Siddaramaiah vs Somanna: ವರುಣಾದಲ್ಲಿ ಸೋಮಣ್ಣ ಕಾರಿಗೆ ಮುತ್ತಿಗೆ ಹಾಕಿದ ಸಿದ್ದರಾಮಯ್ಯ ಬೆಂಬಲಿಗರು
Apr 23, 2023 02:50 PM IST
ವರುಣಾದಲ್ಲಿ ವಿ.ಸೋಮಣ್ಣ ಪ್ರಚಾರ
- ವರುಣಾ ಕ್ಷೇತ್ರದಲ್ಲಿ ಈ ಬಾರಿ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ವಿ.ಸೋಮಣ್ಣ ಕಣಕ್ಕಿಳಿದಿದ್ದಾರೆ. ಇಂದು ( ಏ 23) ವರುಣಾದಲ್ಲಿ ಪ್ರಚಾರ ಮಾಡುತ್ತಿದ್ದ ಸೋಮಣ್ಣ ಅವರ ಕಾರನ್ನು ಸಿದ್ದರಾಮಯ್ಯ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ.
ಚಾಮರಾಜನಗರ: ಇಂದಿನಿಂದ (ಏಪ್ರಿಲ್ 23) ಐದು ದಿನಗಳ ಕಾಲ ಚಾಮರಾ ವರುಣಾ ಕ್ಷೇತ್ರದಲ್ಲಿ (Varuna constituency) ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ (V Somanna) ಅವರಿಗೆ ಮೊದಲ ದಿನವೇ ಪ್ರತಿಭಟನೆಯ ಬಿಸಿ ತಟ್ಟಿದೆ.
ಇಂದು ಪ್ರಚಾರಕ್ಕೆ ಸಚಿವ ಸೋಮಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿದ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಘಟನೆ ಮೈಸೂರು ತಾಲೂಕಿನ ಭೂಗತಗಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ವೇಳೆ ಯುವಕನೋರ್ವ, ಸಚಿವ ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಮನವಿ ಮಾಡಿದ್ದಾರೆ. ಬಳಿಕ ಸೋಮಣ್ಣ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಮತ್ತೊಂದು ಯುವಕರ ಗುಂಪು ಸೋಮಣ್ಣ, ಬಿಜೆಪಿ ಪರ ಘೋಷಣೆ ಕೂಗಿದೆ.
ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಸೋಮಣ್ಣ ಭೂಗತಗಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುವುದನ್ನು ಬಿಟ್ಟು ಅಲ್ಲಿಂದ ಬೇರೆ ಗ್ರಾಮಕ್ಕೆ ತೆರಳಿದರು.‘
ವರುಣಾ ಕ್ಷೇತ್ರದಲ್ಲಿ ಈ ಬಾರಿ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ವಿ.ಸೋಮಣ್ಣ ಕಣಕ್ಕಿಳಿದಿದ್ದಾರೆ. ಸೋಮಣ್ಣ ಪರ ಪ್ರಚಾರ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಗ್ರಾಮವೊಂದರ ಜನರು ಮೊನ್ನೆ ( ಏ 21) ತರಾಟೆಗೆ ತೆಗೆದುಕೊಂಡಿದ್ದರು. ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಪರ ವಹಿಸಿಕೊಂಡು ಬಂದ ಗ್ರಾಮಸ್ಥರು ಪ್ರತಾಪ್ ಸಿಂಹ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಈ ಕುರಿತು ಚಾಮರಾಜನಗರದಲ್ಲಿ ನಿನ್ನೆ (ಏ 22) ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಯಾವನ್ ರೀ ಅವನು ಪ್ರತಾಪ್ ಸಿಂಹ? ಇಲ್ಲಿ ಯಾಕೆ ಬಂದು ಪ್ರಚಾರ ಮಾಡುತ್ತಿದ್ದಾರೆ? ಇದು ಚಾಮರಾಜನಗರ ಲೋಕಸಭಾ ಕ್ಷೇತ್ರ ಎಂದು ಕಿಡಿಕಾರಿದ್ದರು.
ಪ್ರತಾಪ್ ಸಿಂಹ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಇಲ್ಲಿಗೆ ಬಂದು ಓಡಾಡುತ್ತಿದ್ದಾನೆ. ನನಗ್ಯಾಕೆ ಸೋಲಿನ ಭಯ? ಒಳ ಒಪ್ಪಂದ ಮಾಡಿಕೊಂಡವರು ಬಿಜೆಪಿ ಹಾಗೂ ಜೆಡಿಎಸ್ನವರು. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿ.ಸೋಮಣ್ಣ, ಪ್ರಚಾರ ಮಾಡುವುದು ಅವರ ಕರ್ತವ್ಯ. ಅದನ್ನವರು ಮಾಡುತ್ತಿದ್ದಾರೆ. ನಾನು ಭೂತವೂ ಅಲ್ಲ ಪಿಶಾಚಿಯೂ ಅಲ್ಲ. ನಾನೊಬ್ಬ ಮನುಷ್ಯ. ಸಿದ್ದರಾಮಯ್ಯ ಹಾಗೂ ನಾನು ಜೊತೆಯಲ್ಲಿ ಕೆಲಸ ಮಾಡಿದವರು. ಅವರು ನನಗಿಂತ ದೊಡ್ಡ ನಾಯಕರು. ಅವರು ಪ್ರಚಾರಕ್ಕೆ ಎಷ್ಟು ಬಾರಿಬೇಕಾದರೂ ಬರುತ್ತಾರೆ, ನಾನ್ಯಾಕೆ ಪ್ರಶ್ನೆ ಮಾಡಲಿ. ಅವರು ಬರುವುದರಿಂದ ಮತದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದ್ದರು.
ವರದಿ: ಧಾತ್ರಿ ಭಾರದ್ವಾಜ್
ಇದನ್ನೂ ಓದಿ: Siddaramaiah in Varuna: ಯಾವನ್ ರೀ ಅವನು ಪ್ರತಾಪ್ ಸಿಂಹ; ವರುಣಾದಲ್ಲಿ ಸಿದ್ದರಾಮಯ್ಯ ಗುಡುಗು