Hassan Scandal: ಪ್ರಜ್ವಲ್ ರೇವಣ್ಣ ಸಾಮೂಹಿಕ ಅತ್ಯಾಚಾರಿ, ಆತನನ್ನು ದೇಶದಿಂದ ಹೊರ ಹೋಗಲು ಹೇಗೆ ಬಿಟ್ಟಿರಿ, ರಾಹುಲ್ ಗಾಂಧಿ ಪ್ರಶ್ನೆ
May 02, 2024 03:53 PM IST
ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
- ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಭೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗ: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಒಬ್ಬ ಸಾಮೂಹಿಕ ಅತ್ಯಾಚಾರಿ(Mass Rapist).ಪ್ರಜ್ವಲ್ ರೇವಣ್ಣ400 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಗಂಭೀರ ಆರೋಪಗಳು ಕೇಳಿ ಬಂದಿದೆ. ಇದು ಬರೀ ಸೆಕ್ಸ್ ಸ್ಕ್ಯಾಂಡಲ್ ಅಲ್ಲ. ಇದನ್ನು ಸಾಮೂಹಿಕ ಅತ್ಯಾಚಾರ ಎಂದೇ ಪರಿಗಣಿಸಬೇಕು. ಇಂತಹ ಗಂಭೀರ ಆರೋಪ ಇರುವ ವ್ಯಕ್ತಿ ದೇಶದಿಂದ ಹೊರ ಹೋಗಿದ್ದು, ಆತನನ್ನು ನೀವು ಹೇಗೆ ದೇಶದಿಂದ ಹೊರ ಹೋಗಲು ಬಿಟ್ಟಿರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಲೋಕಸಭೆ ಚುನಾವಣೆ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದು ಸಾಮೂಹಿಕ ಅತ್ಯಾಚಾರ. ಆತ ಅತ್ಯಾಚಾರ ಎಸಗಿದ್ದೂ ಅಲ್ಲದೇ ವಿಡಿಯೋ ಮಾಡಿದ್ದಾರೆ. ಇಂತಹ ವ್ಯಕ್ತಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿದರು. ತಮ್ಮ ಪಕ್ಕದಲ್ಲಿಯೇ ಕುಳ್ಳರಿಸಿಕೊಂಡರು. ಇಂತಹ ಅತ್ಯಾಚಾರಿ ಪರವಾಗಿ ಮತ ಯಾಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ದೇಶದ ಮಹಿಳೆಯರ ಕ್ಷಮೆ ಕೇಳಬೇಕು. ಇದೇ ನರೇಂದ್ರ ಮೋದಿ ಅವರು ಜನರಿಗೆ ನೀಡುವ ಗ್ಯಾರಂಟಿ ಎಂದು ರಾಹುಲ್ ಟೀಕಿಸಿದರು.
ಮಹಿಳೆಯರ ಕ್ಷಮೆ ಕೇಳಲಿ
ಪ್ರಧಾನಿ ನರೇಂದ್ರ ಮೋದಿಯವರು ಕೆಲ ದಿನಗಳ ಹಿಂದೆ ಮತಯಾಚಿಸುವ ಸಂದರ್ಭದಲ್ಲಿ ಅವರಿಗೆ ಪ್ರಜ್ವಲ್ ರೇವಣ್ಣರವರ ಮಾಡಿದ್ದ ಕೃತ್ಯ ಏನು ಎಂಬುದು ಗೊತ್ತಿತ್ತು. ಆದರೂ ಇಂತಹ ಅಭ್ಯರ್ಥಿಯನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಮತ ಯಾಚಿಸಿದರು. ಇದಲ್ಲದೇ ಬಿಜೆಪಿಯ ಪ್ರತಿಯೊಬ್ಬ ಮುಖಂಡರಿಗೆ ಪ್ರಜ್ವಲ್ ವಿಚಾರ ಗೊತ್ತಿತ್ತು. ಆದಾಗ್ಯು ಅವರು ಮೈತ್ರಿ ಮಾಡಿಕೊಂಡರು. ಇದೇ ನಿಜವಾದ ಬಿಜೆಪಿ ವಿಚಾರ. ಆಧಿಕಾರಕ್ಕೆ ಬರಬೇಕು ಎಂದರೇ ಬಿಜೆಪಿಯವರು ಯಾವ ಹಂತಕ್ಕೂ ಹೋಗಲು ತಯಾರಾಗಿದ್ದಾರೆ ಎನ್ನುವುದು ಕರ್ನಾಟಕದ ಮೈತ್ರಿ ಹಾಗೂ ಪ್ರಜ್ವಲ್ ರೇವಣ್ಣ ಘಟನೆಯಿಂದಲೇ ಗೊತ್ತಾಗಿದೆ ಎಂದು ಆಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಎಲ್ಲಾ ವಿಷಯಗಳು ತಿಳಿದಿದ್ದರೂ ಇಂತಹ ಸಾಮೂಹಿಕ ಅತ್ಯಾಚಾರಿ ದೇಶ ಬಿಟ್ಟು ಹೋಗಲು ಸಹಕರಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಪ್ರಕರಣದ ದಾಖಲಾಗುವ ವೇಳೆಗೆ ಆತ ದೇಶದಿಂದ ಪರಾರಿಯಾಗಿದ್ದು, ನೀವು ಏಕೆ ತಡೆಯಲಿಲ್ಲ ಎಂದು ರಾಹುಲ್ ಪ್ರಶ್ನಿಸಿದರು.
ನಿಮ್ಮ ಬಳಿಯೇ ಆಡಳಿತವಿದೆ. ಕಸ್ಟಮ್ಸ್ ಸಹಿತ ಎಲ್ಲಾ ಇಲಾಖೆಗಳು ನಿಮ್ಮ ಹಿಡಿತದಲ್ಲಿವೆ. ಹೀಗಿದ್ದರೂ ಪ್ರಜ್ವಲ್ ರೇವಣ್ಣ ಜರ್ಮನಿಗೆ ಓಡಿ ಹೋಗಲು ಹೇಗೆ ಬಿಟ್ಟಿರಿ ಎನ್ನುವುದು ತಿಳಿಯುತ್ತಿಲ್ಲ. ಇಡೀ ಘಟನೆ ನೋಡಿದರೆ ಅತ್ಯಾಚಾರಿ ಪರವಾಗಿ ನೀವು ನಿಂತಿದ್ದೀರಿ. ಇಂತಹ ವ್ಯಕ್ತಿಗೆ ಮತ ನೀಡಿ ಎಂದು ಮಹಿಳೆಯರನ್ನು ಕೇಳಿದ್ದೀರಿ. ಭಾರತದ ಮಹಿಳೆಯರ ಕ್ಷಮೆಯನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕೋರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅಧ್ಯಕ್ಷ ಕ್ಷಮೆ ಕೇಳಲಿ
ಸಮಾನತೆಯ ಬಗ್ಗೆ ಮಾತನಾಡುವವರನ್ನು ನಕ್ಸಲರು ಎಂದು ಬಿಜೆಪಿ ಅಧ್ಯಕ್ಷರು ಟೀಕಿಸುತ್ತಾರೆ. ಜೆಪಿ ನಡ್ಡಾವರ ಹೇಳಿಕೆ ಸಂವಿಧಾನದ ವಿರೋಧಿಯಾಗಿದ್ದು, ಅವರು ಕ್ಷಮಾಪಣೆ ಕೇಳುವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದು ಸಂವಿಧಾನದ ಮೇಲಿನ ಅತಿದೊಡ್ಡ ಆಕ್ರಮ ಎಂದೇ ಹೇಳಬೇಕಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ನೀಡಬೇಕು. ಅಲ್ಲದೆ ನರೇಂದ್ರ ಮೋದಿಯವರು ತಮ್ಮ ಪಕ್ಷದ ಮುಖಂಡರವರ ಹೇಳಿಕೆಗಳಿಗೆ ದಲಿತರು ಹಾಗೂ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅದಾನಿ, ಅಂಬಾನಿ ಪರ ಆಡಳಿತ
ಪ್ರಧಾನಿ ನರೇಂದ್ರಮೋದಿ ಅವರು ಕಳೆದ 10 ವರ್ಷದ ಆಡಳಿತದಲ್ಲಿ ಕೆಲಸ ಮಾಡಿದ್ದು ಬರೀ 22 ಮಂದಿ ಉದ್ಯಮಿಪತಿಗಳಿವೆ. 16 ಲಕ್ಷ ಕೋಟಿ ರೂಪಾಯಿ ಮಾಡಿ ರಾಷ್ಟ್ರದ ಸಂಪತ್ತನ್ನು 22 ಮಂದಿ ಜೇಬಿಗೆ ಹಾಕುವ ಕೆಲಸ ಬಿಟ್ಟರೆ ಇನ್ನೇನೂ ಮಾಡಿಲ್ಲ. ರಾಷ್ಟ್ರದ ಸಂಪತ್ತು ಅದಾನಿ ಹಾಗೂ ಅಂಬಾನಿ ಜೇಬಿಗೆ ಹೋಗಿದೆ. ಬಡವರು, ದಲಿತರು, ಹಿಂದುಳಿದವರ ಪರವಾಗಿ ನೀವು ಏನು ಮಾಡಿದಿರಿ ಎಂದು ಪ್ರಶ್ನಿಸಿದರು.