Explained : ಭಾರತದ ಆರ್ಥಿಕತೆಯ ಮೇಲೆ ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ, 5 ಅಂಶಗಳ ವಿವರಣೆ
Oct 26, 2023 04:18 PM IST
ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ: ಭಾರತವು ಕಚ್ಚಾ ತೈಲದ ಪ್ರಮುಖ ಆಮದುದಾರ ರಾಷ್ಟ್ರವಾಗಿದ್ದು, ತೈಲ ಬೆಲೆ ಹೆಚ್ಚಳವಾದಷ್ಟೂ ತೈಲ ಆಮದು ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇದು ಹೊರೆಯಾಗಿ ಪರಿಣಮಿಸುತ್ತದೆ. (ಸಾಂಕೇತಿಕ ಚಿತ್ರ)
ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ ಜಾಗತಿಕ ಮತ್ತು ಭಾರತದ ಅರ್ಥ ವ್ಯವಸ್ಥೆಯ ಮೇಲಾಗುತ್ತಿದೆ. ಕಚ್ಚಾ ತೈಲ ದರ ಹೆಚ್ಚಳ ಮತ್ತು ಅದರ ಬೆನ್ನಿಗೆ ಉಂಟಾಗುತ್ತಿರುವ ವಿದ್ಯಮಾನಗಳು ಇದಕ್ಕೆ ಕಾರಣ. ಈ ಅಂಶಗಳ ವಿವರಣೆ ಇಲ್ಲಿದೆ.
ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಭೌಗೋಳಿಕ ರಾಜಕೀಯ ಸಂಘರ್ಷವು ಭಾರತೀಯ ಆರ್ಥಿಕತೆಗೆ ಜಾಗತಿಕವಾಗಿ ತಾಜಾ ತಲೆನೋವನ್ನು ತಂದಿಟ್ಟಿದೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾದಾಗಿನಿಂದ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಶೇಕಡ 5 ಕ್ಕಿಂತ ಹೆಚ್ಚಿವೆ. ಅಮೆರಿಕನ್ ಬಾಂಡ್ ಇಳುವರಿಯು 5 ಶೇಕಡಾ-ಮಾರ್ಕ್ ಅನ್ನು ದಾಟಿ 16 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿರುವುದು ಮೇಲ್ನೋಟದ ಕಾರಣಗಳು.
ಜಾಗತಿಕ ತೈಲ ಪೂರೈಕೆಯ ಆರ್ಥಿಕ ಪರಿಣಾಮವು ಕಚ್ಚಾ ತೈಲದ ನಿವ್ವಳ ಆಮದುದಾರ ರಾಷ್ಟ್ರವಾಗಿರುವ ಭಾರತದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬೆಲೆ ಸ್ಥಿರತೆ ಕಾಪಾಡುವ ದೊಡ್ಡ ಸವಾಲನ್ನು ಭಾರತ ಎದುರಿಸುತ್ತಿದೆ. ಭಾರತವು ಈ ಕ್ಷಣದಲ್ಲಿ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಣುತ್ತಿದೆ. ಆದರೆ, ಯುದ್ಧದ ಉಲ್ಬಣದಿಂದಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಪೂರೈಕೆ ಅಡ್ಡಿಯು ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಹಮಾಸ್ನ ಪ್ರಮುಖ ಬೆಂಬಲಿಗ ದೇಶ ಇರಾನ್ ಯುದ್ಧದಲ್ಲಿ ಸೇರಿಕೊಂಡರೆ ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಗಣನೀಯ ಏರಿಕೆ ಕಾಣಬಹುದು. ಅದು ಸಂಭವಿಸಿದಲ್ಲಿ, ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಬಹುದು. ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಕೆಲವು ವಿಚಾರಗಳನ್ನು ಗಮನಿಸಬೇಕು.
ಜಾಗತಿಕ ಆರ್ಥಿಕತೆಯ ಮೇಲೆ ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ
ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾ ವರ್ಷಾಂತ್ಯದವರೆಗೆ ದಿನಕ್ಕೆ 1.3 ಮಿಲಿಯನ್ ಬ್ಯಾರೆಲ್ಗಳ ತೈಲ ಪೂರೈಕೆ ಕಡಿತವನ್ನು ಘೋಷಿಸಿವೆ. ಇದರೊಂದಿಗೆ, ಜಾಗತಿಕ ಆರ್ಥಿಕತೆಯು ಈಗಾಗಲೇ ತೈಲ ಮಾರುಕಟ್ಟೆ ಕೊರತೆಯನ್ನು ಎದುರಿಸುತ್ತಿದೆ.
ಈಗ, ತೈಲ ಬೆಲೆಗಳು ಪ್ರತಿ ಬ್ಯಾರೆಲ್-ಮಾರ್ಕ್ಗೆ 90 ಡಾಲರ್ಗಿಂತ ಮೇಲಿರುವ ಕಾರಣ, ಇತರ ಮಧ್ಯಪ್ರಾಚ್ಯ ತೈಲ ಉತ್ಪಾದಕರ ಮೇಲೆ ಸಂಘರ್ಷದ ಪರಿಣಾಮ ತೀವ್ರವಾಗಿದೆ. ಜಾಗತಿಕವಾಗಿ ಕೂಡ ಎಚ್ಚರಿಕೆಯ ನಡೆ ಅಗತ್ಯವಿದೆ. ಈ ಸಮಸ್ಯೆಯು ಪ್ರದೇಶದ ಇತರ ರಾಷ್ಟ್ರಗಳಿಗೆ ವಿಸ್ತರಿಸದ ಹೊರತು ಮತ್ತು ಯುಎಸ್ ಮತ್ತು ಇರಾನ್ ನಡುವಿನ ಛಾಯಾ ಸಮರ ನಡೆಯದ ಹೊರತು ತೈಲ ಪೂರೈಕೆಗೆ ಬೆದರಿಕೆಯೊಡ್ಡುವ ಸಾಧ್ಯತೆಯಿಲ್ಲ ಎಂದು ಪರಿಣತರು ಹೇಳುತ್ತಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ದ ಲೈವ್ ಮಿಂಟ್ ವಿಶ್ಲೇಷಣಾ ವರದಿ ತಿಳಿಸಿದೆ.
ಅರ್ಥವ್ಯವಸ್ಥೆಯ ಮೇಲೆ ವಿವಿಧ ರೀತಿಯ ಪರಿಣಾಮ
ತೈಲ ಬೆಲೆಗಳು ಏರಿದಾಗ, ವಿವಿಧ ಕೈಗಾರಿಕೆಗಳಿಗೆ ಉತ್ಪಾದನಾ ವೆಚ್ಚ ಮತ್ತು ವ್ಯವಹಾರಗಳು ಮತ್ತು ಕುಟುಂಬಗಳಿಗೆ ಶಕ್ತಿಯ ವೆಚ್ಚಗಳು ಸಹ ಹೆಚ್ಚಾಗುತ್ತವೆ. ಜಾಗತಿಕ ಹಣದುಬ್ಬರವನ್ನು ಹೆಚ್ಚಿಸುತ್ತವೆ. ಹೆಚ್ಚಿನ ಶಕ್ತಿಯ ಬೆಲೆಗಳು ಮತ್ತು ಹೊಸ ಹಣದುಬ್ಬರದ ಪ್ರವೃತ್ತಿಗಳು ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಕೇಂದ್ರೀಯ ಬ್ಯಾಂಕುಗಳ ಪ್ರಯತ್ನಗಳನ್ನು ದುರ್ಬಲಗೊಳಿಸಬಹುದು. ಇದರೊಂದಿಗೆ, ಜಗತ್ತಿನಾದ್ಯಂತ ಕೇಂದ್ರೀಯ ಬ್ಯಾಂಕ್ಗಳು ಬಡ್ಡಿದರಗಳನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತವೆ. ಇದು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಕಚ್ಚಾ ತೈಲ ಬೆಲೆಗಳು ಏರಿಕೆಯಾಗುತ್ತಿದ್ದಂತೆ ಜಾಗತಿಕ ಆರ್ಥಿಕತೆಯು ಮತ್ತೆ ಹೆಚ್ಚಿನ ಹಣದುಬ್ಬರವನ್ನು ಎದುರಿಸುತ್ತಿದೆ. ತೈಲ ಬೆಲೆಗಳು ಹೆಚ್ಚಾಗಿದ್ದರೆ, ಅಮೆರಿಕ, ಭಾರತ, ಚೀನಾ ಮತ್ತು ತೈಲವನ್ನು ಆಮದು ಮಾಡಿಕೊಳ್ಳುವ ಇತರ ಪ್ರಮುಖ ರಾಷ್ಟ್ರಗಳು ಗಣನೀಯ ಆಮದು ಹಣದುಬ್ಬರವನ್ನು ಎದುರಿಸಬೇಕಾಗುತ್ತದೆ.
ಭಾರತದ ಆರ್ಥಿಕತೆಯ ಮೇಲೆ ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ
ಹೆಚ್ಚಿನ ಆಮದು ಬಿಲ್, ವಿಸ್ತೃತ ಚಾಲ್ತಿ ಖಾತೆ ಕೊರತೆ
ಭಾರತ - ಕಚ್ಚಾ ತೈಲದ ನಿವ್ವಳ ಆಮದುದಾರ ರಾಷ್ಟ್ರ. ಆಮದು ಮೂಲಕವೇ ತನ್ನ ತೈಲ ಅಗತ್ಯಗಳ 85 ಪ್ರತಿಶತದಷ್ಟು ಪೂರೈಸಿಕೊಳ್ಳುತ್ತದೆ. ವರ್ಷವಿಡೀ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಏರುತ್ತಿದ್ದರೆ ಭಾರೀ ಆಮದು ಹೊರೆಯನ್ನು ಹೇರಬಹುದು. ಇದು ವ್ಯಾಪಾರ ಖಾತೆ ಕೊರತೆಗೆ ಕಾರಣವಾಗಬಹುದು. ಏಕೆಂದರೆ ಭಾರತವು ತೈಲ ಆಮದಿನ ಮೇಲೆ ಹೆಚ್ಚು ಖರ್ಚು ಮಾಡಬೇಕಾಗಬಹುದು. ಇದು ದೇಶದ ಚಾಲ್ತಿ ಖಾತೆಯ ಸಮತೋಲನದ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎನ್ನುತ್ತಾರೆ ಪರಿಣತರು.
ಚಾಲ್ತಿ ಖಾತೆ ಕೊರತೆ ಅಥವಾ ಸಿಎಡಿ ಒಂದು ದೇಶದ ಪಾವತಿಯ ಸಮತೋಲನದ ಪ್ರಮುಖ ಸೂಚಕವಾಗಿದೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಕಚ್ಚಾ ದರಗಳಿಂದ ಆವೇಗವನ್ನು ಎತ್ತಿಕೊಳ್ಳುತ್ತದೆ, ಬ್ರೆಂಟ್ ಫ್ಯೂಚರ್ಸ್ನಲ್ಲಿ ಪ್ರತಿ 10 ಡಾಲರ್ ಏರಿಕೆಯು ಸಿಎಡಿಯನ್ನು 0.5 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಭಾರತದ ರೂಪಾಯಿ ಮೌಲ್ಯ ದುರ್ಬಲ
ಹೆಚ್ಚಿನ ತೈಲ ಬೆಲೆಗಳು ಅಮೆರಿಕ ಡಾಲರ್ಗೆ ಹೆಚ್ಚು ನೆರವಾಗುತ್ತದೆ. ಇದು ಇತರೆ ಕರೆನ್ಸಿಗಳಿಗಿಂತ ಹೆಚ್ಚು ಬಲಪಡೆಯುತ್ತದೆ. ಇದು ಭಾರತದ ರೂಪಾಯಿ ದುರ್ಬಲಗೊಳ್ಳುವುದಕ್ಕೆ ಕಾರಣ. ತೈಲ ಆಮದುಗಳಿಗೆ ಭಾರತವು ಡಾಲರ್ ಲೆಕ್ಕದಲ್ಲಿ ಹಣ ಪಾವತಿಸುವುದರಿಂದ ನಷ್ಟ ಹೆಚ್ಚು. ಹೀಗಾಗಿ ಆಮದು ಹೆಚ್ಚಾದಂತೆ ಆರ್ಥಿಕ ಹೊರೆಯೂ ಹೆಚ್ಚುತ್ತದೆ.
ಇದೇ ರೀತಿ ತೈಲ ಮಾರಾಟ ಕಂಪನಿಗಳ ಮೇಲೂ ಅಂತಾರಾಷ್ಟ್ರೀಯ ತೈಲ ದರ ಹೆಚ್ಚಳ ಪರಿಣಾಮ ಬೀರುತ್ತದೆ. ಭಾರತದಲ್ಲಿ ಈ ಕಂಪನಿಗಳು ತೈಲದರವನ್ನು ಸ್ಥಿರವಾಗಿ ಇಟ್ಟುಕೊಳ್ಳಬೇಕಾದರೆ ಲಾಭಾಂಶವನ್ನು ಕಡಿಮೆ ಮಾಡಬೇಕು. ಆದರೆ ನಷ್ಟ ಮಾಡಿಕೊಂಡು ಸ್ಥಿರತೆ ಕಾಪಾಡಲು ಹೊರಟರೆ ಆಗಲೂ ಸಂಕಷ್ಟವನ್ನೇ ಎದುರಿಸಬೇಕಾಗುತ್ತದೆ.