ವಾಕ್ ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿಯ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್; ಭಾರತದಲ್ಲಿದು ಮೊದಲ ವಿದ್ಯಮಾನ
Apr 09, 2024 03:04 PM IST
ಕರ್ನಾಟಕ ಹೈಕೋರ್ಟ್ (ಎಡ ಚಿತ್ರ); ವಕೀಲೆ ಸಾರಾ ಸನ್ನಿ (ಬಲ ಚಿತ್ರ)-ವಾಕ್ ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿಯ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್.
Court News: ವಾಕ್ ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿಯ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್, ತನ್ಮೂಲಕ ಭಾರತದಲ್ಲಿ ಮೊದಲ ವಿದ್ಯಮಾನ ಒಂದಕ್ಕೆ ವೇದಿಕೆಯಾಗಿದೆ. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಕೇಸ್ ಇದಾಗಿದ್ದು, ವಕೀಲೆ ಸಾರಾ ಸನ್ನಿ ದೇಶದ ಗಮನಸೆಳೆದಿದ್ದಾರೆ.
ಬೆಂಗಳೂರು: ವಾಕ್ ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿ (Advocate Sarah Sunny) ಮಂಡಿಸಿದ ವಾದವನ್ನು ಕರ್ನಾಟಕ ಹೈಕೋರ್ಟ್ (Karnataka High Court) ಪೀಠ ಸೋಮವಾ ಆಲಿಸಿತು. ತನ್ಮೂಲಕ ಭಾರತದಲ್ಲೇ ಈ ರೀತಿ ವಾದ ಆಲಿಸಿದ ಮೊದಲ ನ್ಯಾಯಪೀಠವೆಂಬ ಕೀರ್ತಿಗೆ ಭಾಜನವಾಗಿದೆ. ಇದು ದೇಶದ ನ್ಯಾಯಾಂಗ ಇತಿಹಾಸದಲ್ಲೂ ಮೊದಲ ವಿದ್ಯಮಾನ ಎಂದು ಹೇಳಲಾಗಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಪೀಠವು ವಕೀಲೆ ಸಾರಾ ಸನ್ನಿ ಅವರು ಪ್ರಮಾಣೀಕೃತ ಸಂಕೇತ ಭಾಷಾ ವಿಶ್ಲೇಷಕರ ಮೂಲಕ ಸಲ್ಲಿಸಿದ ಸಲ್ಲಿಕೆಗಳನ್ನು ದಾಖಲಿಸಿಕೊಂಡಿದೆ. ಇದಕ್ಕೂ ಮೊದಲು ಸಾರಾ ಸನ್ನಿ 2023 ರ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ದೂರುದಾರರ ಪತ್ನಿಯ ಪರ ವಕೀಲರಾಗಿರುವ ಸಾರಾ ಸನ್ನಿ, ಸಂಕೇತ ಭಾಷಾ ವಿಶ್ಲೇಷಕರ ಮೂಲಕ ಸಲ್ಲಿಸಿದ ವಿಸ್ತೃತ ಹೇಳಿಕೆಯನ್ನು ಒದಗಿಸಿದ್ದಾರೆ. ಸಂಕೇತ ಭಾಷಾ ವಿಶ್ಲೇಷಕರ ಮೂಲಕ ಸಾರಾ ಸನ್ನಿ ಮಾಡಿರುವ ಸಲ್ಲಿಕೆಗಳನ್ನು ಪ್ರಶಂಸಿಸಬೇಕಾಗಿದೆ. ಈ ಬಗ್ಗೆ ಮೆಚ್ಚುಗೆ ಇದೆ ಎಂದು ನ್ಯಾಯಪೀಠ ಇದೇ ವೇಳೆ ಹೇಳಿತು.
ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಮಾತನಾಡಿ, ವಾಕ್, ಶ್ರವಣದೋಷವುಳ್ಳ ವಕೀಲರ ಅಹವಾಲುಗಳನ್ನು ದಾಖಲಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಕರ್ನಾಟಕ ಹೈಕೋರ್ಟ್ ಪಾತ್ರವಾಗಿದೆ ಎಂದು ಹೇಳಿದರು.
ಏನಿದು ಕೇಸ್; ಸಾರಾ ಸನ್ನಿ ಯಾರ ಪರ ವಕಾಲತ್ತು ವಹಿಸಿದ್ದಾರೆ
ಪತಿಯ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 (ಎ), 504, 506ರ ಪ್ರಕಾರ ಕೇಸ್ ದಾಖಲಿಸಿರುವ ಪತ್ನಿಯ ಪರವಾಗಿ ವಕೀಲೆ ಸಾರಾ ಸನ್ನಿ ವಕಾಲತ್ತು ನಡೆಸುತ್ತಿದ್ದಾರೆ. ಪತಿಯ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಪತ್ನಿ ದಾಖಲಿಸಿರುವ ಕೇಸ್ ರದ್ದುಗೊಳಿಸುವಂತೆ ಕೋರಿ ಆರೋಪಿ ಪತಿ, ಲುಕ್ಔಟ್ ನೋಟಿಸ್ಗೆ ಮಧ್ಯಂತರ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕೇಸ್ನ ವಿಚಾರಣೆ ಈಗ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಕೇವಲ ಭಾರತದ ಸಾಗರೋತ್ತರ ನಾಗರಿಕ ಕಾರ್ಡ್ ಹೊಂದಿರುವವರು.ಯುನೈಟೆಡ್ ಕಿಂಗ್ಡಮ್ನ ಪೌರತ್ವವನ್ನು ಹೊಂದಿದ್ದಾರೆ. ಆರೋಪಿ ಪತಿಯು ಸ್ಕಾಟ್ಲೆಂಡ್ನ ಎಡಿನ್ಬರ್ಗ್ ಶಾಖೆಯ ಬ್ಲ್ಯಾಕ್ರಾಕ್ನ ಉದ್ಯೋಗಿ. ಸ್ಕಾಟ್ಲೆಂಡ್ಗೆ ಹೋಗದೇ ಇದ್ದರೆ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವುದಾಗಿ ಪತಿ ಪರ ವಕೀಲರು ಕೋರ್ಟ್ಗೆ ತಿಳಿಸಿದ್ದಾರೆ.
ಲುಕ್ಔಟ್ ಸುತ್ತೋಲೆ ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂದಿಟ್ಟು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಪಡೆದು ದೇಶ ತೊರೆದ ಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸಂತ್ರಸ್ತೆ ಪತ್ನಿಯ ಪರವಾಗಿ ವಕೀಲೆ ಸಾರಾ ಸನ್ನಿ ಮನವಿ ಮಾಡಿದ್ದಾರೆ.
ವಿಚಾರಣೆ ಏಪ್ರಿಲ್ 19ಕ್ಕೆ ಮುಂದೂಡಿದ ಕೋರ್ಟ್
ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪತಿಯ ಪರ ವಕೀಲರಿಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ. ಇದಲ್ಲದೆ, ತನಿಖೆಯ ನೆಪದಲ್ಲಿ ತನಿಖೆ ಪೂರ್ಣಗೊಳ್ಳದಿದ್ದಲ್ಲಿ ದೂರಿನಲ್ಲಿ ನ್ಯಾಯಾಲಯದ ಮುಂದೆ ಆರೋಪಿಗಳಾಗಿ ಹೆಸರಿಸಲಾದ ಪತ್ನಿಯ ಅತ್ತೆ, ಮಾವ ಮತ್ತು ಮಾವನ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಆದರೆ, ತನಿಖೆ ಪೂರ್ಣಗೊಳ್ಳದಿದ್ದಲ್ಲಿ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಏಪ್ರಿಲ್ 19ಕ್ಮೆ ಮುಂದಿನ ವಿಚಾರಣೆ ದಿನ ನಿಗದಿಯಾಗಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.