Kalaburagi News: ಶಿಥಿಲಗೊಂಡ ಶಾಲೆ ಕಟ್ಟಡಗಳ ಪಟ್ಟಿ ನೀಡಿ; ತಾಪಂ ಅಧಿಕಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಸೂಚನೆ
Jun 06, 2023 07:45 AM IST
ಕಲಬುರಗಿಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ಸೋಮವಾರ (ಜೂ.5) ನಡೆಯಿತು. ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Kalaburagi News: ಶಿಥಿಲಗೊಂಡ ಶಾಲೆಗಳ ಪಟ್ಟಿ ಸಿದ್ಧಪಡಿಸಿ ನೀಡಿದರೆ ಕೆಕೆಆರ್ಡಿಬಿಯಿಂದ ಅನುದಾನ ಪಡೆದು ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ತಿಳಿಸಿದರು.
ಅವರು ಕಲಬುರಗಿ ನಗರದ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಈ ಸೂಚನೆ ನೀಡಿದರು.
ಹುಣಸಿ ಹಡಗಿಲ್ ಶಾಲೆ ಸೋರಿಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಹಲವಾರು ಶಾಲೆಗಳು ಶಿಥಿಲಗೊಂಡಿವೆ. ಇಂತಹ ಶಿಥಿಲಗೊಂಡ ಶಾಲೆಗಳ ಪಟ್ಟಿ ಸಿದ್ಧಪಡಿಸಿ ನೀಡಿದರೆ ಕೆಕೆಆರ್ಡಿಬಿಯಿಂದ ಅನುದಾನ ಪಡೆದು ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಿಕ್ಷಣಾಧಿಕಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಸೂಚಿಸಿದರು.
ನಿಗದಿತ ಸಮಯಕ್ಕೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಪ್ರವೇಶ ನೀಡಬೇಕು. ಅತಿಥಿ ಶಿಕ್ಷಕರನ್ನು ನಿಯೋಜಿಸಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು. ಬಿಸಿಯೂಟ ನೀಡಬೇಕು ಎಂದು ಹೇಳಿದರು.
ವೈದ್ಯರ ಹಾಜರಾತಿ ಕಡ್ಡಾಯ
ಕಲಬುರಗಿ ತಾಲೂಕಿನ ಅನೇಕ ಪಿಎಚ್ಸಿ, ಸಿಎಚ್ಸಿಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬಂದಿರೋದಿಲ್ಲವೆಂಬ ಜನರ ದೂರುಗಳಿವೆ. ಹಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಇಲ್ಲದೆ ಹೋದರೆ ಜನ ಏನ್ ಮಾಡಬೇಕು? ಎಲ್ಲರೂ ಕಲಬುರಗಿಗೆ ಬಂದು ಕೂಡಬೇಕೆ ? ತಕ್ಷಣ ವೈದ್ಯರು ಸೇರಿದಂತೆ ಪೂರಕ ಸಿಬ್ಬಂದಿ ಹಾಜರಾತಿ ಕಡ್ಡಾಯವಾಗಲಿ ಎಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಶಿಕ್ಷಕರ ನೇಮಕಾತಿಗೆ ಮನವಿ
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಮ್ಮ ಡವಳಗಿ ಮಾತನಾಡಿ, ಕಲಬುರಗಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 503 ಶಾಲೆಗಳಿವೆ. ಪ್ರಾಥಮಿಕ ಶಾಲೆಗಳಿಗೆ ಒಟ್ಟು 140 ಶಿಕ್ಷಕರ ಕೊರತೆ ಇದೆ. ಈ ಪೈಕಿ 80 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಡಿಡಿಪಿಐ ಸೂಚನೆ ನೀಡಿದ್ದು, ಈಗಾಗಲೇ ಅರ್ಜಿಗಳು ಬಂದಿದ್ದು, ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಉಳಿದ 60 ಶಿಕ್ಷಕರನ್ನು ನೇಮಿಸಿಕೊಳ್ಳಲು ಶಾಸಕರಿಗೆ ಮನವಿ ಮಾಡಿದರು.
ಪ್ರೌಢ ಶಾಲೆಯಲ್ಲಿ 12 ಶಿಕ್ಷಕರ ಕೊರತೆ ಇತ್ತು. 11 ಅತಿಥಿ ಶಿಕ್ಷಕರನ್ನು ನಿಯೋಜನೆಗೆ ಕ್ರಮಕೈಗೊಳ್ಳಲಾಗಿದೆ. ಪಠ್ಯಪುಸ್ತಕ ಮತ್ತು ಸಮವಸ್ತ್ರ ಈಗಾಗಲೇ ವಿತರಣೆ ಮಾಡಲಾಗಿದೆ. ಶಿಥಿಲಗೊಂಡ ಶಾಲೆಗಳ ಪಟ್ಟಿ ಸಿದ್ಧಪಡಿಸಿ ತಮಗೆ ತಲುಪಿಸಲಾಗುವುದು ಎಂದು ಶಾಸಕರಿಗೆ ತಿಳಿಸಿದರು.
ಸಭೆಯಲ್ಲಿ ಶಾಸಕರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಬರುವ ಸಭೆಗೆ ಸೂಕ್ತ ವಿವರಗಳೊಂದಿಗೆ ಸಭೆಗೆ ಹಾಜರಾಗಲು ಸೂಚಿಸಿದರು.
ಸ್ವಂತ ಅಂಗನವಾಡಿ ಕಟ್ಟಡ ಹೊಂದಲಿ
ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಲಿ. ಅಗತ್ಯ ಅನುದಾನ ತರೋಣ ಎಂದರು, ಅಪೌಷ್ಠಿಕ ಮಕ್ಕಳ ಸಂಖ್ಯೆ ಕಲಬುರಗಿ ತಾಲೂಕಿನಲ್ಲಿ ಹೆಚ್ಚಿರುವುದರಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ತೂಕ ಇತ್ಯಾದಿ ನೋಡುವ ಕೆಲಸವಾಗಬೇಕು. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಕೈಗೊಂಡ ಕ್ರಮಗಳು ಇನ್ನೂ ಮಕ್ಕಳ ಸ್ನಹಿಯಾಗಬೇಕೆಂದರು
ಪೈಪ್ ಲೈನ್ ಪೂರ್ಣಗೊಳಿಸಿ
ಜಲ್ ಜೀವನ ಮಿಷನ್ ಕಾಮಗಾರಿ ಪ್ರಗತಿ ಎಲ್ಲಿಗೆ ಬಂದಿದೆ? ತಾಲೂಕಿನ ಅನೇಕ ಹಳ್ಳಿಗಳಲ್ಲಿ ರಸ್ತೆ ಅಗೆದು ಇಟ್ಟರೂ ಪೈಪ್ಲೈನ್ ಆಗಿಲ್ಲ. ಕೊಳವೆ ಮಾರ್ಗಆದಲ್ಲಿ ನೀರು ಹರಿತಿಲ್ಲವೆಂದು ದೂರಿದಾಗ ಸ್ಪಂದಿಸಿದ ಅದಿಕಾರಿಗಳು ಇನ್ನೂ 10 ಕಾಮಗಾರಿ ಟೆಂಡರ್ನಲ್ಲಿವೆ. 9 ಪೂರ್ಣಗೊಂಡಿವೆ. ದೂರು ಬಂದಲ್ಲಿ ಗಮನಿಸೋದಾಗಿ ಹೇಳಿದರು. ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಹದಗೆಟ್ಟಿದೆ. ಪಂಚಾಯ್ತಿಯಿಂದಲೇ ನಿರ್ವಹಣೆ ಮಾಡಬೇಕೆಂದು ನಿರ್ಣಯ ಕೈಗೊಂಡರು.
(ಎಸ್.ಬಿ.ರೆಡ್ಡಿ)