Pramod Muthalik: ಈದ್ಗಾ ಜಯಭೇರಿ ಹಿಂದೂ ವಿರೋಧಿಗಳ ಕೆನ್ನೆಗೆ ಬಾರಿಸಿದಂತಿದೆ: ಮುತಾಲಿಕ್ ಅಭಿಮತ!
Sep 01, 2022 09:33 PM IST
ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ)
- ಹುಬ್ಬಳ್ಳಿಯ ಈದ್ಗಾ(ರಾಣಿ ಚೆನ್ನಮ್ಮ) ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅವಕಾಶ ನೀಡಿರುವುದನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಈ ತೀರ್ಪಿನಿಂದ ಹಿಂದೂಗಳ ಭಾವನೆ ವಿರೋಧಿಸಿದವರಿಗೆ ಕಪಾಳ ಮೋಕ್ಷ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿ: ನಗರದ ಈದ್ಗಾ(ರಾಣಿ ಚೆನ್ನಮ್ಮ) ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅವಕಾಶ ನೀಡಿರುವುದನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹುಬ್ಬಳ್ಳಿಯ ಚರಿತ್ರೆಯಲ್ಲಿ ಇದನ್ನು ಸುವರ್ಣಾಕ್ಷರಗಳಿಂದ ಬರೆದಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿಯ ಈದ್ಗಾ(ರಾಣಿ ಚೆನ್ನಮ್ಮ) ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ನಿನ್ನೆ(ಆ.31-ಬುಧವಾರ) ಪೂಜೆ ಸಲ್ಲಿಸಿ ಮಾತನಾಡಿದ ಮುತಾಲಿಕ್, ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಪಾಲಿಕೆಯ ನಿರ್ಣಯವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ ಎಂದು ಹೇಳಿದರು. ಈ ತೀರ್ಪಿನಿಂದ ಹಿಂದೂಗಳ ಭಾವನೆ ವಿರೋಧಿಸಿದವರಿಗೆ ಕಪಾಳ ಮೋಕ್ಷ ಆಗಿದೆ ಎಂದು ಮುತಾಲಿಕ್ ಗುಡುಗಿದರು.
ಇದೊಂದು ಐತಿಹಾಸಿಕ ದಿನ. ನಮ್ಮ ಹೋರಾಟಕ್ಕೆ ಹೈಕೋರ್ಟ್ನಿಂದ ನ್ಯಾಯ ಸಿಕ್ಕಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಪ್ರತಿಷ್ಠಾಪನೆಯನ್ನು ಪ್ರಶ್ನಿಸಿ ಯಾರು ಬೇಕಾದರೂ ಯಾವ ಕೋರ್ಟ್ಗಾದರೂ ಹೋಗಬಹುದು. ಆದರೆ ಈಗಾಗಲೇ ಮೂರ್ತಿ ಪ್ರತಿಷ್ಠಾಪನೆ ಆಗಿರುವುದರಿಂದ, ಯಾವ ಶಕ್ತಿಯೂ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುತಾಲಿಕ್ ಇದೇ ವೇಳೆ ಹೇಳಿದರು.
ಗಣೇಶೋತ್ಸವಕ್ಕೆ 129 ವರ್ಷಗಳ ಇತಿಹಾಸವಿದ್ದು, ಬ್ರಿಟಿಷರು ಸಹ ಇದನ್ನು ವಿರೋಧಿಸಿರಲಿಲ್ಲ. ಪ್ರಸ್ತುತ ಕಾಂಗ್ರೆಸ್ನವರು ಈ ವಿಷಯದಲ್ಲಿ ಮುಸ್ಲಿಮರಿಗೆ ಕುಮ್ಮಕ್ಕು ಕೊಟ್ಟು ಕೋರ್ಟ್ಗೆ ಕಳಿಸುತ್ತಿದ್ದಾರೆ. ಇಂದೂ ಕೂಡ ಸುಪ್ರೀಂ ಕೋರ್ಟ್ಗೆ ಹೋಗಿ ಮೂರ್ತಿ ಪ್ರತಿಷ್ಠಾಪನೆ ತಡೆಯಲು ಯತ್ನಿಸಿದ್ದಾರೆ. ಅವರಿಗೆ ಗಣಪತಿ ಶಾಪ ತಟ್ಟದೆ ಇರದು ಎಂದು ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಕೂಡ ಈದ್ಗಾದಲ್ಲಿ ಗಣೇಶೋತ್ಸವವನ್ನು ವಿರೋಧಿಸಿದ್ದಾರೆಂಬ ಮಾಹಿತಿ ಇದೆ. ಹಿಂದೂ ಆಗಿರುವ ನೀವು ವಿರೋಧಿಸುವ ಬದಲು, ಬೆಂಬಲ ಕೊಡಬೇಕಿತ್ತು ಎಂದು ಮುತಾಲಿಕ್ ಇದೇ ವೇಳೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಬಾರಿಯ ಗಣೇಶೋತ್ಸವ ಯಾರು ಹಿಂದೂ ಪರ ಯಾರೂ ಹಿಂದೂ ವಿರೋಧಿಗಳು ಎಂಬುದನ್ನು ಜನರು ಸ್ಪಷ್ಟವಾಗಿ ಗುರುತಿಸುವಂತೆ ಮಾಡಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಪೂಜೆ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಅವರು ಸಾವರ್ಕರ್ ಮತ್ತು ಬಾಲ ಗಂಗಾಧರ ತಿಲಕ್ ಅವರ ಭಾವಚಿತ್ರ ಪ್ರದರ್ಶಿಸಿದರು. ಮುತಾಲಿಕ್ ಅವರ ಈ ನಡೆಗೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ.
ಸಾವರ್ಕರ್ ಭಾವಚಿತ್ರದ ಫ್ಲೆಕ್ಸ್ ತೆರವು:
ಇನ್ನು ಈದ್ಗಾ(ರಾಣಿ ಚೆನ್ನಮ್ಮ) ಮೈದಾನ ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಿದ್ದು ವಿರೋಧಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಾವರ್ಕರ್ ಫೋಟೋ ಇರುವ ಫ್ಲೆಕ್ಸ್ ತೆರವುಗೊಳಿಸುವ ಮೂಲಕ, ಹು-ಧಾ ಮಹಾನಗರ ಪಾಲಿಕೆ ವಿವಾದಕ್ಕೆ ತೆರೆ ವಿವಾದಕ್ಕೆ ಬ್ರೇಕ್ ಹಾಕಿದೆ. ಷರತ್ತು ಉಲ್ಲಂಘನೆ ಕಾರಣಕ್ಕೆ ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಗಣೇಶ ಮೂರ್ತಿ ಹಿಂದುಗಡೆ ಹಾಕಿದ್ದ ಫ್ಲೆಕ್ಸ್ ತೆರವು ಮಾಡಲಾಗಿದೆ.
ಒಟ್ಟಿನಲ್ಲಿ ಹುಬ್ಬಳ್ಳಿಯ ಈದ್ಗಾ(ರಾಣಿ ಚೆನ್ನಮ್ಮ) ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ರಾಷ್ಟ್ರದ ಗಮನ ಸೆಳೆದಿದೆ. ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿದೆ.
ವಿಭಾಗ