Kaatera Day 1 Collection: ಮೊದಲ ದಿನವೇ ಬಾಕ್ಸ್ ಆಫೀಸ್ ರಾಜನಾದ ಕಾಟೇರ; ಕರ್ನಾಟಕದಲ್ಲಿ ಬಹುಕೋಟಿ ಗಳಿಸಿದ ದರ್ಶನ್ ಸಿನಿಮಾ
Dec 30, 2023 06:14 AM IST
ಭಾರತದಲ್ಲಿ ಬಹುಕೋಟಿ ಗಳಿಸಿದ ದರ್ಶನ್ ಸಿನಿಮಾ
- Kaatera Box Office Collection Day 1: ಕಾಟೇರ ಸಿನಿಮಾವು ಭಾರತದಲ್ಲಿ (ಕರ್ನಾಟಕದ ಬಾಕ್ಸ್ ಆಫೀಸ್ನಲ್ಲಿ) ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ ದರ್ಶನ್ ಮತ್ತು ಆರಾಧನಾ ರಾಮ್ ನಟಿಸಿದ ಕಾಟೇರ ಸಿನಿಮಾ19 ಕೋಟಿ 79 ಲಕ್ಷ ರೂಪಾಯಿ ಆದಾಯ ಗಳಿಸಿದೆ.
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾವಲ್ಲದೆ, ವಿಶೇಷವಾಗಿ ಕನ್ನಡ ಸಿನಿಮಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೊದಲ ದಿನದ ಬಾಕ್ಸ್ ಆಫೀಸ್ ವರದಿ ಹೊರಬಿದ್ದಿದೆ. ಸಚ್ನಿಲ್ಕ್.ಕಾಂ ವರದಿ ಪ್ರಕಾರ ದರ್ಶನ್ ಸಿನಿಮಾ ಮೊದಲ ದಿನ ಅಂದಾಜು 9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ, ಚಿತ್ರತಂಡ ಈಗ ಅಧಿಕೃತ ಹೇಳಿಕೆ ನೀಡಿದ್ದು, ಗಳಿಕೆ 19 ಕೋಟಿ ರೂ. ದಾಟಿದೆ.
ಅಪ್ಡೇಟ್: 19 ಕೋಟಿ ಗಳಿಕೆ ಮಾಡಿದ ಕಾಟೇರ
ಇದೀಗ ಕಾಟೇರ ಚಿತ್ರ ತಂಡದಿಂದ ಅಧಿಕೃತವಾಗಿ ಬಾಕ್ಸ್ ಆಫೀಸ್ ವರದಿ ಬಂದಿದ್ದು, ಮೊದಲ ದಿನ 19 ಕೋಟಿ 79 ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್ ಅಲ್ಲದ ಆನ್ಲೈನ್ ಬುಕ್ಕಿಂಗ್ ಇಲ್ಲದ ಸಾಮಾನ್ಯ ಚಿತ್ರಮಂದಿರಗಳಲ್ಲಿಯೂ ಕಾಟೇರ ಬಿಡುಗಡೆಯಾಗಿರುತ್ತದೆ. ಹೀಗಾಗಿ, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಒಟ್ಟಾರೆ ದಚ್ಚು ಅಭಿಮಾನಿಗಳು ಮೊದಲ ದಿನದ ಶೋಗೆ ಮುಗಿಬಿದ್ದಿದ್ದು, ಹಲವು ದಿನಗಳ ಹಿಂದೆಯೇ ಟಿಕೆಟ್ ಕಾದಿರಿಸಿದ್ದರು. ರಾತ್ರಿ 12.05 ಗಂಟೆ, ಬೆಳಗ್ಗೆ 5 ಗಂಟೆಯ ಶೋಗಳೂ ಇದ್ದ ಕಾರಣ ನಿನ್ನೆಯ ಗಳಿಕೆ ಉತ್ತಮವಾಗಿಯೇ ಇದೆ. ಮೊದಲ ದಿನ ಸಾಕಷ್ಟು ಜನರಿಗೆ ಟಿಕೆಟ್ ದೊರಕದೆ ಇರುವ ಸಾಧ್ಯತೆ ಇರುತ್ತದೆ. ಮೊದಲ ದಿನದ ರಶ್ ಬೇಡ ಎಂದು ಶನಿವಾರ ಅಥವಾ ಭಾನುವಾರ ಡಿಬಾಸ್ ಸಿನಿಮಾ ನೋಡೋಣ ಎನ್ನುವವರೂ ಇದ್ದಾರೆ. ಹೀಗಾಗಿ, ಇಂದು ಮತ್ತು ನಾಳೆಯೂ ಕಟೇರ ಬಾಕ್ಸ್ ಆಫೀಸ್ ಕಲೆಕ್ಷನ್ ಭರ್ಜರಿಯಾಗಿರುವ ನಿರೀಕ್ಷೆಯಿದೆ.
ವಿಶ್ವದ್ಯಾಂತ ಬಿಡುಗಡೆಗೆ ಬೇಡಿಕೆ
ಎಕ್ಸ್ (ಹಳೆಯ ಹೆಸರು ಟ್ವಿಟ್ಟರ್)ನಲ್ಲಿ ಇಂದು ಕೂಡ ಕಾಟೇರ ಟ್ರೆಂಡ್ನಲ್ಲಿದೆ. ಇದೇ ಸಮಯದಲ್ಲಿ ಸಾಕಷ್ಟು ಕನ್ನಡಿಗರು ದರ್ಶನ್ ಸಿನಿಮಾವನ್ನು ಕರ್ನಾಟಕ, ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಬಿಡುಗಡೆ ಮಾಡುವಂತೆ ಕೋರುತ್ತಿದ್ದಾರೆ. "ಮಾನ್ಯರೆ ದಯವಿಟ್ಟು ಕಾಟೇರ ಚಿತ್ರವನ್ನು ಇಂಡಿಯಾ ಆಚೆ ಮತ್ತು ಯುಎಸಎ ನಲ್ಲಿ ಕೂಡ ರಿಲೀಸ್ ಮಾಡಿ. ಯಾವಾಗ ಆಗುವುದು ದಯವಿಟ್ಟು ತಿಳಿಸಿ" ಎಂದೆಲ್ಲ ಟ್ವಿಟ್ಟರ್ನಲ್ಲಿ ಕೋರಿಕೆಗಳು ಕೇಳಿಬರುತ್ತಿವೆ.
ಅರ್ಜುನ ಆನೆಗೆ ಕಾಟೇರ ಅರ್ಪಣೆ
ಕಾಟೇರ ಸಿನಿಮಾವನ್ನು ಇತ್ತೀಚೆಗೆ ಮೃತಪಟ್ಟ ಅರ್ಜುನ ಆನೆಗೆ ಅರ್ಪಿಸಿರುವುದು ವಿಶೇಷ. "ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ಅರ್ಜುನ- ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ" ಎಂದು ಕಾಟೇರ ಸಿನಿಮಾದ ಆರಂಭದಲ್ಲಿಯೇ ಅರ್ಜುನ ಆನೆಯನ್ನು ನೆನಪಿಸಿಕೊಳ್ಳಲಾಗಿದೆ. ಸ್ವತಃ ದರ್ಶನ್ಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು,. ದಚ್ಚು ಫಾರ್ಮ್ ಹೌಸ್ನಲ್ಲಿ ಹಲವು ಪ್ರಾಣಿಗಳು ಇವೆ. ಮೈಸೂರು ಮೃಗಾಲಯ ಸೇರಿದಂತೆ ಹಲವು ಕಡೆಗಳಲ್ಲಿ ದರ್ಶನ್ ಅವರು ಹಲವು ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಂಡಿದ್ದಾರೆ.
ಕಾಟೇರ ಸಿನಿಮಾ ವಿಮರ್ಶೆ
ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಿನಿಮಾ ವಿಮರ್ಶಕರು ನಿನ್ನೆಯೇ ಕಾಟೇರ ಸಿನಿಮಾ ನೋಡಿ ವಿಮರ್ಶೆ ಬರೆದಿದ್ದಾರೆ. "ಸಿಂಪಲ್ ಎಳೆಯನ್ನೇ ಅಷ್ಟೇ ಮಜಬೂತಾಗಿ ಕಟ್ಟಿಕೊಡುವ ಕೆಲಸ ಸಿನಿಮಾದಲ್ಲಾಗಿದೆ. 1970ರ ಕಾಲಘಟ್ಟವನ್ನು ಮರು ಸೃಷ್ಟಿಸಿ ಅಂದಿನ ದಿನಮಾನಗಳ ಸಣ್ಣ ಸಣ್ಣ ಏರಿಳಿತಗಳನ್ನೂ ತೆರೆಮೇಲೆ ಪ್ರಸೆಂಟ್ ಮಾಡುವಲ್ಲಿ ನಿರ್ದೇಶಕರ ಶ್ರಮ ಮೆಚ್ಚುವಂಥದ್ದು. ಆ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಪದ್ಧತಿಗಳನ್ನು ಕಣ್ಣಿಗೆ ಕಟ್ಟುವಂತೆ, ರೋಚಕತೆಯ ಒಗ್ಗರಣೆಯೊಂದಿಗೆ ಹದವಾಗಿ ನೋಡುಗನ ಎದೆಗೆ ನಾಟಿ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಪ್ರತಿ ಫ್ರೇಮ್ನಲ್ಲೂ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ" ಕಾಟೇರ ಸಿನಿಮಾದ ಸಂಪೂರ್ಣ ವಿಮರ್ಶೆ ಇಲ್ಲಿದೆ ಓದಿ.
ದರ್ಶನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ
ಕಾಟೇರ ಸಿನಿಮಾವನ್ನು ನೋಡಿರುವವರು ಇದು ದರ್ಶನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾವೆಂದು ಹೊಗಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಸಿನಿಮಾವೆಂದರೆ ಅಭಿಮಾನಿಗಳನ್ನು ಸಂತೃಪ್ತಿ ಪಡಿಸುವ ಸಲುವಾಗಿ ನಡೆಸುವ ಪ್ರಯತ್ನದಂತೆ ಇತ್ತು. ಈ ಕಾಟೇರ ಸಿನಿಮಾದಲ್ಲಿ ಕತೆ ಮತ್ತು ಸಂದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಚಿತ್ರದ ಮೊದಲಾರ್ಧವು ಅತ್ಯುತ್ತಮವಾಗಿದ್ದು, ಕ್ಲೈಮ್ಯಾಕ್ಸ್ ಕುರಿತೂ ಮೆಚ್ಚುಗೆ ವ್ಯಕ್ತವಾಗಿದೆ. ಸೆಕೆಂಡ್ ಹಾಪ್ನಲ್ಲಿ ಕೆಲವು ಕಡೆ ದರ್ಶನ್ ಅಭಿಮಾನಿಗಳನ್ನು ಮೆಚ್ಚಿಸುವ ಪ್ರಯತ್ನವಿತ್ತು.