ಅಂತೂ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡ ಭಾಗ್ಯಾ, ಇತ್ತ ತಾಂಡವ್ ಮನೆ ಮುಂದೆ ಶ್ರೇಷ್ಠಾ ಹಾಜರ್; ಭಾಗ್ಯಲಕ್ಷ್ಮೀ ಧಾರಾವಾಹಿ
Apr 25, 2024 08:30 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಏ. 24ರ ಎಪಿಸೋಡ್
Bhagyalakshmi Serial Today Episode: ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 24ರ ಸಂಚಿಕೆ. ಒಂದೆಡೆ ಭಾಗ್ಯಾ ಹೋಟೆಲ್ನಲ್ಲಿ ಕೆಲಸ ಗಳಿಸಿ ಖುಷಿಯಲ್ಲಿದ್ಧಾಳೆ. ಮತ್ತೊಂದೆಡೆ, ಶ್ರೇಷ್ಠಾ, ತನ್ನ ಹಾಗೂ ತಾಂಡವ್ ವಿಚಾರವನ್ನು ಮನೆಯಲ್ಲಿ ಹೇಳುತ್ತೇನೆ ಎಂದು ಬರುತ್ತಾಳೆ.
Bhagyalakshmi Serial: ತಾಂಡವ್ ಶ್ರೇಷ್ಠಾ ಸಂಬಂಧ, ಮದುವೆ ವಿಚಾರವಾಗಿ ಪೂಜಾ ಕೋಪಗೊಂಡಿದ್ದಾಳೆ. ಈ ಮದುವೆ ನಾಟಕ ಎಲ್ಲವನ್ನೂ ನಿಲ್ಲಿಸುವಂತೆ ಇಬ್ಬರಿಗೂ ವಾರ್ನಿಂಗ್ ಮಾಡಿದ್ಧಾಳೆ. ತಪ್ಪು ಮಾಡಿದ್ದರೂ ಇಬ್ಬರೂ ತಾವು ಏನೂ ಮಾಡಿಲ್ಲ ಎನ್ನವಂತೆ ಇದ್ದಾರೆ. ಪೂಜಾ, ಪದೇ ಪದೆ ವಾರ್ನಿಂಗ್ ಕೊಡುವುದನ್ನು ಸಹಿಸದ ಶ್ರೇಷ್ಠಾ, ಇಷ್ಟು ದಿನ ಮುಚ್ಚಿಟ್ಟಿದ್ದ ವಿಚಾರವನ್ನು ನಿಮ್ಮ ಮನೆಯವರ ಮುಂದೆ ಹೇಳುವುದಾಗಿ ಹೋಗುತ್ತಾಳೆ.
ಇತ್ತ ಶ್ರೇಷ್ಠಾ ತಾಯಿ ಯಶೋಧಾ, ಮದುವೆಗೆ ಕರೆಯಲೆಂದು ಕುಸುಮಾಗೆ ಕರೆ ಮಾಡುತ್ತಾಳೆ. ಮದುವೆಗೆ ನಾನು ಮಿಸ್ ಮಾಡದೆ ಬಂದೇ ಬರುತ್ತೇನೆ. ಅಲ್ಲಿ ಶಾಸ್ತ್ರವೆಲ್ಲಾ ನನ್ನದೇ. ನನಗೆ ಗೊತ್ತಿಲ್ಲದಿರುವುದು ಏನೂ ಇಲ್ಲ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ, ನೀವು ಯೋಚನೆ ಮಾಡಬೇಡಿ, ಆದರೂ ನಿಮ್ಮ ಮಗಳು ಮದುವೆ ಆಗುತ್ತಿರುವ ಹುಡುಗನನ್ನು ಇದುವರೆಗೂ ನನಗೆ ನೋಡಲಾಗಲಿಲ್ಲ ಎಂದು ಕುಸುಮಾ ಬೇಸರದಿಂದಲೇ ಹೇಳುತ್ತಾಳೆ. ಅತ್ತ ಯಶೋಧಾ, ತಾಂಡವ್ ನಾಟಕದ ಅಪ್ಪ ಅಮ್ಮ ಸುಂದರಿ, ಮಹೇಶನ ಬಗ್ಗೆ ಮಾತನಾಡುತ್ತಾಳೆ. ಇವರು ಎಂಥ ಜನಗಳು ನನಗಂತೂ ಅರ್ಥವಾಗುತ್ತಿಲ್ಲ. ಮದುವೆ ಆಗುವ ಮುನ್ನವೇ ಸೊಸೆ ಮನೆಗೆ ಬಂದು ಸೇರಿಕೊಂಡಿದ್ದಾರೆ. ನನಗಂತೂ ಈ ಮದುವೆ ಇಷ್ಟವಿಲ್ಲ. ಏನೂ ಮಗಳು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಮದುವೆ ಮಾಡಿಕೊಡುತ್ತಿದ್ದೇವೆ ಎನ್ನುತ್ತಾಳೆ.
ಶ್ರೇಷ್ಠಾಳನ್ನು ನೋಡಿ ಕೋಪಗೊಳ್ಳುವ ತನ್ವಿ
ಕುಸುಮಾ ಹೀಗೆ ಯಶೋಧಾ ಜೊತೆ ಮಾತನಾಡುವಾಗ ಶ್ರೇಷ್ಠಾ, ತಾಂಡವ್ ಮನೆ ಮುಂದೆ ಬಂದು ನಿಲ್ಲುತ್ತಾಳೆ. ಹಿಂದೆಯೇ ಬರುವ ತಾಂಡವ್, ಪರಿಸ್ಥಿತಿ ಅರ್ಥ ಮಾಡಿಕೋ ಮನೆಯವರಿಗೆ ಇದೆಲ್ಲವನ್ನೂ ಹೇಳುವ ಅಗತ್ಯವಿಲ್ಲ ಎನ್ನುತ್ತಾನೆ. ನೀನು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದೀಯ? ನಾನು ನೀನು ಮದುವೆ ಆಗುತ್ತಿದ್ದೇವೆ ಎಂದರೆ ಮಧ್ಯೆ ಬರಲು ಪೂಜಾ ಯಾರು, ಇವತ್ತು ಎಲ್ಲವೂ ನಿಮ್ಮ ಮನೆಯವರಿಗೆ ತಿಳಿಯಲೇಬೇಕು ಎನ್ನುತ್ತಾಳೆ. ಮನೆ ಒಳಗೆ ಹೋಗುವ ಶ್ರೇಷ್ಠಾಳನ್ನು ತಾಂಡವ್ ಕೈ ಹಿಡಿದು ನಿಲ್ಲಿಸುತ್ತಾನೆ. ಅದೇ ಸಮಯಕ್ಕೆ ತನ್ವಿ ಮನೆಗೆ ಬರುತ್ತಾಳೆ. ಶ್ರೇಷ್ಠಾ ಆಂಟಿ ಕೈ ಏಕೆ ಹಿಡಿದುಕೊಂಡಿದ್ದೀರಿ? ಎಂದು ಕೇಳುತ್ತಾಳೆ. ಶ್ರೇಷ್ಠಾ, ಕಾಲು ಜಾರಿ ಕೆಳಗೆ ಬೀಳುತ್ತಿದ್ದಳು ಅದನ್ನು ತಡೆಯಲು ಹಿಡಿದುಕೊಂಡೆ ಎನ್ನುತ್ತಾನೆ. ನೀವು ಹಿಡಿದುಕೊಂಡಿರುವುದು ಆ ರೀತಿ ಇರಲಿಲ್ಲ. ಆಂಟಿ ನಿಮಗೆ ನಾಚಿಕೆ ಆಗುವುದಿಲ್ಲವಾ? ಯಾವಾಗಲೂ ಅಪ್ಪನ ಹಿಂದೆ ಸುತ್ತುತ್ತಾ ಇರುತ್ತೀರಿ ಎಂದು ಕೋಪಗೊಳ್ಳುತ್ತಾಳೆ.
ತಾಂಡವ್, ತನ್ವಿಗೆ ರೇಗುತ್ತಾನೆ. ಇರಲಿ ಬಿಡು ತಾಂಡವ್ ಆಕೆ ಚಿಕ್ಕ ಹುಡುಗಿ, ಏನಾದರೂ ಮಾತನಾಡಲಿ, ತನ್ವಿ ನೀನು ಒಳಗೆ ಹೋಗು ತನ್ವಿ ನಾನು ಏಕೆ ಬಂದರೆ ಎಂಬುದನ್ನು ಹೇಳುತ್ತೇನೆ ಎನ್ನುತ್ತಾಳೆ. ತನ್ವಿ ಕೋಪದಿಂದಲೇ ಮನೆ ಒಳಗೆ ಹೋಗುತ್ತಾಳೆ. ಕುಸುಮಾ, ಯಶೋಧಾ ಬಳಿ ಮಾತನಾಡುವಾಗ ಪೂಜಾ ಗಾಬರಿಯಿಂದ ಈ ಮದುವೆ ನಡೆಯಬಾರದು ಎನ್ನುತ್ತಾಳೆ. ಅದನ್ನು ಕೇಳಿಸಿಕೊಳ್ಳುವ ಕುಸುಮಾ, ಫೋನ್ ಇಟ್ಟು ಏಕೆ ಈ ಮದುವೆ ನಡೆಯಬಾರದು? ಏಕೆ ಈ ರೀತಿ ಹೇಳುತ್ತಿದ್ದೀಯ ಎಂದು ಕೇಳುತ್ತಾಳೆ. ಈ ಮದುವೆ ನಡೆದರೆ ಅಕ್ಕನ ಜೀವನ ಹಾಳಾಗುತ್ತೆ ಎಂದು ಪೂಜಾ ಹೇಳುತ್ತಾಳೆ. ಶ್ರೇಷ್ಠಾ ಮದುವೆ ಆದರೆ ಭಾಗ್ಯಾ ಜೀವನ ಏಕೆ ಹಾಳಾಗುತ್ತದೆ ಎಂದು ಕುಸುಮಾ ಕೇಳುತ್ತಾಳೆ. ಅದಕ್ಕೆ ನಾನು ಉತ್ತರಿಸುತ್ತೇನೆ ಎನ್ನುತ್ತಾ ಶ್ರೇಷ್ಠಾ, ಮನೆಗೆ ಬರುತ್ತಾಳೆ. ಅವಳ ಹಿಂದೆಯೇ ತಾಂಡವ್ ಕೂಡಾ ಬರುತ್ತಾನೆ.
ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡ ಭಾಗ್ಯಾ
ಇತ್ತ ಹೋಟೆಲ್ನಲ್ಲಿ ಕೆಲಸ ಹುಡುಕಿಕೊಂಡು ಹೋಗುವ ಭಾಗ್ಯಾಗೆ ಕಾಫಿ ಮಾಡುವ ಕೆಲಸ ಸಿಗುತ್ತದೆ. ಪರೀಕ್ಷೆ ಮುಗಿದ ನಂತರ ಬಂದು ಬೆಳಗ್ಗಿನಿಂದ ಸಂಜೆವರೆಗೂ ಕೆಲಸ ಮಾಡುತ್ತೇನೆ. ಅಲ್ಲಿವರೆಗೂ ಮಧ್ಯಾಹ್ನ ಬರುತ್ತೇನೆ ಎಂದು ಭಾಗ್ಯಾ ಹೋಟೆಲ್ ಮಾಲೀಕನ ಬಳಿ ಮನವಿ ಮಾಡುತ್ತಾಳೆ. ಆಕೆಯ ಉತ್ಸಾಹ ನೋಡಿದ ಹೋಟೆಲ್ ಮಾಲೀಕ, ಈ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದೀಯ? ನಿಜವಾಗಲೂ ನಿನ್ನಂಥವರಿಗೆ ಸಹಾಯ ಮಾಡಬೇಕು ಎನ್ನುತ್ತಾರೆ.
ಕುಸುಮಾ ಮುಂದೆ ಶ್ರೇಷ್ಠಾ ಎಲ್ಲವನ್ನೂ ಹೇಳುತ್ತಾಳಾ? ಭಾಗ್ಯಾ, ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿರುವುದು ಕುಸುಮಾಗೆ ಗೊತ್ತಾಗಲಿದ್ಯಾ ಅನ್ನೋದು ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.