Narendra Modi Speech Today: ಕರ್ನಾಟಕದ ಎಲ್ಲ ಸಹೋದರ, ಸಹೋದರಿಯರಿಗೆ.... ಯಾದಗಿರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ನ ಸಮಾವೇಶದ ವೇದಿಕೆಯಲ್ಲಿ ನೆರೆದಿರುವ ಸಾವಿರಾರು ಜನರನ್ನು ಉದ್ದೇಶಿಸಿ ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ.
ಯಾದಗಿರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ನ ಸಮಾವೇಶದ ವೇದಿಕೆಯಲ್ಲಿ ನೆರೆದಿರುವ ಸಾವಿರಾರು ಜನರನ್ನು ಉದ್ದೇಶಿಸಿ ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು. ‘ಕರ್ನಾಟಕದ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು’ ಎಂದು ಕೈ ಮುಗಿದು ಕನ್ನಡದಲ್ಲಿ ಕೊಂಚ ಮಾತನಾಡಿದರು.
ಟ್ರೆಂಡಿಂಗ್ ಸುದ್ದಿ
ಯಾದಗಿರಿ ಜಿಲ್ಲೆಗೆ ಸುಂದರ, ಸಮೃದ್ಧ ಇತಿಹಾಸ ಇದೆ. ಈ ಪ್ರದೇಶವು ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕ. ಸುರಪುರದ ಮಹಾನ್ ರಾಜ ವೆಂಕಟಪ್ಪ ನಾಯಕ ತಮ್ಮ ಅತ್ಯುತ್ತಮ ಆಡಳಿತದ ಮೂಲಕ ದೇಶದಲ್ಲಿ ಖ್ಯಾತಿ ಗಳಿಸಿದ್ದಾರೆ. ನಮ್ಮ ಸುಂದರ ಸಂಸ್ಕೃತಿ, ಪರಂಪರೆಯ ನೆಲವಿದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಯಾದಗಿರಿ ಜಿಲ್ಲೆಯನ್ನು ಕೊಂಡಾಡಿದರು.
ಬಳಿಕ ಪ್ರಧಾನಿ ಮೋದಿ ಇಂದು ಶಂಕುಸ್ಥಾಪನೆಗೊಳ್ಳಲಿರುವ ಯೋಜನೆಗಳ ಕುರಿತು ಮಾತನಾಡಿದ್ದಾರೆ. "ಕರ್ನಾಟಕದ ವಿಕಾಸದ ಉದ್ದೇಶದಿಂದ ಹತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗೆ ಶಂಕುಸ್ಥಾಪನೆ ಮಾಡಲು ಆಗಮಿಸಿರುವೆ. ಈ ಯೋಜನೆಗಳು ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳ ವಿಕಾಸಕ್ಕೆ ನೆರವಾಗಲಿದೆ. ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ, ಕೃಷಿಗೆ ಉಪಯೋಗವಾಗಲಿದೆʼʼ ಎಂದು ಅವರು ಹೇಳಿದ್ದಾರೆ.
ಈ ಯೋಜನೆಯು ಕೃಷಿ ನೀರಾವರಿಗೆ ಅನುಕೂಲವಾಗಲಿದೆ. ಇದರಿಂದ ಜನರ ಜೀವನ ಮಟ್ಟ ಉತ್ತಮಗೊಳ್ಳಲಿದೆ. ಉದ್ಯೋಗಾವಕಾಶ ಹೆಚ್ಚಾಗಲಿದೆ. ಉದ್ಯೋಗ ಪ್ರಮಾಣ ಏರಿಕೆ ಕಾಣಲಿದೆ. ಜಿಲ್ಲೆಯ ವಿಕಾಸಕ್ಕೆ ಈ ಯೋಜನೆ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿ ಅವರ ಪೂರ್ತಿ ಭಾಷಣ ಮತ್ತು ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ
"ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದುʼʼ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದರು.
ಕೊಡೆಕಲ್ನಲ್ಲಿ ಭಾಷಣ ಮತ್ತು ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಕೊಡೆಕಲ್ನಿಂದ ಕಲಬುರಗಿ ಜಿಲ್ಲೆಗೆ ಮೋದಿ ತೆರಳುತ್ತಾರೆ.
ಎರಡು ಗಂಟೆಗೆ ಮಳಖೇಡಕ್ಕೆ ತಲುಪಿ ಕಂದಾಯ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 51 ಸಾವಿರ ಫಲಾನುಭವಿಗಳು ಹಕ್ಕು ಪತ್ರ ಪಡೆಯಲಿದ್ದಾರೆ. ಬಳಿಕ ಸೂರತ್, ಚೆನ್ನೈ ಎಕ್ಸ್ಪ್ರೆಸ್ನ ಭಾಗವಾಗಿರುವ ಎನ್ಎಚ್ 150ಸಿ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಇದು ಸುಮಾರು 2100 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಇದು ಆರು ರಾಜ್ಯಗಳ ಮೂಲಕ ಹಾದು ಹೋಗುವ ಎಕ್ಸ್ಪ್ರೆಸ್ ವೇ ಆಗಿದೆ. ಈ ಎಕ್ಸ್ಪ್ರೆಸ್ ವೇಯಿಂದಾಗಿ ಈ ಮೊದಲ ರಸ್ತೆಗೆ ಹೋಲಿಸಿದರೆ ಪ್ರಯಾಣವು 1600 ಕಿ.ಮೀ.ಯಿಂದ 1270 ಕಿ.ಮೀ. ತಗ್ಗಲಿದೆ. ರಾಜ್ಯದಲ್ಲಿ ಇಂದು ನರೇಂದ್ರ ಮೋದಿ 65.5 ಕಿ.ಮೀ. ಉದ್ದದ ವಿಭಾಗಕ್ಕೆ ಅಡಿಗಲ್ಲು ಹಾಕಲಿದ್ದಾರೆ.