Bhagyalakshmi Serial: 10 ದಿನಗಳಲ್ಲಿ ನಮ್ಮಿಬ್ರ ಮದುವೆ, ಏನು ಮಾಡೋಕೆ ಸಾಧ್ಯ? ಪೂಜಾಗೆ ಶ್ರೇಷ್ಠಾ ಚಾಲೆಂಜ್; ಭಾಗ್ಯಲಕ್ಷ್ಮೀ ಧಾರಾವಾಹಿ
Apr 24, 2024 08:30 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಏ 23ರ ಎಪಿಸೋಡ್
Bhagyalakshmi Serial 23rd Episode: ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 23ರ ಎಪಿಸೋಡ್. ತಾಂಡವ್ ಪೂಜಾ ಮದುವೆ ವಿಚಾರಕ್ಕೆ ಬ್ರೇಕ್ ಹಾಕುವಂತೆ ಪೂಜಾ ಇಬ್ಬರಿಗೂ ಎಚ್ಚರಿಕೆ ನೀಡುತ್ತಾಳೆ. ಆದರೆ ಶ್ರೇಷ್ಠಾ ಮಾತ್ರ ಹಟಕ್ಕೆ ಬಿದ್ದವಳಂತೆ ತಾಂಡವ್ನನ್ನು ಮದುವೆ ಆಗೇ ತೀರುತ್ತೇನೆ ಎಂದು ಪೂಜಾ ಮುಂದೆ ಚಾಲೆಂಜ್ ಮಾಡುತ್ತಾಳೆ.
Bhagyalakshmi Serial: ಆಫೀಸಿನಲ್ಲಿ ತಾಂಡವ್ಗೆ ಮ್ಯಾನ್ ಆಫ್ ದಿ ಹಾನರ್ ಪ್ರಶಸ್ತಿ ದೊರೆತಿದೆ. ಆದರೆ ಪೂಜಾ, ಈ ಪ್ರಶಸ್ತಿಗೆ ನೀವು ಅರ್ಹರಲ್ಲ ಎನ್ನುತ್ತಾಳೆ. ವೇದಿಕೆ ಮೇಲಿಂದ ತಾಂಡವ್ನನ್ನು ಕರೆದೊಯ್ಯುವ ಪೂಜಾ, ಶ್ರೇಷ್ಠಾಳನ್ನು ಮದುವೆ ಆಗುತ್ತಿದ್ದೀರ ಅಂತ ಸುದ್ದಿ ಗೊತ್ತಾಯ್ತು. ಇದೆಲ್ಲವನ್ನೂ ಬಿಟ್ಟು ಸುಮ್ಮನೆ ಅಕ್ಕನ ಜೊತೆ ಸಂಸಾರ ಮಾಡಿ. ಇಲ್ಲವಾದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸುತ್ತಾಳೆ.
ಅಷ್ಟರಲ್ಲಿ ಅಲ್ಲಿಗೆ ಬರುವ ಶ್ರೇಷ್ಠಾ, ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಇಬ್ಬರೂ ಇಷ್ಟ ಪಟ್ಟು ಮದುವೆ ಆಗುತ್ತಿದ್ದೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ನಿನ್ನ ಭಾವನ ಹಿಂದೆ ಹೋಗಿಲ್ಲ. ಅವರೇ ನನ್ನ ಹಿಂದೆ ಬಂದಿದ್ದು ಎನ್ನುತ್ತಾಳೆ. ಹೆಂಡತಿ ಬದುಕಿರುವಾಗಲೇ ಆಕೆಗೆ ಡಿವೋರ್ಸ್ ನೀಡದೆ ಹೀಗೆ ಮತ್ತೊಂದು ಆಗುವುದು ತಪ್ಪು. ನನ್ನ ಅಕ್ಕ ನಿಮಗೆ ಏನು ಅನ್ಯಾಯ ಮಾಡಿದ್ದಾಳೆ? ಇದೆಲ್ಲದಕ್ಕೂ ಅಂತ್ಯ ಹಾಡಿ ನೀವು ಮದುವೆ ನಾಟಕ ನಿಲ್ಲಿಸಿ ಅಕ್ಕನ ಜೊತೆ ಸುಮ್ಮನೆ ಸಂಸಾರ ಮಾಡಿದರೆ ಸರಿ ಇಲ್ಲವಾದರೆ ಇಷ್ಟು ಹೊತ್ತು ನೀವು ವೇದಿಕೆ ಮೇಲೆ ನೀತಿ, ನಿಯಮ ಅಂತೆಲ್ಲಾ ಮಾತನಾಡಿದ್ದೀರಿ, ಅದೇ ನೀತಿ ನಿಯಮವನ್ನು ನಿಮ್ಮ ಮೇಲೆ ಪ್ರಯೋಗ ಮಾಡುತ್ತೇನೆ. ಮತ್ತೊಂದು ಮದುವೆ ಅಂತೆಲ್ಲಾ ಹೋದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಪೂಜಾ , ತಾಂಡವ್ಗೆ ಎಚ್ಚರಿಕೆ ನೀಡುತ್ತಾಳೆ.
ಪೂಜಾಗೆ ಶ್ರೇಷ್ಠಾ ಚಾಲೆಂಜ್
ಪೂಜಾ ಎಷ್ಟೇ ಹೇಳಿದರೂ ಶ್ರೇಷ್ಠಾ ಮಾತ್ರ ಕೇಳಲು ಸಿದ್ಧಳಿಲ್ಲ. ಇನ್ನು 10 ದಿನಗಳಲ್ಲಿ ನಮ್ಮ ಮದುವೆ. ಯಾರಿಂದ ಏನು ಮಾಡೋಕೆ ಕೂಡಾ ಸಾಧ್ಯವಿಲ್ಲ ಎನ್ನುತ್ತಾಳೆ. ನಿಮಬ್ಬರಿಗೆ ನಾಚಿಕೆ ಆಗುವುದಿಲ್ಲವಾ? 14 ವರ್ಷದ ಮಗಳನ್ನು ಇಟ್ಟುಕೊಂಡು ಮತ್ತೊಂದು ಮದುವೆ ಆಗಲು ನೀವು ಮುಂದಾಗಿದ್ಧೀರಿ. ಇವಳು ಮತ್ತೊಂದು ಸಂಸಾರವನ್ನು ಒಡೆಯಲು ನೋಡುತ್ತಿದ್ದಾಳೆ ಎಂದು ಬೈಯ್ಯುತ್ತಾಳೆ. ಪೂಜಾಳ ಮಾತುಗಳನ್ನು ಕೇಳಿ ಶ್ರೇಷ್ಠಾ ಇನ್ನಷ್ಟು ಕೋಪಗೊಳ್ಳುತ್ತಾಳೆ. ತಾಂಡವ್ ಮನೆಗೆ ಹೋಗಿ ಎಲ್ಲವನ್ನೂ ಹೇಳಲು ನಿರ್ಧರಿಸುತ್ತಾಳೆ. ಆದರೆ ತಾಂಡವ್ಗೆ ಮುಂದೇ ಏನು ನಡೆಯಲಿದೆಯೋ ಎಂಬ ಹೆದರಿಕೆ.
ಹೋಟೆಲ್ ಮಾಲೀಕನನ್ನು ಇಂಪ್ರೆಸ್ ಮಾಡಿದ ಭಾಗ್ಯಾ
ಇತ್ತ ಕೆಲಸ ಹುಡುಕಿ ಹೊರಟ ಭಾಗ್ಯಾಗೆ ನಿರಾಸೆ ಕಾದಿರುತ್ತದೆ. ಧೈರ್ಯ ಮಾಡಿ ಮತ್ತೆ ಅದೇ ಹೋಟೆಲ್ಗೆ ಹೋಗಿ ಕೆಲಸ ಕೇಳುತ್ತಾಳೆ. 2 ತಿಂಗಳಿಂದ ನಾನು ಕೆಲಸಗಾರರಿಗೆ ಸಂಬಳವೇ ಕೊಟ್ಟಿಲ್ಲ. ನಿನ್ನನ್ನು ಕೆಲಸಕ್ಕೆ ತೆಗೆದುಕೊಂಡು ನಾನೇನು ಮಾಡಲಿ ಎಂದು ಹೋಟೆಲ್ ಮಾಲೀಕ ಬೈದು ಕಳಿಸುತ್ತಾನೆ. ಹೇಗಾದರೂ ಮಾಡಿ ಕೆಲಸ ಹುಡುಕಲೇಬೇಕು ಎಂದುಕೊಳ್ಳುವ ಭಾಗ್ಯಾ ಮತ್ತೊಂದು ಹೋಟೆಲ್ಗೆ ಬರುತ್ತಾಳೆ. ಆ ಹೋಟೆಲ್ನಲ್ಲಿ ಮಾಲೀಕ ಕಸ್ಟಮರ್ಗಳಿಗೆ ಕಾಫಿ ನೀಡುವಂತೆ ಕೆಲಸಗಾರನಿಗೆ ಹೇಳುತ್ತಾನೆ. ಆದರೆ ಆತ ನನ್ನಿಂದ ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಡುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ಭಾಗ್ಯಾ, ನಾನು ಕಾಪಿ ಮಾಡಿದರೆ ಆಗಬಹುದಾ? ಎಂದು ಕೇಳುತ್ತಾಳೆ. ಆಕೆಯನ್ನು ನೋಡಿ ಹೋಟೆಲ್ ಮಾಲೀಕ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಅಂತೂ ಭಾಗ್ಯಾ ರುಚಿಯಾದ ಕಾಫಿ ಮಾಡಿ ಮಾಲೀಕನನ್ನು ಇಂಪ್ರೆಸ್ ಮಾಡುತ್ತಾಳೆ.
ಭಾಗ್ಯಾ ಅಂದುಕೊಂಡಂತೆ ಆ ಹೋಟೆಲ್ನಲ್ಲಿ ಕೆಲಸ ಗಳಿಸುತ್ತಾಳಾ? ಕುಸುಮಾ ಮುಂದೆ ಶ್ರೇಷ್ಠಾ ಎಲ್ಲವನ್ನೂ ಹೇಳುತ್ತಾಳಾ ಕಾದು ನೋಡಬೇಕು.