Karnataka Rains: 3 ದಿನದಲ್ಲಿ ಸಿಡಿಲಿಗೆ 7 ಮಂದಿ ಬಲಿ, ವಿಜಯಪುರ,ರಾಯಚೂರು ಬೀದರ್, ಯಾದಗಿರಿ, ಚಿಕ್ಕಮಗಳೂರಿನಲ್ಲಿ ದುರ್ಘಟನೆ
Apr 14, 2024 07:30 PM IST
ಕರ್ನಾಟಕದಲ್ಲಿ ಸಿಡಿಲು, ಗುಡುಗಿನ ಪ್ರಮಾಣ ಅಧಿಕವಾಗಿದೆ.
- Weather Updates ಕರ್ನಾಟಕದಲ್ಲಿ ಮೂರು ದಿನದಿಂದ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಮಳೆ ಅನಾಹುತಕ್ಕೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಬೇಗೆಯ ನಡುವೆ ಅಲ್ಲಲ್ಲಿ ಸುರಿಯುತ್ತಿರುವ ಗುಡುಗು, ಸಿಡಿಲ ಸಹಿತ ಮಳೆ ಭಾರೀ ಅನಾಹುತವನ್ನೇ ಮಾಡಿದೆ. ಮೂರು ದಿನದ ಅಂತರದಲ್ಲಿಯೇ ಕರ್ನಾಟಕದ ನಾನಾ ಕಡೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಸಿಡಿಲಿಗೆ ಬಹುತೇಕರು ಬಲಿಯಾಗಿದ್ಧಾರೆ. ವಿಜಯಪುರ ಜಿಲ್ಲೆಯ ಮೂವರು, ಚಿಕ್ಕಮಗಳೂರು, ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೆಲವು ಕಡೆ ಸಿಡಿಲಿಗೆ ದನಗಳೂ ಮೃತಪಟ್ಟಿವೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಅನಾಹುತಗಳು ಆಗಿವೆ. ಕೆಲವು ಕಡೆಗಳಲ್ಲಿ ಮಳೆಯಿಂದ ಪ್ರಾಣ ಕಳೆದುಕೊಂಡವರಿಗೆ ಪರಿಹಾರವನ್ನೂ ನೀಡಲಾಗಿದೆ.
ವಿಜಯಪುರ ಜಿಲ್ಲೆಯ ಗಡಿ ತಾಲ್ಲೂಕು ಇಂಡಿ ತಾಲ್ಲೂಕಿನಲ್ಲಿಯೇ ಭಾರೀ ಮಳೆಯಂದ ಮೂವರು ಮೃತಪಟ್ಟಿದ್ದಾರೆ. ಅದೂ ಸಿಡಿಲು ಬಡಿದು ಮಹಿಳೆ, ಬಾಲಕ ಸೇರಿ ಮೂವರು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾ. ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಇಂಡಿ, ತಿಕೋಟಾ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜೋರಾಗಿದ್ದು, ಸಿಡಿಲ ಬಡಿತಕ್ಕೆ ಲಾಳಸಂಗಿ ಗ್ರಾಮದ ರೈತ ಕಾಸಿಮ್ ಬಾಗವಾನ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಹಲವು ಕಡೆ ಭಾರೀ ಸುರಿದಿದೆ. ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಮಳೆಯಾಗಿರುವ ಮಾಹಿತಿಯಿದೆ. ತರೀಕೆರೆ ಪಟ್ಟಣದಲ್ಲಿ ಉತ್ತಮ ಮಳೆಯಾಗಿ ರಸ್ತೆಗಳ ಮೇಲೆ ಸಾಕಷ್ಟು ನೀರು ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು. ಗುಡುಗು-ಸಿಡಿಲಿನಿಂದಾಗಿ ನರಸಿಂಹರಾಜಪುರ ತಾಲ್ಲೂಕಿನ ಅರಳಿಕೊಪ್ಪದಲ್ಲಿ ರೈತ ಶಂಕರ್ ಜೀವ ಕಳೆದುಕೊಂಡಿದ್ದಾರೆ.ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದ್ದು ಶಂಕರ್ ಮೃತಪಟ್ಟಿರುವುದಾಗಿ ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.
ರಾಯಚೂರು ಜಿಲ್ಲೆ ಸಿಂಧನೂರ ತಾಲ್ಲೂಕಿನಲ್ಲೂ ಮಳೆಯಿಂದ ಭಾರೀ ಅನಾಹುತವಾದ ವರದಿಯಾಗಿದೆ. ತಾಲ್ಲೂಕಿನ ವೆಂಕಟೇಶ್ವರ ಕ್ಯಾಂಪ್ ನಲ್ಲಿ ಸಿಡಿಲು ಬಡಿದು ಕುರಿಗಾಹಿ ಅಮರಾಪುರದ ಶಾಂತಪ್ಪ ಮಾವಿನಮಡು ಜೀವ ಕಳೆದುಕೊಂಡಿದ್ದಾರೆ. ಕುರಿಗಳನ್ನು ಮೇಯಿಸಲು ತೆರಳಿದ್ದಾಗ ಸಿಡಿಲಿನ ರಭಸಕ್ಕೆ ಅವರ ಜೀವ ಹೋಗಿದೆ. ಸಮೀಪದ ಆಲ್ಕೋಡ್ ಗ್ರಾಮದಲ್ಲಿ ಸಿಡಿಲು ಬಡಿದು ಸತ್ಯಪ್ಪ ಕುರುಬರ ಎಂಬುವವರು ಎರಡು ಎತ್ತುಗಳು ಜೀವ ಕಳೆದುಕೊಂಡಿವೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆ ಸುರಿದೆ. ಇದೇ ವೇಳೆ ಸಿಡಿಲು ಬಡಿದು ಗ್ರಾಮದ ಮಂಜುನಾಥ್ ಎನ್ನುವ ಯುವಕ ಮೃತಪಟ್ಟಿರುವ ವರದಿಯಾಗಿದೆ.
ಬೀದರ್ ಜಿಲ್ಲೆಯಲ್ಲೂ ಭಾರೀ ಮಳೆ ಸುರಿದಿದೆ. ಔರಾದ್ ತಾಲ್ಲೂಕಿನಲ್ಲಿ ಶುಕ್ರವಾರ ತಡ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿ ರಾಯಪಳ್ಳಿ ಗ್ರಾಮದ ಶೈಲು ರಾಮಲು (36) ಬಿರುಗಾಳಿಗೆ ಮಾಳಿಗೆ ಮೇಲಿಂದ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಿಡಿಲಿಗೆ ರಾಮಣ್ಣಕಾಳೆ ಎಂಬುವವರ ಎತ್ತುಮೃತಪಟ್ಟಿದೆ. ಇನ್ನೊಂದು ಎತ್ತು ಗಾಯಗೊಂಡಿದೆ. ಧುಪತಮಹಾಗಾಂವ್ನಲ್ಲಿ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಹುಲಸೂರ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಬೀದರ್ ನಗರದಲ್ಲೂ ಮಳೆಯಿಂದ ತಂಪಿನ ವಾತಾವರಣ ನಿರ್ಮಾಣವಾಗಿದೆ.