ಕನ್ನಡ ಸುದ್ದಿ  /  ಮನರಂಜನೆ  /  ಧರ್ಮರಾಜ್‌ಗೆ ಪೆನ್ಶನ್‌ ಹಣ ಸಿಗ್ತಿಲ್ಲ, ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಸಿಕ್ಕ ಕೆಲಸವೂ ಗ್ಯಾರಂಟಿ ಇಲ್ಲ; ಭಾಗ್ಯಲಕ್ಷ್ಮೀ ಧಾರಾವಾಹಿ

ಧರ್ಮರಾಜ್‌ಗೆ ಪೆನ್ಶನ್‌ ಹಣ ಸಿಗ್ತಿಲ್ಲ, ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಸಿಕ್ಕ ಕೆಲಸವೂ ಗ್ಯಾರಂಟಿ ಇಲ್ಲ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Apr 28, 2024 09:19 AM IST

ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಕಲರ್ಸ್‌ ಕನ್ನಡ ಭಾಗ್ಯಲಕ್ಷ್ಮಿ ಧಾರಾವಾಹಿ ಏಪ್ರಿಲ್‌ 27ರ ಎಪಿಸೋಡ್‌. ಮನೆ ನಿಭಾಯಿಸಲು, ಶ್ರೇಷ್ಠಾ ಸಾಲ ತೀರಿಸಲು ಕುಸುಮಾ, ಧರ್ಮರಾಜ್‌, ಭಾಗ್ಯಾ ಪಣ ತೊಟ್ಟಿದ್ಧಾರೆ. ಆದರೆ ಧರ್ಮರಾಜ್‌ಗೆ ಪೆನ್ಶನ್‌ ಹಣ ಸಿಗ್ತಿಲ್ಲ, ಇತ್ತ ಭಾಗ್ಯಾಗೆ ಹೋಟೆಲ್‌ನಲ್ಲಿ ಸಿಕ್ಕ ಕೆಲಸವೂ ಗ್ಯಾರಂಟಿ ಇಲ್ಲ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ. 

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಶ್ರೇಷ್ಠಾ ಬಂದು ಸಾಲದ ಹಣ ಕೇಳಿ ಹೋದಾಗಿನಿಂದ ಭಾಗ್ಯಾಗೆ ನಿದ್ರೆ ಇಲ್ಲದಂತಾಗಿದೆ. ಕುಸುಮಾ ಕೂಡಾ ಭಾಗ್ಯಾ ಮೇಲೆ ಬೇಸರ ವ್ಯಕ್ತಪಡಿಸುತ್ತಾಳೆ. ಆ ದಿನ ನೀನು ನಮ್ಮನ್ನು ಕೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರೇಗುತ್ತಾಳೆ. ಇದೇ ಸಮಯಕ್ಕೆ ತಾಂಡವ್‌ ಕೂಡಾ ಭಾಗ್ಯಾ ಕಾಲೆಳೆಯಲು ಶುರು ಮಾಡುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ

Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ

ನೇರವಾಗಿ ಒಟಿಟಿಗೆ ಬಂದ ಎಂಥಾ ಕಥೆ ಮಾರಾಯ ಸಿನಿಮಾ; ಇದು ಕಾಡಿನ ನೆಂಟರು ಕಥಾಸಂಕಲನ ಆಧರಿತ ಚಿತ್ರ

ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

ನೀನು ಜೀವನಪೂರ್ತಿ ದುಡಿದರೂ 2 ಲಕ್ಷ ರೂ. ಸಾಲ ತೀರಿಸಲು ಸಾಧ್ಯವೇ ಇಲ್ಲ. ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿಬಿಡು, ನಿನಗೆ 20 ಲಕ್ಷ ಕೊಟ್ಟುಬಿಡುತ್ತೇನೆ ಎನ್ನುತ್ತಾನೆ. ನಿಮ್ಮ ಬಳಿ ದುಡ್ಡು ಕೇಳುವಂತಿದ್ದರೆ ಯಾವಾಗಲೋ ಕೇಳುತ್ತಿದ್ದೆ, ಆದರೆ ನನಗೆ ಆ ಉದ್ದೇಶ ಇಲ್ಲ, ಕಷ್ಟವೋ ಸುಖವೋ ನಾನು ಸಾಲ ತೀರಿಸುತ್ತೇನೆ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಹೇಗೆ ತೀರಿಸುತ್ತೀಯ ಎಂದು ತಾಂಡವ್‌ ಪ್ರಶ್ನಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ, ಪಕ್ಕದ ಮನೆಯವರಿಗೆ ನಮ್ಮ ಚಿಂತೆ ಏಕೆ? ನಮ್ಮ ಕಷ್ಟ ನಮಗೆ, ನಾವು ಹೇಗಾದರೂ ಸಾಲ ತೀರಿಸುತ್ತೇವೆ. ಎಷ್ಟು ಬೇಕಾದರೂ ಕಷ್ಟ ಪಡುತ್ತೇವೆ. ಆದರೆ ಎಷ್ಟೇ ಕಷ್ಟವಾದರೂ ನಿನ್ನ ಮುಂದೆ ಮಾತ್ರ ಕೈ ಚಾಚುವುದಿಲ್ಲ.

ಇನ್ನು ಅತ್ತೆ ಸೊಸೆ ವಿಚಾರ ಕೂಡಾ ನಿನಗೆ ಬೇಡ. ನಾವು ಮುಖ ತಿರುಗಿಸಿಕೊಂಡಾದರೂ ಹೋಗುತ್ತೇವೆ. ಜಡೆ ಹಿಡಿದು ಜಗಳ ಆದ್ರೂ ಆಡುತ್ತೇವೆ. ಅದು ನಮಗೆ ಬಿಟ್ಟಿದ್ದು, ಪಕ್ಕದ ಮನೆಯವರಿಗೆ ಮತ್ತೊಬ್ಬರ ವಿಚಾರಕ್ಕೆ ತಲೆ ಹಾಕುವ ಅಧಿಕಾರ ಇಲ್ಲ ಎಂದು ತಾಂಡವ್‌ಗೆ ಮುಟ್ಟಿ ನೋಡುವಂತೆ ಉತ್ತರ ಕೊಡುವ ಕುಸುಮಾ, ಭಾಗ್ಯಾ ಕೈ ಹಿಡಿದು ಒಳಗೆ ಕರೆದೊಯ್ಯುತ್ತಾಳೆ. 

ಕುಸುಮಾ ಮಾತುಗಳನ್ನು ಕೇಳಿ ತಾಂಡವ್‌ ಸಪ್ಪಗಾಗುತ್ತಾನೆ. ಅವನ್ನು ನೋಡಿ ಧರ್ಮರಾಜ್‌, ನಿಂಗಿದು ಬೇಕಿತ್ತಾ ಮಗನೇ, ವಾಪಸ್‌ ಹೊಂಟೋಗು ಶಿವನೇ ಎಂಬ ಸಿನಿಮಾ ಹಾಡು ಹೇಳುವ ಮೂಲಕ ಕಾಲೆಳೆಯುತ್ತಾರೆ. ಅತ್ತೆ ಬಳಿ ಏನೂ ಮುಚ್ಚಿಡಬಾರದು ಎಂಬ ಕಾರಣಕ್ಕೆ ಭಾಗ್ಯಾ ತನಗೆ ಕೆಲಸ ದೊರೆತ ವಿಚಾರವನ್ನು ಹೇಳುತ್ತಾಳೆ. ಆದರೆ ಕುಸುಮಾ ಬೇಸರಗೊಳ್ಳುತ್ತಾಳೆ. ಅತ್ತೆ, ಮಾವ ಎನಿಸಿಕೊಂಡವರು ನಾವು ಇನ್ನೂ ಇದ್ದೇವೆ, ನಾವು ಹಣಕ್ಕೆ ಏನಾದರೂ ಮಾಡುತ್ತೇವೆ, ನಿನಗೆ ಚಿಂತೆ ಬೇಡ ಎನ್ನುತ್ತಾಳೆ.

ಭಾಗ್ಯಾ ಪರೀಕ್ಷೆ ಮುಗಿಸಿಕೊಂಡು ತನ್ವಿಗೆ ಆಟೋ ಹತ್ತಿಸಿ ಮನೆಗೆ ಕಳಿಸುತ್ತಾಳೆ. ಅರ್ಧ ಮನಸ್ಸಿನಿಂದಲೇ ಹೋಟೆಲ್‌ಗೆ ಕೆಲಸಕ್ಕೆ ಬರುತ್ತಾಳೆ. ಆದರೆ ಹೋಟೆಲ್‌ನಲ್ಲಿ ಭಾಗ್ಯಾಗೆ ಕೆಲಸ ಕೊಟ್ಟ ಓನರ್‌ ಬದಲಿಗೆ ಬೇರೊಬ್ಬ ಮಹಿಳೆ ಇರುತ್ತಾರೆ. ಯಾರು ನೀನು? ಏಕಾಏಕಿ ಅಡುಗೆ ಮನೆಗೆ ಏಕೆ ನುಗ್ಗುತ್ತಿದ್ದೀಯ ಎಂದು ಕೇಳುತ್ತಾಳೆ. ನಾನು ಹೊಸದಾಗಿ ಕೆಲಸಕ್ಕೆ ಬಂದಿದ್ದೇನೆ ಎನ್ನುತ್ತಾಳೆ. ಇದು ಕೆಲಸಕ್ಕೆ ಬರುವ ಸಮಯಾನಾ? ಮಧ್ಯಾಹ್ನ ಯಾರಾದರೂ ಕಾಫಿ ಕುಡಿಯುತ್ತಾರಾ ಎಂದು ಕೇಳುತ್ತಾಳೆ. ನಾನು ಯಜಮಾನರ ಬಳಿ ಮಾತನಾಡಿದ್ದೇನೆ, ಪರೀಕ್ಷೆ ಮುಗಿದ ನಂತರ ಪೂರ್ತಿ ಕೆಲಸಕ್ಕೆ ಬರಲು ಹೇಳಿದ್ದಾರೆ ಎಂದು ಭಾಗ್ಯಾ ಹೇಳುತ್ತಾಳೆ. ಇಲ್ಲಿ ನಾನೇ ಓನರ್‌ ಬೇರೆ ಯಾರೂ ಇಲ್ಲ ಏಂದು ಆ ಮಹಿಳೆ ಗತ್ತಿನಲ್ಲಿ ಹೇಳುತ್ತಾಳೆ.

ಇತ್ತ ಪೆನ್ಶನ್‌ ಆಫೀಸಿಗೆ ಬರುವ ಧರ್ಮರಾಜ್‌ ಹಾಗೂ ಕುಸುಮಾಗೆ ಶಾಕ್‌ ಕಾದಿರುತ್ತದೆ. ಪ್ರತಿ ತಿಂಗಳು ಸಹಿ ಹಾಕದ ಕಾರಣ ಧರ್ಮರಾಜ್‌ ಪೆನ್ಶನ್‌ ಅಕೌಂಟ್‌ ಬ್ಲಾಕ್‌ ಆಗಿರುತ್ತದೆ. ಅದು ಸರಿ ಆಗಲು ಸಮಯ ಬೇಕು, ಈಗ ನೀವು ಹಣ ಪಡೆಯಲು ಆಗುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.

ಧರ್ಮರಾಜ್‌ಗೆ ಪೆನ್ಶನ್‌ ಹಣ ಇಲ್ಲ, ಇತ್ತ ಭಾಗ್ಯಾಗೆ ದೊರೆತ ಕೆಲಸವೂ ಗ್ಯಾರಂಟಿ ಇಲ್ಲ. ಮನೆ ಇಎಂಐ ಕಟ್ಟಲು, ಶ್ರೇಷ್ಠಾ ಸಾಲ ತೀರಿಸಲು ಭಾಗ್ಯಾ ಏನು ಮಾಡುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ