ಕರಟಕ ದಮನಕ ಚಿತ್ರದ ಡೀಗ ಡಿಗರಿ ಹಾಡು ಬಿಡುಗಡೆ; ಅಬುದಾಬಿಯಲ್ಲಿ ಒಂದೇ ಅಂಗಿಯಲ್ಲಿ ಕೈಹಾಕಿ ಕುಣಿದ ಶಿವಣ್ಣ, ಪ್ರಭುದೇವ
Feb 14, 2024 07:02 PM IST
ಅಬುದಾಬಿಯಲ್ಲಿ ಒಂದೇ ಅಂಗಿಯಲ್ಲಿ ಕೈಹಾಕಿ ಕುಣಿದ ಶಿವಣ್ಣ, ಪ್ರಭುದೇವ; ಕರಟಕ ದಮನಕ ಚಿತ್ರದ ಡೀಗ ಡಿಗರಿ ಹಾಡು ಬಿಡುಗಡೆ
- ಶಿವರಾಜ್ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ನ ಕರಟಕ ದಮನಕ ಸಿನಿಮಾದ ಎರಡನೇ ಹಾಡು ಅಬುದಾಬಿಯಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಮಾರ್ಚ್ 9ರ ಶಿವರಾತ್ರಿ ಪ್ರಯುಕ್ತ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.
Karataka Damanaka Song: ಶಿವರಾಜ್ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ನ ಮೊದಲ ಸಿನಿಮಾ ಕರಟಕ ದಮನಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಯೋಗರಾಜ್ ಭಟ್ ನಿರ್ದೇಶನ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಪ್ರಚಾರ ಕೆಲಸವನ್ನೂ ಆರಂಭಿಸಿದೆ. ಈ ನಡುವೆ ಪ್ರೇಮಿಗಳ ದಿನದ ನಿಮಿತ್ತ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಭಟ್ಟರ ಸಾಹಿತ್ಯದ ಡೀಗ ಡಿಗರಿ ಅನ್ನೋ ಹಾಡು ಅಬುದಾಬಿಯಲ್ಲಿ ರಿಲೀಸ್ ಆಗಿದೆ.
ಕರಟಕ ದಮನಕ ಚಿತ್ರದ ಎರಡನೇ ಗೀತೆ ಡೀಗ ಡಿಗರಿ ಹಾಡು ಸಾಹಿತ್ಯದಿಂದಲೇ ಕ್ಯಾಚಿ ಎನಿಸಿದೆ. ಯೋಗರಾಜ್ ಭಟ್ ಅವರೇ ಬರೆದಿರುವ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಅಬುದಾಬಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಹಾಡು ಬಿಡುಗಡೆಯಾಗಿದೆ. ಶಿವರಾಜಕುಮಾರ್, ಪ್ರಭುದೇವ, ಯೋಗರಾಜ್ ಭಟ್, ರಾಕ್ ಲೈನ್ ವೆಂಕಟೇಶ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಹಾಡು ಮತ್ತು ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ಯೋಗರಾಜ್ ಭಟ್, ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಒಟ್ಟಿಗೆ ಇಬ್ಬರನ್ನು ಹೆಚ್ಚು ಸಲ ನೋಡಿದಾಗ ಅವರನ್ನು ಕರಟಕ ದಮನಕ ಎನ್ನುತ್ತಾರೆ. ಅಬುದಾಬಿಯಲ್ಲಿ ನಮ್ಮ ಚಿತ್ರಕ್ಕಾಗಿ ನಾನೇ ಬರೆದಿರುವ ಎರಡನೇ ಹಾಡು ಡೀಗ ಡಿಗರಿ ಬಿಡುಗಡೆಯಾಗಿದೆ. ಇದು ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆ. ಈ ಚಿತ್ರ ನೋಡಿದ ಪ್ರತಿಯೊಬ್ಬ ವ್ಯಕ್ತಿಗೂ ಅವನ ಊರು, ಆ ಊರಿನಲ್ಲಿ ಎಳೆದ ತೇರು ಹಾಗೂ ಅವನು ಯಾವ ನೀರು ಕುಡಿದು ಬೆಳೆದಿದ್ದಾನೋ ಆ ನೀರು ನೆನಪಾಗುತ್ತದೆ ಎಂದರು.
ಎಲ್ಲರಿಗೂ ಒಂದು ಊರು ಇರುತ್ತದೆ. ಆ ಊರನ್ನು ಬಿಟ್ಟು ಬಂದ ಮೇಲೆ ಪುನಃ ಹೋದಾಗ ಅಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಆ ವಿಷಯ ಇಟ್ಟುಕೊಂಡು ಸಾಕಷ್ಟು ಮನೋರಂಜನೆಯ ಅಂಶಗಳೊಂದಿಗೆ ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಇನ್ನು ಪ್ರಭುದೇವ ಅವರ ಜೊತೆ ಮೊದಲ ಬಾರಿ ನಟಿಸಿರುವುದು ಖುಷಿಯಾಗಿದೆ ಎಂದು ಶಿವರಾಜಕುಮಾರ್ ತಿಳಿಸಿದರು.
ಚಿತ್ರ ಹಾಗೂ ಹಾಡುಗಳು ಚೆನ್ನಾಗಿದೆ. ಶಿವರಾಜಕುಮಾರ್ ಅವರೊಟ್ಟಿಗೆ ನಟಿಸಿರುವುದು ತುಂಬಾ ಸಂತೋಷ ತಂದಿದೆ. ರಾಕ್ ಲೈನ್ ವೆಂಕಟೇಶ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ಅವರ ನಿರ್ದೇಶನ ಕೂಡ ಉತ್ತಮವಾಗಿದೆ ಎಂದು ಪ್ರಭುದೇವ ತಿಳಿಸಿದರು.
ಚಿತ್ರತಂಡದ ಸಹಕಾರದಿಂದ ಕರಟಕ ದಮನಕ ಚೆನ್ನಾಗಿ ಬಂದಿದೆ. ಶಿವರಾತ್ರಿ ಹಬ್ಬಕ್ಕೆ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಡೀಗ ಡಿಗರಿ ಹಾಡಿಗೆ ಶಿವರಾಜಕುಮಾರ್ ಹಾಗೂ ಪ್ರಭುದೇವ ಅವರು ವೇದಿಕೆ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿದರು.