HD DeveGowda: ಮಾಜಿ ಪ್ರಧಾನಿ ಎಚ್ಡಿದೇವೇಗೌಡ ಆಸ್ಪತ್ರೆಗೆ ದಾಖಲು, ಹೇಗಿದೆ ಅವರ ಆರೋಗ್ಯ
Feb 15, 2024 05:37 PM IST
ಅನಾರೋಗ್ಯದ ಕಾರಣದಿಂದ ಮಾಜಿ ಪ್ರಧಾನಿ ಎಚ್ಡಿದೇವೇಗೌಡ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
- Political News ಬೆಂಗಳೂರಿನಲ್ಲಿ ಅನಾರೋಗ್ಯಕ್ಕೆ ಒಳಗಾದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್ಡಿದೇವೇಗೌಡ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಗುರುವಾರ ಮಧ್ಯಾಹ್ನ ದಾಖಲಿಸಲಾಗಿದೆ.ಸಾಕಷ್ಟು ಆಯಾಸಗೊಂಡಿದ್ದ ಅವರನ್ನು ಪದ್ಮನಾಭ ನಗರದ ಅವರ ನಿವಾಸದಿಂದ ಕೂಡಲೇ ವಿಶೇಷ ಆಂಬುಲೆನ್ಸ್ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ 91 ದಾಟಿರುವ ದೇವೇಗೌಡರು ಸಕ್ರಿಯ ರಾಜಕೀಯದಲ್ಲಿದ್ದಾರೆ. ನಾಲ್ಕೈದು ದಿನದಿಂದ ಲೋಕಸಭೆ ಚುನಾವಣೆ, ರಾಜ್ಯಸಭೆ ಚುನಾವಣೆ ಸೇರಿದಂತೆ ಹಲವಾರು ರಾಜಕೀಯ ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಆಯಾಸಗೊಂಡ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ವೈದ್ಯರನ್ನು ಸಂಪರ್ಕಿಸಿದಾಗ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರಿಂದ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಒಂದು ವರ್ಷದಿಂದ ದೇವೇಗೌಡ ಅವರಿಗೆ ನಡೆಯಲು ಆಗುವುದಿಲ್ಲ. ವೀಲ್ ಚೇರ್ನಲ್ಲಿಯೇ ಅವರನ್ನು ಕರೆದುಕೊಂಡು ಹೋಗಬೇಕು. ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲೆ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ತುಲಾಭಾರ ನಡೆಸಿದ್ದ ದೇವೇಗೌಡರು ಆನಂತರ ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಮಂದಿರಕ್ಕೂ ಹೋಗಿ ಬಂದಿದ್ದರು.
ಕರ್ನಾಟಕದಲ್ಲಿ ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿ ವಿಚಾರದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆನಂತರ ಸದನಕ್ಕೂ ಹೋಗಿ ಬಂದಿದ್ದರು.
ಗುರುವಾರ ಬೆಳಗಿನಿಂದ ಕೊಂಚ ಆರೋಗ್ಯದಲ್ಲಿ ಏರು ಪೇರಾಗಿದೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಚಿಕಿತ್ಸೆಗೆ ದೇವೇಗೌಡರು ಸ್ಪಂದಿಸುತ್ತಿರುವುದರಿಂದ ಒಂದೆರಡು ದಿನದಲ್ಲಿ ಬಿಡುಗಡೆಯಾಗಬಹುದು ಎನ್ನುವ ಮಾಹಿತಿಯನ್ನು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ದೇವೇಗೌಡರು ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಅವರ ಬೆಂಬಲಿಗರು, ಅಭಿಮಾನಿಗಳು ಆಸ್ಪತ್ರೆ ಕಡೆಗೆ ಬರುತ್ತಿರುವುದು ಕಂಡು ಬಂದಿತು.
ಸಾಮಾಜಿಕ ಮಾಧ್ಯಮದಲ್ಲೂ ಹಲವರು ದೇವೇಗೌಡರು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.