಬೆಂಗಳೂರಿನಿಂದ ಪ್ರವೀಣ್ ಜಟ್ಟಿ ಕೂಡ ಬಂದರು.
ಪೂಜೆ ನಂತರ ಕಾಳಗ ಶುರುವಾಯಿತು. ವಜ್ರಮುಷ್ಟಿ ಆಯುಧವನ್ನು ಕೈಯಲ್ಲಿ ಧರಿಸಿದ ವೆಂಕಟೇಶ್ ಪ್ರವೀಣ್ ಜಟ್ಟಿ ಅವರು ಕೈ ಹಿಡಿದು ಸೆಣೆಸಾಟ ಆರಂಭಿಸಿದರು. ಅರಮನೆಯ ಕರಿಕಲ್ಲು ತೊಟ್ಟಿ ಆವರಣದಲ್ಲಿ ಸಾಂಪ್ರದಾಯಿಕ ಜಟ್ಟಿ ಕಾಳಗ ಉಡುಗೆಯಲ್ಲಿ ಆಗಮಿಸಿದ ಬೆಂಗಳೂರಿನ ಪ್ರಮೋದ್ ಜೆಟ್ಟಿಯಿಂದ ಚಾಮರಾಜನಗರದ ವೆಂಕಟೇಶ್ ಜಟ್ಟಿ ಮೇಲೆ ಪ್ರಹಾರ ನಡೆಯಿತು. ಚಾಮರಾಜನಗರದ ವೆಂಕಟೇಶ್ ಹಾಗೂ ಬೆಂಗಳೂರಿನ ಪ್ರವೀಣ್ ಜೆಟ್ಟಿ ಅವರು ಮೆರವಣಿಗೆಯಲ್ಲಿ ಆಗಮಿಸಿ ವಜ್ರಮುಷ್ಠಿ ಕಾಳಗದಲ್ಲಿ ಭಾಗಿಯಾದರು. ಇಬ್ಬರೂ ಕೆಲ ಹೊತ್ತು ಮಟ್ಟಿಯಲ್ಲಿ ಕೈ ಹಿಡಿದು ಸಮರ ನಡೆಸಿತ್ತು. ಈ ವೇಳೆ ರಕ್ತ ಚಿಮ್ಮಿತು. ಬಳಿಕ ಚನ್ನಪಟ್ಟಣ ಪ್ರವೀಣ್ ಜಟ್ಟಿ ಹಾಗೂ ಮೈಸೂರಿನ ಪ್ರವೀಣ್ ಜಟ್ಟಿ ನಡುವೆ ಉಸ್ತಾದರು ಕಾಳಗ ಆಡಿಸಿದರು.
ಆನಂತರ ವಜ್ರಮುಷ್ಠಿ ಕಾಳಗಕ್ಕೆ ತೆರೆ ಬಿದ್ದಿತು. ಇದಾಗುತ್ತಲೇ ಪೂಜೆ ಸಲ್ಲಿಸಿ ಜಂಬೂಸವಾರಿಗೆ ಅಂಬಾರಿ ಹೊರಡುತ್ತದೆ. ಇದಕ್ಕೆ ಬೇಕಾದ ಸಿದ್ದತೆಗಳು ವಜ್ರಮುಷ್ಠಿ ಕಾಳಗದ ಬಳಿಕ ಶುರುವಾದವು.
ಮೈಸೂರಿನ ರಾಜಾಶ್ರಯದಲ್ಲಿ ಬೆಳೆದುಬಂದಿರುವ ವಜ್ರಮುಷ್ಠಿ ಕಾಳಗ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪ್ರಕ್ರಿಯೆಗೆ ಅದರದ್ದೇ ಮಹತ್ವ, ಇತಿಹಾಸವನ್ನು ಕಾಣಬಹುದು. ವಿಜಯದಶಮಿಯಂದು ಅಂಬಾರಿಯು ಅರಮನೆಯಿಂದ ಹೊರಡುವ ಮುನ್ನ ನಡೆಯುವ ಸಾಂಪ್ರದಾಯಕ ಕ್ರೀಡೆ. ಇತಿಹಾಸದ ಪ್ರಕಾರ ವಜ್ರಮುಷ್ಟಿ ಕಾಳಗ ಮುಗಿದ ನಂತರವಷ್ಟೇ ಅಂಬಾರಿ ಅರಮನೆಯಿಂದ ಹೊರಡಬೇಕು. ಇದನ್ನು ಜಟ್ಟಿ ಕಾಳಗ ಎಂದೂ, ಈ ಕುಸ್ತಿ ಆಡುವವರನ್ನು ಜಟ್ಟಿಗಳು ಎಂದೂ ಕರೆಯಲಾಗುತ್ತದೆ.ಘಟಾನುಘಟಿಗಳಿಬ್ಬರು ವಜ್ರಮುಷ್ಟಿ ಹಿಡಿದು ಹತ್ತಿಪ್ಪತ್ತು ನಿಮಿಷಗಳು ಮಾಡುವ ರೋಚಕ ಕಾಳಗದ ದೃಶ್ಯ ನೋಡುಗರನ್ನು ರೋಮಾಂಚಕಗೊಳಿಸುತ್ತೆ. ರಾಜವಂಶಸ್ಥರು, ವೀಕ್ಷಕರು, ಅರಮನೆಯವರೆಲ್ಲರ ಎದುರು ಇಬ್ಬರು ಘಟಾನುಘಟಿಗಳು ತೊಡೆತಟ್ಟಿ ನಿಲ್ಲುತ್ತಾರೆ. ಕೈಯಲ್ಲಿ ವಜ್ರಮುಷ್ಟಿ ಹಿಡಿದು ಕುಸ್ತಿಗೆ ತಯಾರಾಗಿ ನಿಂತ ಅವರ ಮೇಲೆ ನೂರಾರು ಕಣ್ಣುಗಳು ನೋಡುತ್ತಿರುತ್ತವೆ.
ವ್ರತಧಾರಿಗಳಾಗಿ ವಜ್ರಮುಷ್ಟಿ ಕಾಳಗದ ದಿನ ಅರಮನೆ ಪ್ರವೇಶಿಸುವ ಜಟ್ಟಿಗಳಿಗೆ ಅರಮನೆಯ ಶ್ವೇತವರಾಹ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಕೆಂಪುಮಣ್ಣು, ಮಟ್ಟಿ ಮಣ್ಣು, ಅರಿಶಿನ- ಕುಂಕುಮ, ಕಣ್ಣುಕಪ್ಪುಗಳನ್ನು ಬಳಿದು ನಂತರ ಕಾಳಗ ನಡೆಸುತ್ತಾರೆ. ಉಸ್ತಾದ್ ಗಳ ಉಪಸ್ಥಿತಿಯಲ್ಲಿ ಇಬ್ಬರೂ ಜಟ್ಟಿಗಳು ಆನೆ ದಂತದಿಂದ ಮಾಡಿದ ವಜ್ರಮುಷ್ಟಿ ಆಯುಧವನ್ನು ಕೈಗೆ ಧರಿಸಿ ಹಣೆಯಲ್ಲಿ ರಕ್ತ ಚಿಮ್ಮುವವರೆಗೆ ಕಾದಾಡುತ್ತಾರೆ. ಈ ಕಾಳಗ ಸುಮಾರು 10ರಿಂದ 20 ನಿಮಿಷಗಳವರೆಗೆ ನಡೆಯುತ್ತದೆ. ಇಲ್ಲಿ ಸೋಲು ಗೆಲುವು ಎಂಬುವುದಿಲ್ಲ. ಹಣೆಯಲ್ಲಿ ರಕ್ತ ಚಿಮ್ಮಬೇಕು ಅಷ್ಟೇ. ರಕ್ತ ಬಂದರೆ ಮಾತ್ರ ಕಾಳಗ ಮುಕ್ತಾಯವಾಗುತ್ತದೆ. ಆನಂತರ ದೇವರಿಗೆ ಪೂಜೆ ಸಲ್ಲಿಸಿ ಜಂಬೂಸವಾರಿ ಆರಂಭಿಸುವ ಕಲಾಪಗಳು ನಡೆಯುತ್ತವೆ.
ಮೈಸೂರು, ಚಾಮರಾಜನಗರ, ಬೆಂಗಳೂರು, ಮಂಡ್ಯ ಭಾಗದಲ್ಲಿ ಜಟ್ಟಿ ಸಮುದಾಯದವರು ಈಗಲೂ ನೆಲೆಸಿದ್ದಾರೆ. ದಸರಾಗೂ ಮುನ್ನ ವಜ್ರಮುಷ್ಠಿ ಕಾಳಗಕ್ಕೆ ಜಟ್ಟಿಗಳ ಆಯ್ಕೆ ನಡೆಯಲಿದೆ. ಬಳಿಕ ಅವರಿಗೆ ತರಬೇತಿ ನೀಡಲಾಗುತ್ತದೆ. ವಜ್ರಮುಷ್ಟಿ ಹಿಡಿದು ಕಾಳಗ ನೋಡುವುದೇ ಚಂದ. ಹಿಂದಿನ ವೈಭವವನ್ನು ಮರೆಯಲಾಗದು. ಈಗಲೂ ಹಿಂದಿನ ಪರಂಪರೆ ಮೈಸೂರು ಅರಮನೆಯೊಂದಿಗೆ ಬೆಸೆದುಕೊಂಡಿದೆ. ಮುಂದೆಯೂ ಇರಲಿದೆ. ಶಾಂತಿ ಹಾಗೂ ಒಳಿತಿಗೆ ಈ ಸಂಪ್ರದಾಯ ಎನ್ನುವುದು ಜಟ್ಟಿ ಸಮುದಾಯದ ಹಿರಿಯರೊಬ್ಬರ ಅಭಿಮಾನದ ನುಡಿ.