Vijayanagar Crime: ಮಾತು ಕೇಳದ ಮಗಳನ್ನೇ ಬಡಿದು ಕೊಂದು ತಾಯಿ ಆತ್ಮಹತ್ಯೆಗೆ ಶರಣು: ಮಗನ ಸ್ಥಿತಿ ಗಂಭೀರ
Oct 15, 2023 04:00 PM IST
ಹರಪನಹಳ್ಳಿ ಹುಲಿಕಟ್ಟೆ ಗ್ರಾಮಕ್ಕೆ ಎಸ್ಪಿ ಹರಿಬಾಬು ಭೇಟಿ ನೀಡಿ ಮಾಹಿತಿ ಪಡೆದರು.
- Harapanahalli crime News ವಿಜಯನಗರ( Vijayanagar) ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ತಾಯಿಯೇ ಮಕ್ಕಳನ್ನು ಕೊಲ್ಲಲು ಮುಂದಾಗಿದ್ದು, ಮಗಳು ಮೃತಪಟ್ಟು ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆನಂತರ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹುಬ್ಬಳ್ಳಿ: ಮಕ್ಕಳು ತನ್ನ ಮಾತು ಕೇಳುತ್ತಿಲ್ಲ ಎಂಬ ಹತಾಶೆಗೊಂಡ ತಾಯಿ ಇಬ್ಬರನ್ನೂ ಕಟ್ಟಿಗೆಯಲ್ಲಿ ಹೊಡೆದಿದ್ದು ಮಗಳು ಮೃತಪಟ್ಟು ಮಗ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಮಕ್ಕಳಿಗೆ ಹೀಗಾಗಿದ್ದನ್ನು ಕಂಡು ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆಯಿದು.
ಇದು ನಡೆದಿರುವುದುವಿಜಯ ನಗರದ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ. ತಾಯಿ- ಮಗಳು ಮೃತಪಟ್ಟು ಮಗನ ಸ್ಥಿತಿ ಕಂಡು ಇಡೀ ಕುಟುಂಬ ಹಾಗೂ ಗ್ರಾಮ ಮರುಗುತ್ತಿದೆ.
ಹರಪನಹಳ್ಲಿ ತಾಲೂಕಿನ ಹುಲಿಕಟ್ಟೆ ಗ್ರಾಮದ ನಿವಾಸಿ ಶಮಾಬಾನು (19) ತಾಯಿಯಿಂದ ಕೊಲೆಯಾದ ಯುವತಿ. ಬೇಗಂ (56) ಮಗಳನ್ನು ಕೊಂದು ನೇಣಿಗೆ ಶರಣಾದವರು. ಎಸ್ಸೆಸ್ಸೆಲ್ಸಿ ಓದುತ್ತಿರುವ ಬಾಲಕ ಅಮಾನುಲ್ಲಾ (16) ಗಂಭೀರ ಹಲ್ಲೆಗೆ ಒಳಗಾಗಿ ಅಸ್ವಸ್ಥನಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಾಯಿ ಬೇಗಂ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಪುತ್ರಿ ಶಮಬಾನು ಮೃತದೇಹ ನೆಲದ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆಗಿದ್ದೇನು
ಮೃತ ಬೇಗಂ ಮತ್ತು ಮಗಳು ಶಮಾಬಾನು ಮನೆಯಲ್ಲಿ ಇರುತ್ತಿದ್ದರು. ಹಾರಕನಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಅಮಾನುಲ್ಲಾ ದಸರಾ ರಜೆ ಮೇಲೆ ಮನೆಗೆ ಬಂದಿದ್ದ. ಅ.13ರಂದು ಶುಕ್ರವಾರ ರಾತ್ರಿ ಎಲ್ಲರೂ ಮಲಗಿರುವ ಸಮಯದಲ್ಲಿ ಇಬ್ಬರೂ ಮಕ್ಕಳನ್ನೂ ಸಾಯಿಸುವ ಉದ್ದೇಶದಿಂದ ಒಂದು ಕಟ್ಟಿಗೆಯಿಂದ ಇಬ್ಬರ ಮಕ್ಕಳ ತಲೆಗೆ ಬಲವಾಗಿ ಹೊಡೆದ ಪರಿಣಾಮ ಮಗಳು ಶಮಾಬಾನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮಗ ಅಮಾನುಲ್ಲಾ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿದ ಬೇಗಂ ತಾನು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಬೆಳಗ್ಗೆ ಸಂಬಂಧಿ ನನ್ನೆಸಾಬ್ ಅವರು, ಕೂಗಿ ಕರೆದರೂ ಯಾರೂ ಸಹ ಬಾಗಿಲು ತೆರೆಯಲಿಲ್ಲ. ಬಾಗಿಲನ್ನು ತಳ್ಳಿದಾಗ ದುರ್ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿದ್ದರು.
ವಿಜಯ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ್ ಎಂ.ಕಮ್ಮಾರ, ಪಿಎಸ್ಐ ಎಚ್.ಸಿ.ಹಿರೇಮಠ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ರೈತನ ಮೇಲೆ ಕರಡಿಗಳ ದಾಳಿ
ಜಮೀನಿಗೆ ತೆರಳಿದ್ದ ರೈತನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಪರಿಣಾಮ ರೈತ ಗಂಭೀರ ಗಾಯಗೊಂಡಿರುವ ಘಟನೆ ವಿಜಯನಗರದ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಜಮೀನಿನಲ್ಲಿ ಸಂಭವಿಸಿದೆ.
ಗ್ರಾಮದ ನಿವಾಸಿ ಆನಂದ್ (28) ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿರುವ ರೈತ. ಅರಣ್ಯದ ಅಂಚಿನಲ್ಲಿರುವ ತಮ್ಮ ಜಮೀನಿಗೆ ಕೃಷಿ ಕೆಲಸಕ್ಕೆ ತೆರಳಿದ್ದಾಗ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿದ ತಲೆ, ದೇಹದ ಮೇಲೆ ಪರಿಚಿದ್ದರಿಂದ ರೈತ ಸಂಪೂರ್ಣ ರಕ್ತಸಿಕ್ತನಾಗಿದ್ದ. ರೈತನಿಗೆ ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಶಿಫಾರಸ್ಸಿನ ಮೇರೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೆ.ಕಲ್ಲಹಳ್ಳಿ ಗ್ರಾಮ ಅರಣ್ಯದಂಚಿನಲ್ಲಿದೆ. ಗ್ರಾಮಕ್ಕೆ ಚಿರತೆ ನುಗ್ಗಿ ಜಾನುವಾರು, ನಾಯಿಗಳನ್ನು ಎಳೆದುಕೊಂಡು ಹೋಗುತ್ತಿವೆ. ಚಿರತೆ, ಕರಡಿ ದಾಳಿಗಳಿಂದ ರೈತರು ಪ್ರಾಣಭಯದಲ್ಲಿ ಕೆಲಸ ಮಾಡುವಂತಾಗಿದೆ. ಗಾಯಗೊಂಡು ನರಳಾಡುತ್ತಿರುವ ರೈತನ ಚಿಕಿತ್ಸೆಗೆ ಸಂಪೂರ್ಣ ಖರ್ಚನ್ನು ಅರಣ್ಯ ಇಲಾಖೆ ಭರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.