Prakash Raj: ಈಗಲೇ ಕ್ಷಮೆ ಕೇಳು, ಇಲ್ಲದಿದ್ದರೆ..; ಸಂಘ ಪರಿವಾರದ ಕಾರ್ಯಕರ್ತನಿಂದ ಪ್ರಕಾಶ್ ರಾಜ್ಗೆ ಕೊಲೆ ಬೆದರಿಕೆ; ಹೀಗಿದೆ ಪ್ರತಿಕ್ರಿಯೆ
Aug 16, 2023 02:23 PM IST
Prakash Raj: ಈಗಲೇ ಕ್ಷಮೆ ಕೇಳು, ಇಲ್ಲದಿದ್ದರೆ...; ಸಂಘ ಪರಿವಾರದ ಕಾರ್ಯಕರ್ತನಿಂದ ಪ್ರಕಾಶ್ ರಾಜ್ಗೆ ಕೊಲೆ ಬೆದರಿಕೆ; ಪ್ರತಿಕ್ರಿಯೆ ನೀಡಿದ ನಟ
- ಸೌಜನ್ಯ ಕೊಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರಕಾಶ್ ರಾಜ್ ಸಿಎಂ ಅವರ ಗಮನಕ್ಕೆ ತಂದಿದ್ದಾರೆ.
Prakash Raj: ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಟೀಕಿಸುವ ಬಹುಭಾಷಾ ನಟ ಪ್ರಕಾಶ್ ರಾಜ್ಗೆ ಇದೀಗ ಸಂಘ ಪರಿವಾರದ ಕಾರ್ಯಕರ್ತನೊಬ್ಬ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸ್ವತಃ ಪ್ರಕಾಶ್ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಶೇರ್ ಮಾಡಿದ್ದಾರೆ. ಸಿಎಂ ಸೇರಿ ಪೊಲೀಸರ ಗಮನಕ್ಕೂ ತಂದಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಕರುನಾಡಿನಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಲೇ ಇವೆ. ಪರ ವಿರೋಧದ ನಡುವೆ ಎಡ ಬಲವೂ ಅಖಾಡದಲ್ಲಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನ ಕಲಾವಿದರೂ ಸೌಜನ್ಯ ಕೇಸ್ ಪರ ಕೈ ಜೋಡಿಸಿದ ಉದಾಹರಣೆಗಳೂ ಇವೆ.
ಚಿತ್ರನಟರಾದ ದುನಿಯಾ ವಿಜಯ್, ಚೇತನ್ ಅಹಿಂಸಾ ಸೇರಿ ಕನ್ನಡದ ಹಲವು ಕಲಾವಿದರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಂತಮ್ಮ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಅದೇ ರೀತಿ ನಟ ಪ್ರಕಾಶ್ ರಾಜ್ ಸಹ ಧ್ವನಿಯೆತ್ತಿದ್ದರು. ಇದೀಗ ಪ್ರಕಾಶ್ ರಾಜ್ ಅವರ ಹೇಳಿಕೆಗೆ ಸಂಘ ಪರಿವಾರದ ಕಾರ್ಯಕರ್ತರೊಬ್ಬರು ವಿಡಿಯೋ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ.
ಪೊಲೀಸ್ ಗಮನಕ್ಕೆ ತಂದ ಪ್ರಕಾಶ್ ರಾಜ್
ಆ ಕೊಲೆ ಬೆದರಿಕೆಯ ವಿಡಿಯೋವನ್ನು ನಟ ಪ್ರಕಾಶ್ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, "ನೊಡ್ರಪಾ.. ಉತ್ತರ ಕುಮಾರರು.. ಕೊಲೆ ಬೆದರಿಕೆ ಹಾಕ್ತಾ ಇದ್ದಾರೆ.. ಏನ್ ಮಾಡಾಣ ವಸಿ ಯೋಳಿ" ಎಂದು ಸಿಎಂ ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ್, ಡಿಕೆ ಶಿವಕುಮಾರ್, ಡಿಜಿಪಿ ಮತ್ತು ಕರ್ನಾಟಕ ಪೊಲೀಸ್ಗೆ ಟ್ಯಾಗ್ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?
"ಸೌಜನ್ಯ ಪ್ರಕರಣದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಮಂಪರು ಪರೀಕ್ಷೆಗೆ ಮಾಡುವುದರಲ್ಲಿ ತಪ್ಪೇನು? ಇದೇ ಪ್ರಶ್ನೆಯನ್ನು ನಾನು ನಿನಗೆ ಕೇಳಿದ್ರೆ, ಸೌಜನ್ಯ ಪ್ರಕರಣದಲ್ಲಿ ಯಾಕೆ ನೀನೇ ಆರೋಪಿ ಆಗಿರಬಾರದು? ನಿನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಏನು ತಪ್ಪು. ಈ ಪ್ರಶ್ನೆ ನಿನಗೆ ಮಾಡಿದರೆ ಹೇಗೆ? ಅದನ್ನು ಬಗೆಹರಿಸಲು ಅಂಬೇಡ್ಕರ್ ಬರೆದ ಸಂವಿಧಾನ, ನ್ಯಾಯಾಲಯ ಇದೆ. ಹಿಂದೂಗಳ ನಡುವೆ ಒಡಕು ಹುಟ್ಟಿಸಬೇಡ. 24 ಗಂಟೆಯೊಳಗೆ, ಧರ್ಮಸ್ಥಳದ ಸಮ್ಮುಖದಲ್ಲಿ ನೀವಾಡಿದ ಮಾತನ್ನು ವಾಪಸ್ ತೆಗೆದುಕೊಂಡರೆ ನೀನು ಇಲ್ಲಿರಲಿ ಅರ್ಹ. ಯಾರೇ ತಪ್ಪು ಮಾಡಿದರೆ, ಶಿಕ್ಷೆ ಆಗಲಿ. ನೀನೇಕೆ ಮಧ್ಯೆ ಬಾಯಿ ಹಾಕ್ತಿಯಾ. ಕೌಂಟ್ಡೌನ್ ಸ್ಟಾರ್ಟ್ ಮಿಸ್ಟರ್ ಪ್ರಕಾಶ್ ರಾಜ್. ನಿನ್ನ ಮನೆಮುಂದೆ ನಿನ್ನ ಹೆಣ ಬಿದ್ದಿರುತ್ತೆ" ಎಂದು ಹೇಳಿಕೆ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಕಾಶ್ ರಾಜ್ ಹೇಳಿಕೆ ಏನಾಗಿತ್ತು?
ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ನಡೆದ ಸಂವಾದವೊಂದರಲ್ಲಿ ಭಾಗವಹಿಸಿದ್ದ ಪ್ರಕಾಶ್ ರಾಜ್, ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಗುಪ್ತಚರ ಇಲಾಖೆಗೆ ಸಂಶಯಗಳಿದ್ದರೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ" ಎಂದಿದ್ದರು. ಈ ಹೇಳಿಕೆಯೇ ಕೆಲವರನ್ನು ಕೆಂಡವಾಗಿಸಿತ್ತು. ಈ ಹೇಳಿಕೆಗೆ ಸಂಬಂಧಿಸಿದಂತೆ ಸಂಘ ಪರಿವಾರದ ಸಂತೋಷ್ ಕಾರ್ತಾಳ್ ಎಂಬ ಕಾರ್ಯಕರ್ತ ವಿಡಿಯೋ ಮಾಡಿ ಪ್ರಕಾಶ್ ರಾಜ್ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಿದೆ ಆ ವಿಡಿಯೋ.
ಮನರಂಜನೆ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ