Karnataka Jds: ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ವಜಾ: ಮತ್ತೆ ಎಚ್ಡಿಕುಮಾರಸ್ವಾಮಿಗೆ ಅಧ್ಯಕ್ಷ ಸ್ಥಾನದ ಪಟ್ಟ
Oct 19, 2023 02:17 PM IST
ಜೆಡಿಎಸ್ ಅಧ್ಯಕ್ಷ ಸಿ.ಎಂಇಬ್ರಾಹಿಂ ಅವರನ್ನು ವಜಾಗೊಳಿಸಲಾಗಿದ್ದು ಎಚ್ಡಿಕುಮಾರಸ್ವಾಮಿ ಅವರಿಗೆ ಪಕ್ಷದ ಉಸ್ತುವಾರಿ ನೀಡಲಾಗಿದೆ.
- Karnataka JDS Updates ಈಗಾಗಲೇ ಎನ್ಡಿಎ(NDA)ದೊಂದಿಗೆ ಸಖ್ಯ ಬೆಳೆಸಲು ಮುಂದಾಗಿರುವ ಜೆಡಿಎಸ್( JDS) ಪದಾಧಿಕಾರಿಗಳನ್ನು ವಿಸರ್ಜಿಸಿದೆ. ಆ ಮೂಲಕ ಮೈತ್ರಿ ವಿರೋಧಿಸಿದ್ದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ( CM Ibrahim) ಅವರನ್ನು ವಜಾಗೊಳಿಸಲಾಗಿದ್ದು, ಮಾಜಿ ಅಧ್ಯಕ್ಷ ಎಚ್ಡಿಕುಮಾರಸ್ವಾಮಿ( HD Kumar Swamy) ಅವರಿಗೆ ಪಕ್ಷದ ಚುಕ್ಕಾಣಿ ನೀಡಲಾಗಿದೆ.
ಬೆಂಗಳೂರು: ಪಕ್ಷದ ನಾಯಕರ ವಿರುದ್ದವೇ ತಿರುಗಿಬಿದ್ದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಮಾಜಿ ಸಿಎಂ ಹಾಗೂ ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಅಡ್ಹಾಕ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗುರುವಾರ ತುರ್ತು ಜೆಡಿಎಸ್ ಸಭೆ ಕರೆದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಈ ತೀರ್ಮಾನ ಪ್ರಕಟಿಸಿದ್ಧಾರೆ.
ಈ ಕುರಿತು ಆದೇಶ ಪ್ರತಿ ಬಿಡುಗಡೆ ಮಾಡಿರುವ ಎಚ್.ಡಿ.ದೇವೇಗೌಡ, ಕರ್ನಾಟಕ ಪ್ರದೇಶ ಜನತಾದಳ( ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಇಡೀ ಘಟಕವನ್ನು ವಿಸರ್ಜನೆ ಮಾಡಲಾಗಿದೆ. ಮುಂದುವರೆದು ಪಕ್ಷದ ಕಾರ್ಯಚಟುವಟಿಕೆಗಳನ್ನು ಸುಲಲಿತವಾಗಿ ನಡೆಸಿಕೊಂಡು ಹೋಗಲು ಕರ್ನಾಟಕ ಜನತಾದಳ( ಜಾತ್ಯತೀತ) ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಅ ವರನ್ನು ಪಕ್ಷದ ಅಡಹಾಕ್ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಜೆಪಿಭವನದಲ್ಲಿ ಗುರುವಾರ ನಡೆದ ಪಕ್ಷದ ಕೋರ್ಕಮಿಟಿ ಸಭೆಯಲ್ಲಿ ಪದಾಧಿಕಾರಿಗಳ ವಿಸರ್ಜನೆಯನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು. ಬಳಿಕ ಮಾತನಾಡಿದ ಎಚ್ಡಿ.ದೇವೇಗೌಡ, ಯಾರನ್ನೂ ನಾವು ಉಚ್ಛಾಟನೆ ಮಾಡಿಲ್ಲ. ಬದಲಿಗೆ ಜೆಡಿಎಸ್ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಹೊಸ ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಹೇಳಿದರು.
ಇಬ್ರಾಹಿಂ ವಿರೋಧ
ಜೆಡಿಎಸ್ ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಜತೆ ಮೈತ್ರಿ ಸಾಧಿಸಲು ಮುಂದಾಗಿದೆ. ಇದನ್ನು ಇಬ್ರಾಹಿಂ ಬಲವಾಗಿ ವಿರೋಧಿಸಿದ್ದರು. ಜಾತ್ಯತೀತ ಪಕ್ಷವಾಗಿರುವುದರಿಂದ ಬಿಜೆಪಿ ಜತೆಗೆ ಹೋಗುವುದು ಬೇಡ ಎಂದು ಹೇಳಿದ್ದರು.
ಅಲ್ಲದೇ ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಪಕ್ಷದ ರಾಜ್ಯಾಧ್ಯಕ್ಷ ನಾನ್ಯಾಕೆ ಪಕ್ಷ ಬಿಟ್ಟು ಹೋಗಲಿ ಎಂದು ಸಿ.ಎಂ.ಇಬ್ರಾಹಿಂ ಟೀಕಾ ಪ್ರಹಾರ ನಡೆಸಿದ್ದರು. ಇಬ್ರಾಹಿಂ ಮಾತಿಗೆ ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರೆ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದರು.
ಅಲ್ಲದೇ ಕೆಲ ಜೆಡಿಎಸ್ ನಾಯಕರು ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಪಟ್ಟು ಹಿಡಿದಿದ್ದರು.
ಅದರಂತೆ ಇದೀಗ ಅಂತಿಮವಾಗಿ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಇಬ್ರಾಹಿಂ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.
ಇದರೊಂದಿಗೆ ಪಕ್ಷದಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಒಂದು ರೀತಿ ತೆರೆ ಬಿದ್ದಿದೆ. ಆದರೆ ರಾಜಕೀಯ ಚಟುವಟಿಕೆಗಳು ಮುಂದುವರೆಯಲಿವೆ. ಮೂರನೇ ಬಾರಿಗೆ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ.
ಇಬ್ರಾಹಿಂ ತಿರುಗೇಟು
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿರುವ ಸಿ.ಎಂ.ಇಬ್ರಾಹಿಂ, ನಾನೇ ಈಗಲೂ ಜೆಡಿಎಸ್ ಅಧ್ಯಕ್ಷ. ಏಕಾಏಕಿ ನನ್ನನ್ನು ಕಿತ್ತು ಹಾಕಲು ಬರುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುವೆ. ಚುನಾವಣೆ ಆಯೋಗಕ್ಕೂ ದೂರು ನೀಡುವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಟೀಕೆ
ಜೆಡಿಎಸ್ ಅಧ್ಯಕ್ಷರ ಪದಚ್ಯುತಿಯಲ್ಲಿ ಕಾಂಗ್ರೆಸ್ ಕಟುವಾಗಿಯೇ ಟೀಕಿಸಿದೆ.
ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ! ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ವೇಷ ತೊಡುವ ನಿಮ್ಮ ಬಣ್ಣದೋಕುಳಿಯಾಟಕ್ಕೆ ಗೋಸುಂಬೆಯೇ ಲಾಗ ಹೊಡೆದಿದೆ ಎಂದು ಕೆಪಿಸಿಸಿ( KPCC) ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಹಿಂದಿನ ನಿಮ್ಮ ಎಲ್ಲ ಅಕ್ರಮ, ಅನಾಚಾರ, ಅವ್ಯವಹಾರಗಳು ಹೊರಬರುತ್ತವೆ ಎಂದು ಹೆದರಿ ಬಿಜೆಪಿ ಸೆರಗಿನೊಳಗೆ ಸೇರಿಕೊಂಡಿರುವ ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ "ಕೋಮು-ಕುಂಡ"ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕುಮಾರಸ್ವಾಮಿಯವರೇ,
ಮೊದಲ ಬಾರಿ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೆ ವಚನ ಭ್ರಷ್ಟರಾದಿರಿ, ದ್ರೋಹ ಮಾಡಿದಿರಿ. ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಿದಾಗ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಹೇಳಿದ್ದರು. "ಶಿವಕುಮಾರ್, ಈ ಅಪ್ಪ ಮಕ್ಕಳನ್ನು ನಂಬಬೇಡಿ, ಬಳಸಿ ಬಿಸಾಡುತ್ತಾರೆ. ಹಾವು ಇವರ ಲಾಂಚನ" ಎಂದು. ಆದರೆ ಸಿದ್ದಾಂತಕ್ಕಾಗಿ ಕಾಂಗ್ರೆಸ್ ನಿಮ್ಮ ಜತೆ ನಿಂತಿತ್ತು. ಕಾಂಗ್ರೆಸ್ ದಯಾಭಿಕ್ಷೆಯಿಂದ ಎರಡನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ? ಓಹ್.. ಕ್ಷಮಿಸಿ, ಆತ್ಮಸಾಕ್ಷಿ ಮಾರಿಕೊಂಡೇ ರಾಜಕೀಯ ಬಯಲಾಟ ಆಡುವ ನಿಮ್ಮಂತವರಿಂದ ನೀತಿ, ನಿಯತ್ತು, ನೈತಿಕತೆ ನಿರೀಕ್ಷೆ ಮಾಡುವುದೇ ಮಹಾಪಾಪ ಎಂದು ಟೀಕಿಸಿದೆ.