Anupam Kher in Ghost: ಶಿವಣ್ಣನ ‘ಘೋಸ್ಟ್’ ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್!; ಪಾತ್ರ ಹೀಗಿದೆ...
Jan 26, 2023 08:42 PM IST
ಶಿವಣ್ಣನ ಘೋಸ್ಟ್ ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್!; ಪಾತ್ರ ಹೀಗಿದೆ...
- ‘ಓಲ್ಡ್ಮಾಂಕ್’ ಖ್ಯಾತಿಯ ಎಂ.ಜಿ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಘೋಸ್ಟ್’ ಚಿತ್ರದಲ್ಲಿ ಅನುಪಮ್ ಖೇರ್ ನಟಿಸಲಿದ್ದಾರೆ.
Anupam Kher in Ghost: ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ (Shiva rajkumar) ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಆದ ‘ಘೋಸ್ಟ್’ (Ghost) ಚಿತ್ರದ ಮೋಷನ್ ಪೋಸ್ಟರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 80ರ ದಶಕದಲ್ಲಿ ಶಿವಣ್ಣ ಹೇಗಿರುತ್ತಿದ್ದರೋ ಆ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಎದುರಾಗಿ ಅಚ್ಚರಿ ಮೂಡಿಸಿದ್ದರು. ವಿಂಟೇಜ್ ಲುಕ್ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದರು. ಈಗ ಇದೇ ಚಿತ್ರದಿಂದ ಮತ್ತೊಂದು ಅಪ್ಡೇಟ್ ಮಾಹಿತಿ ಹೊರಬಿದ್ದಿದೆ.
ಚಿತ್ರಕ್ಕೆ ಮುಂದಿನ ಫೆಬ್ರವರಿಯಿಂದ ಶೂಟಿಂಗ್ ನಡೆಯಲಿದೆ. ಕಲಾವಿದರು ತಂಡ ಕೂಡಿಕೊಳ್ಳುತ್ತಿದ್ದಾರೆ. ಈಗ ಇದೇ ಚಿತ್ರಕ್ಕೆ ಮತ್ತೋರ್ವ ವರ್ಸಟೇಲ್ ನಟನ ಎಂಟ್ರಿ ಆಗಲಿದೆ. ಅಚ್ಚರಿಯ ವಿಚಾರ ಏನೆಂದರೆ, ಈ ನಟ ಈ ವರೆಗೂ ಕನ್ನಡದ ಸಿನಿಮಾಗಳಲ್ಲಿ ನಟಿಸಿಲ್ಲ. ಬದಲಿಗೆ ಇದೇ ಮೊದಲ ಸಲ ಶಿವಣ್ಣನ ‘ಘೋಸ್ಟ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಆಗಮಿಸುತ್ತಿದ್ದಾರೆ. ಆ ನಟ ಬೇರಾರು ಅಲ್ಲ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್!
‘ಓಲ್ಡ್ಮಾಂಕ್’ ಖ್ಯಾತಿಯ ಎಂ.ಜಿ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಘೋಸ್ಟ್’ ಚಿತ್ರದಲ್ಲಿ ಅನುಪಮ್ ಖೇರ್ ನಟಿಸಲಿದ್ದಾರೆ. ಈಗಾಗಲೇ ಚಿತ್ರತಂಡ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಅವರಿಂದ ಒಪ್ಪಿಗೆಯನ್ನೂ ಪಡೆದುಕೊಂಡಿದೆಯೆಂತೆ. ಇನ್ನೇನು ಶೀಘ್ರದಲ್ಲಿ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ. ಈಗಾಗಲೇ ಸೌತ್ನ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಈಗ ಕನ್ನಡದ ಸರದಿ. ಅಷ್ಟೇ ವಿಶೇಷ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.
'ಘೋಸ್ಟ್' ಎಂದರೆ ಇದು ಹಾರರ್ ಸಿನಿಮಾ ಇರಬಹುದು ಎನ್ನಲಾಗಿತ್ತು. ಅದರೆ ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಶಿವಣ್ಣ ಗ್ಯಾಂಗ್ಸ್ಟರ್ ಅವತಾರದಲ್ಲಿ ಇರಲಿದ್ದಾರೆ ಎಂಬುದನ್ನು ಮೋಷನ್ ಪೋಸ್ಟರ್ನಲ್ಲಿ ಜಗಜ್ಜಾಹೀರು ಮಾಡಿದ್ದರು ನಿರ್ದೇಶಕರು. ಇದೆಲ್ಲ ಒಂದೆಡೆಯಾದರೆ, ಕನ್ನಡದಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಲಿದೆ. ಆ ಕಾರಣಕ್ಕೆ ಬೇರೆ ಬೇರೆ ಭಾಷೆಯ ಕಲಾವಿದರನ್ನು ಈ ಸಿನಿಮಾಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ, 'ಘೋಸ್ಟ್' ಸಿನಿಮಾ ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿದೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಎರಡನೇ ಹಂತದ ಶೂಟಿಂಗ್ ಮುಗಿಸಿತ್ತು. ಫೆಬ್ರವರಿಯಲ್ಲಿ ಮೂರನೇ ಹಂತದ ಶೂಟಿಂಗ್ ಆರಂಭವಾಗಲಿದೆ. ನಿರ್ದೇಶಕ ಶ್ರೀನಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ. ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.