Hampi Utsav:ಹಂಪಿ ಉತ್ಸವಕ್ಕೂ ಮುನ್ನ ವಿಜಯನಗರ ವಸಂತ ವೈಭವ ಮೆರವಣಿಗೆಗೆ ಚಾಲನೆ
Jan 26, 2023 08:38 PM IST
ಹಂಪಿ ಉತ್ಸವದ ಲೋಗೋ
- ಜನವರಿ 27, 28 ಹಾಗೂ 29 ರಂದು ಹಂಪಿ ಉತ್ಸವ ನಡೆಯಲಿದೆ. ಇಂದು ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆಯ ವಡಕರಾಯನ ದೇವಸ್ಥಾನದಿಂದ ಪ್ರಾರಂಭವಾದ ವಸಂತ ವೈಭವ ಮೆರವಣಿಗೆಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ವಿಜಯನಗರ: ಹಂಪಿ ಉತ್ಸವದ ಮೆರುಗನ್ನ ವಸಂತ ವೈಭವ ಮೆರವಣಿಗೆ ಇನ್ನಷ್ಟು ಹೆಚ್ಚಿಸಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು.
ಜನವರಿ 27, 28 ಹಾಗೂ 29 ರಂದು ಹಂಪಿ ಉತ್ಸವ ನಡೆಯಲಿದೆ. ಇಂದು ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆಯ ವಡಕರಾಯನ ದೇವಸ್ಥಾನದಿಂದ ಪ್ರಾರಂಭವಾದ ವಸಂತ ವೈಭವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಮತ್ತು ರಾಜ್ಯದ ಜನತೆಗೆ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ ಪ್ರಮುಖ ಪಾತ್ರವಹಿಸುತ್ತದೆ. ಇಂದು ಉತ್ಸವದ ಮುನ್ನಾದಿನ ದೇಶದ ಭಾಗಗಳಿಂದ ಆಗಮಿಸಿರುವ ಕಲಾತಂಡಗಳು ವಸಂತ ವೈಭವ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಇನ್ನಷ್ಟು ಮೆರಗನ್ನು ಹೆಚ್ಚಿಸಿವೆ ಎಂದರು.
ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಲಿರುವ ನೂರಕ್ಕೂ ಹೆಚ್ಚು ಕಲಾತಂಡಗಳು, ಕಂಸಾಳೆ, ಪೂಜಾಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಚಿಲಿಪಿಲಿ ಗೊಂಬೆ, ಆಲಾಯಿ ಹೆಜ್ಜೆಮೇಳ, ಸೋಮನ ಕುಣಿತ, ಮಹಿಳಾ ವೀರಗಾಸೆ, ಕೊಂಬು ಕಹಳೆ, ಚಂಡೆ ವಾದನ, ಝಾಂಜ್ ಮೇಳ, ಮೋಜಿನ ಗೊಂಬೆ, ಜಗ್ಗಲಿಗಿ, ಖಡ್ಗವರಸೆ, ನವಿಲು ಕುಣಿತ, ಮರಗಾಲು ಬೀಸು, ಕಂಸಾಳೆ, ಸಿಂಧೋಳ ಕುಣಿತ, ಸಮಾಳ ಮತ್ತು ನಂದಿಕೋಲು, ಕುದುರೆ ಕುಣಿತ, ನಾದಸ್ವರ, ಡೊಳ್ಳುಕುಣಿತ, ಕೋಲಾಟ, ಹಗಲು ವೇಷ, ಸಿಂಧೋಳ್ ಕುಣಿತ, ತಾಷಾರಂಡೋಲ್, ಗೊಂದಲಿಗರಹಾಡು, ಗೊರವರ ಕುಣಿತ, ಕೇರಳ ತಂಡದಿಂದ ಪೂಜಾಕುಣಿತ, ಕಾಳೆವೇಷಂ, ಕಥಕಳಿ, ಪಂಜಾಬಿ ಡೋಲ್, ತಮಿಳುನಾಡಿನ ತಂಡದಿಂದ ಕೋಳೀನೃತ್ಯ, ಆಂಧ್ರಪ್ರದೇಶದ ಗೊರವರ ಕುಣಿತ ಹೀಗೆ ಹಲವಾರು ನೃತ್ಯ ಪ್ರಕಾರಗಳ ಮೆರವಣಿಗೆಯನ್ನ ನೋಡಿ ದೇಶದ ಸಂಸ್ಕೃತಿಯನ್ನು ಕಣ್ತುಂಬಿಸಿಕೊಂಡಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವರಾದ ಆನಂದ್ಸಿಂಗ್, ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ಅಪರ ಜಿಲ್ಲಾಧಿಕಾರಿ ಅನುರಾಧ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಉಪಸ್ಥಿತರಿದ್ದರು.
ಹಂಪಿ ಉತ್ಸವ ರಾಜ್ಯದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ಈ ಉತ್ಸವವನ್ನು ಮೊದಲಿಂದಲೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಮೂರು ದಿನಗಳ ಕಾಲ ಆ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಮೂರು ದಿನಗಳ ಉತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಈಗಾಗಲೇ ಮೂಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯನಗರದ ಸುಪ್ರಸಿದ್ಧ ಹಂಪಿ ಉತ್ಸವದ ನಿಮಿತ್ತ ನಮ್ಮ ಪಾರಂಪರಿಕ ಶಿಲ್ಪಕಲಾ ಶಿಬಿರಗಳನ್ನು ಆಯೋಜನೆ ಮಾಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಕಲಾ ಪ್ರಕಾರಗಳನ್ನು ವೀಕ್ಷಿಸಿದ ಶಶಿಕಲಾ ಜೊಲ್ಲೆ ಕಲಾವಿದರನ್ನು ಪ್ರೋತ್ಸಾಹಿಸಿದರು.