North India Rains: ಉತ್ತರದಲ್ಲಿ ಮತ್ತೆ ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ ಭಾರೀ ಮಳೆಗೆ 21 ಮಂದಿ ಸಾವು
Sep 12, 2023 08:51 AM IST
ಉತ್ತರ ಪ್ರದೇಶದಲ್ಲಿ ಭಾರೀ ಮಳೆಗೆ ಹಲವು ನಗರಗಳ ರಸ್ತೆಗಳು ಜಲಾವೃತಗೊಂಡು ಜನ ಸಂಚಾರಕ್ಕೆ ಅಡಚಣೆಯಾಗಿದೆ.
- Rain hits Uttar Pradesh ಉತ್ತರ ಭಾರತದಲ್ಲಿ ಮಳೆ ಅಬ್ಬರ ಮತ್ತೆ ಶುರುವಾಗಿದೆ. ಉತ್ತರ ಪ್ರದೇಶ ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯಿಂದ ಭಾರೀ ಅನಾಹುತಗಳಾಗಿವೆ. ಹಲವು ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.
ದೆಹಲಿ: ಉತ್ತರ ಭಾರತದಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಒಂದೇ ದಿನ 21 ಮಂದಿ ಜೀವ ಕಳೆದುಕೊಂಡಿದ್ದಾರೆ.
ದಿಲ್ಲಿಯಲ್ಲೂ ಮಳೆಯಾಗುತ್ತಿದ್ದು,. ಮಧ್ಯಪ್ರದೇಶ, ರಾಜಸ್ತಾನದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಸೋಮವಾರವಂತೂ ಉತ್ತರ ಪ್ರದೇಶದ ಬಹುತೇಕ ಕಡೆಗಳಲ್ಲಿ ಮಳೆ ಸುರಿದಿದೆ. ಮಂಗಳವಾರವೂ ಮಳೆ ಮುಂದುವರಿದಿದ್ದು. ಇನ್ನೂ ನಾಲ್ಕೈದು ದಿನ ಉತ್ತರ ಪ್ರದೇಶದಲ್ಲಿ ಮಳೆಯ ವಾತಾವರಣ ಇರಲಿದೆ.
ಸೋಮವಾರ ಸುರಿದ ಭಾರೀ ಮಳೆಗೆ ಒಟ್ಟು 21 ಜನ ಮೃತಪಟ್ಟಿದ್ಧಾರೆ. ಇದರಲ್ಲಿ ನಾಲ್ವರು ಮಿಂಚಿಗೆ ಸಿಲುಕಿದರೆ, ಇನ್ನಿಬ್ಬರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದ ಹರಡೋಯಿಯಲ್ಲಿ ನಾಳ್ವರು. ಬಾರಾಬಂಕಿಯಲ್ಲಿ ಮೂವರು ಹಾಗೂ ಪ್ರತಾಪ್ಗರ್ಹ್ ಹಾಗೂ ಕನೌಜ್ನಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಅಮೇಥಿ, ಡಿಯೋರಿಯಾ, ಜಲೌನ್, ಕಾನ್ಪುರ, ಉನ್ನಾವೋ, ಸಂಭಾಲ್, ರಾಮಪುರ ಹಾಗೂ ಮುಜಾಫರ್ ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮಳೆಯಿಂದ ಜೀವ ಕಳೆದುಕೊಂಡಿದ್ದಾರೆ. ಭಾರೀ ಮಳೆ ಉತ್ತರ ಪ್ರದೇಶದ ಕೇಂದ್ರ ಭಾಗದ ಜಿಲ್ಲೆಗಳಲ್ಲಿ ಅನಾಹುತಗಳನ್ನುಂಟು ಮಾಡಿದೆ.
ಮೊರದಾಬಾದ್, ಕನೌಜ್, ರಾಮಪುರ್, ಲಕಲ್ನೋ, ಫಿರೋಜಬಾದ್, ಶಹಜಹಾನ್ಪುರ, ಕಾನ್ಪುರ, ಲಖೀಂಪುರ್ ಖೇರಿ, ಫತೇಪುರ್, ಬಿಜನೋರ್, ಹತ್ರಾಸ್ ಸೇರಿದಂತೆ 22 ಜಿಲ್ಲೆಗಳಲ್ಲಿ 40 ಮಿ.ಮೀಗೂ ಅಧಿಕ ಮಳೆ ಸುರಿದಿದೆ. ಈ ಭಾಗದಲ್ಲಿ ಮಳೆ ಮನೆಗಳಿಗೂ ನುಗ್ಗಿದ ಸನ್ನಿವೇಶ ನಿರ್ಮಾಣವಾಗಿದ್ದು. ಅಲ್ಲಲ್ಲಿ ಜನ ಕೊಚ್ಚಿಕೊಂಡು ಹೋಗಿದ್ದಾರೆ. ಹಲವು ಕಡೆ ನೀರು ಮುಂದೆ ಹರಿಯದೇ ನಿಂತು ಜಲಾವೃತ ಕೂಡ ಆಗಿದೆ. ಲಕ್ನೋ ಸೇರಿದಂತೆ ಹಲವು ಕಡೆ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ. ಹಲವು ಕಡೆ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಬರಬಂಕಿ ಸೇರಿ ಕೆಲವು ಜಿಲ್ಲೆಗಳಲ್ಲಿ ರೈಲು ಸಂಚಾರವೂ ವ್ಯತ್ಯಯವಾಗಿದೆ. ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು. ಅಧಿಕಾರಿಗಳು ತುರ್ತು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರ.
ಮಳೆಯಿಂದ ತೊಂದರೆಗೆ ಒಳಗಾಗಿರುವ 173 ಗ್ರಾಮಗಳಲ್ಲಿ 55,982 ಜನ ತೊಂದರೆಗೆ ಸಿಲುಕಿದ್ದು,. ಅವರಿಗೆ ಪರಿಹಾರ ಕೇಂದ್ರಗಳ ಮೂಲಕ ನೆರವು ನೀಡಲಾಗುತ್ತಿದೆ. ಆಹಾರದ ಪ್ಯಾಕೇಟ್ಗಳನ್ನು ವಿತರಣೆ ಮಾಡಲಾಗುತ್ತಿದೆ.
ಹಲವೆಡೆ ಮುನ್ನೆಚ್ಚರಿಕೆ
ಉತ್ತರಾಖಂಡ್ನಲ್ಲೂ ಈಗಾಗಲೇ ಮಳೆ ಬರುತ್ತಿದೆ.ಬುಧವಾರ ನಂತರ ಮಳೆ ಪ್ರಮಾಣ ಹೆಚ್ಚಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ( IMD) ಮುನ್ನೆಚ್ಚರಿಕೆಯನ್ನು ನೀಡಿದೆ.
ಸೆ.13ರಿಂದ ಸೆ. 21 ರವರೆಗೆ ಉತ್ತರಾಖಂಡ್ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ನಾಲ್ಕನೇ ವಾರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎನ್ನುವುದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಬಿಕ್ರಂ ಸಿಂಗ್ ವಿವರಣೆ.
ಇದಲ್ಲದೇ ಅಸ್ಸಾಂ, ಒಡಿಶಾ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಆಂಧ್ರಪ್ರದೇಶದ ಕರಾವಳಿ ಭಾಗದಲ್ಲೂ ಮಂಗಳವಾರ ಮಳೆಯಾಗಲಿದೆ. ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮಬಂಗಾಲ, ಜಾರ್ಖಂಡ್, ಬಿಹಾರ ಭಾಗದಲ್ಲೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.