Political News: ಲೋಕಸಭಾ ಚುನಾವಣೆ ನಿಮಿತ್ತ ಪ್ರಧಾನಿ ಮೋದಿಯವರನ್ನು ಭೇಟಿಯಾದ ಜೆಡಿಎಸ್ ವರಿಷ್ಠರು, ಮಹತ್ವದ ಚರ್ಚೆಯ ವಿವರ ಇಲ್ಲಿದೆ
Dec 22, 2023 06:18 AM IST
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಗುರುವಾರ (ಡಿ.21) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ತೆಗೆದ ಗ್ರೂಪ್ ಪೋಟೋ. ಇದರಲ್ಲಿ, ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಮುಖಂಡ ಕುಪೇಂದ್ರ ರೆಡ್ಡಿ ಕೂಡ ಜತೆಗಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಹೊಂದಾಣಿಕೆ ಕುರಿತು ಚರ್ಚಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿದರು. ಈ ಮಹತ್ವದ ಚರ್ಚೆಯ ಲಭ್ಯ ವಿವರ ಇಲ್ಲಿದೆ. (ವರದಿ - ಎಚ್. ಮಾರುತಿ)
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ (ಡಿ.21) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ಚರ್ಚೆಯ ವಿವರಗಳು ಲಭ್ಯವಿಲ್ಲವಾದರೂ ಮೈತ್ರಿ ಮತ್ತು ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಎಷ್ಟು ಸ್ಥಾನಗಳು ಮತ್ತು ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದು ಜೆಡಿಎಸ್ ಮೂಲಗಳು ಖಚಿತ ಪಡಿಸಿವೆ.
ಸಭೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ಸ್ಥಾನ ಹಂಚಿಕೆ ಕುರಿತು ಯಾವುದೇ ಸಮಸ್ಯೆ ಇಲ್ಲ. ಎಂದು ಪ್ರಧಾನಿ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಎನ್ಡಿಎ ಮೈತ್ರಿಕೂಟದ ಆಶಯವೂ ಇದೇ ಆಗಿದೆ. ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಪ್ರಧಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಾಪ್ ಸಿಂಹ ಅವರನ್ನು ಸಮರ್ಥಿಸಿದ ಎಚ್ ಡಿ ಕುಮಾರಸ್ವಾಮಿ: ಸಂಸತ್ನಲ್ಲಿ ಭದ್ರಾತಾ ಲೋಪ ಆಗಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕೆ, ಪಾಸ್ ಕೊಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ. ಪಾಸ್ ಕೊಡಬೇಕಿದ್ದರೆ ಪ್ರತಾಪ್ ಸಿಂಹ ಅವರಿಗೆ ಈ ವ್ಯಕ್ತಿ ಹೀಗೆ ಮಾಡುತ್ತಾನೆ ಎಂದು ಕನಸು ಬಿದ್ದಿತ್ತೆ ಎಂದು ಪ್ರಶ್ನಿಸಿದರು.
ಈ ವಿಷಯ ಕುರಿತು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದನ್ನು ಕೇಳಿದ್ದೇನೆ. ರಾಜ್ಯ ವಿಧಾನಸಭೆಯಲ್ಲಿ ನಡೆದ ಘಟನೆಯನ್ನು ಅವರು ಮರೆತಿರಬಹುದು. ವಿಧಾನಸಭಾ ಕಲಾಪ ನಡೆಯುವಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ಶಾಸಕರ ಆಸನದಲ್ಲಿ ಒಂದೂವರೆ ಗಂಟೆ ಕುಳಿತಿದ್ದ. ಹಾಗೆಂದು ಭದ್ರಾತಾ ಲೋಪ ಎಂದು ನಾವು ಆರೋಪ ಮಾಡಲಿಲ್ಲ ಎಂದು ಕುಟುಕಿದರು.
ಗೌಡರು ಮತ್ತು ಮೋದಿ ಅವರದ್ದು ಭಾವನಾತ್ಮಕ ಸಂಬಂಧ: ಇಂದು ಜೆಡಿಎಸ್ ನಿಯೋಗ ಪ್ರಧಾನಿಗಳನ್ನು ಅವರು ಭೇಟಿ ಮಾಡಿತ್ತು. ನಂತರ ನಾನು ಹಾಗೂ ದೇವೇಗೌಡರು ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚೆ ಮಾಡಿದ್ದೇವೆ. ದೇವೇಗೌಡರು ಮೋದಿ ಅವರ ಜೊತೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಮೋದಿ ಅವರು ಪ್ರಧಾನಿ ಆದಾಗಿನಿಂದಲೂ ಗೌಡರಿಗೆ ಅದೇ ಗೌರವವನ್ನು ಕೊಡುತ್ತಾ ಬಂದಿದ್ದಾರೆ. ಮುಖ್ಯಮಂತ್ರಿ ಆದಾಗ ನಾನು ಏಳೆಂಟು ಬಾರಿ ಭೇಟಿಯಾಗಿದ್ದೇನೆ.
ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಏಕೆ ಪ್ರಯೋಜನ ಆಗುತ್ತಿಲ್ಲ. ಏಕೆ ನೀವು ಹೀಗೆ ಮಾಡುತ್ತಿದ್ದೀರಾ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ನಾನು 2018ರಲ್ಲಿ ಕಾಂಗ್ರೆಸ್ ಜತೆ ಸರ್ಕಾರ ಮಾಡಿದಾಗ ಪ್ರಧಾನಿ ಮೋದಿ ಅವರು ನನಗೆ ಹೇಳಿದ್ದರು ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು.
ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ: ಕಾಡುಗೊಲ್ಲ ಸಮಾಜಕ್ಕೆ ಮೀಸಲಾತಿ ದೊರಕಬೇಕು ಎಂದು ದೇವೇಗೌಡರು ಮನವಿ ಮಾಡಿದ್ದಾರೆ ಹಾಗೆಯೇ ರಾಜ್ಯದ ನೀರಾವರಿಗೆ ಸಂಬಂಧಪಟ್ಟಂತೆ ಹಾಗೂ ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ನಾವೆಲ್ಲರೂ ಮನವಿ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.