Horoscope Today: ಏಕಾಂಗಿಯಾಗಿ ದಿನ ಕಳೆಯುವಿರಿ, ಹೊಸ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ: ಏ. 28ರ ದಿನ ಭವಿಷ್ಯ
Apr 28, 2024 05:05 AM IST
ಏಪ್ರಿಲ್ 28ರ ದಿನ ಭವಿಷ್ಯ
28 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (28th April 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (28th April 2024 Daily Horoscope).
ತಾಜಾ ಫೋಟೊಗಳು
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಭಾನುವಾರ
ತಿಥಿ : ಚೌತಿ ಬೆಳಗ್ಗೆ 06.11 ರವರೆಗೂ ಇದ್ದು ನಂತರ ಉಪರಿ ಪಂಚಮಿ ಇರುತ್ತದೆ.
ನಕ್ಷತ್ರ : ಮೂಲ ನಕ್ಷತ್ರವು ರಾತ್ರಿ 02.35 ರವರೆಗೂ ಇದ್ದು ನಂತರ ಪೂರ್ವಾಷಾಢ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ ಬೆಳಗ್ಗೆ 05.58
ಸೂರ್ಯಾಸ್ತ: ಸಂಜೆ 06.32
ರಾಹುಕಾಲ: ಸಂಜೆ 05.03 ರಿಂದ 06.37
ರಾಶಿಫಲ
ಸಿಂಹ
ಮಾಡುವ ತಪ್ಪಿನ ಅರಿವಾಗಿ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವಿರಿ. ಹಣಕಾಸಿನ ವಿವಾದವೊಂದು ಎದುರಾಗಲಿದೆ. ಆತಂಕದ ಪರಿಸ್ಥಿತಿಯಿಂದ ಪಾರಾಗಲು ಕೋಪವನ್ನು ಕಡಿಮೆ ಮಾಡಿಕೊಳ್ಳಿರಿ. ಹಿರಿಯರ ಆದೇಶ ಪಾಲನೆ ಮಾಡಿದರೆ ಕಷ್ಟ ನಷ್ಟಗಳು ಕಡಿಮೆಯಾಗುತ್ತವೆ. ನೇರ ನಿಷ್ಠುರದ ನಡೆ-ನುಡಿಯಿಂದ ಎಲ್ಲರ ಗಮನ ಸೆಳೆಯುವಿರಿ. ಆಪತ್ತಿನಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಮನದ ಬೇಸರ ಕಳೆಯಲು ಮನರಂಜನಾ ಮಾಧ್ಯಮವನ್ನು ಅವಲಂಬಿಸುವಿರಿ. ದಂಪತಿಗಳ ನಡುವೆ ಅನಾವಶ್ಯಕ ಮನಸ್ತಾಪ ಉಂಟಾಗುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ಅಪರಿಚಿತರ ಮಾತನ್ನು ನಂಬಿ ಕುಟುಂಬದ ಶಾಂತಿಯನ್ನು ಹಾಳು ಮಾಡದಿರಿ. ಉದ್ಯೋಗಸ್ಥ ಮಹಿಳೆಯರ ಕೈ ಮೇಲಾಗುತ್ತದೆ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು ನೈರುತ್ಯ
ಅದೃಷ್ಟದ ಬಣ್ಣ : ಗುಲಾಬಿ ಬಣ್ಣ
ಕನ್ಯಾ
ಕ್ರೀಡಾಪಟುಗಳಿಗೆ ವಿಶೇಷ ಅವಕಾಶಗಳು ದೊರೆಯಲಿವೆ. ಯೋಜನೆ ಇಲ್ಲದೆ ಹಣವನ್ನು ಖರ್ಚು ಮಾಡಿ ಕಷ್ಟಕ್ಕೆ ಸಿಲುಕುವಿರಿ. ಆತ್ಮೀಯರ ಸಹಾಯದಿಂದ ಸಂತಸದ ಜೀವನ ನಿಮ್ಮದಾಗುತ್ತದೆ. ತಾವಾಗಿಯೇ ಸಹಾಯ ಮಾಡಲು ಬಂದಾಗ ತಿರಸ್ಕರಿಸದಿರಿ. ಅತಿಯಾದ ಆತ್ಮವಿಶ್ವಾಸ ತಪ್ಪು ದಾರಿಯಲ್ಲಿ ನಡೆಸುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡು ಬರಲಿದೆ. ಯಾವುದೇ ವಿಚಾರದಲ್ಲಿಯೂ ದೃಢವಾದ ನಿಲುವನ್ನು ತಾಳಲಾರಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಪಾಲಿಸುವುದು ಅತಿ ಮುಖ್ಯ. ನಿಮ್ಮ ಬಳಿ ಇರುವ ಹಳೆಯ ವಸ್ತುಗಳನ್ನು ವಿಲೇವಾರಿ ಮಾಡಿ ಹೊಸತನ್ನು ಕೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಸಾರವಾಗಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ.
ಪರಿಹಾರ : ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಬಿಳಿ
ತುಲಾ
ದಿನಚರಿಯನ್ನು ಆರಂಭಿಸಲು ಮನಸ್ಸು ಒಪ್ಪದು. ಆದರೆ ಕುಟುಂಬದವರ ಸಹಾಯ ಸಹಕಾರ ಹೊಸ ಆಸಕ್ತಿಯನ್ನು ರೂಪಿಸುತ್ತದೆ. ಒಳ್ಳೆಯ ನಿರೀಕ್ಷೆಯಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಅತಿ ಮುಖ್ಯವಾದಂತಹ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡುವಿರಿ. ಅನಾವಶ್ಯಕ ದುಂದು ವೆಚ್ಚ ಬೇಸರ ಮೂಡಿಸುತ್ತದೆ. ಮನದಲ್ಲಿನ ಚಿಂತೆ ಕಡಿಮೆಯಾಗುತ್ತದೆ. ಎದುರಾಗುವ ವಿವಾದಗಳನ್ನು ಆತ್ಮಸ್ಥೈರ್ಯದಿಂದ ಪರಿಹರಿಸುವಿರಿ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಯಾರೊಂದಿಗೂ ಬೇರೆಯದೆ ಏಕಾಂಗಿಯಾಗಿ ದಿನ ಕಳೆಯುವಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಎದುರಾಗುವುದಿಲ್ಲ. ತಂದೆಯ ಜೊತೆ ಹಣಕಾಸಿನ ನಿರ್ವಹಣೆಯ ಬಗ್ಗೆ ಚರ್ಚೆ ನಡೆಸುವಿರಿ. ಯಾವುದೇ ವಿಚಾರದಲ್ಲಿ ಪ್ರತಿಯೊಬ್ಬರ ಮನಸ್ಸು ಒಂದೇ ಹಾದಿಯಲ್ಲಿ ನಡೆಯುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಮಿಶ್ರ ಪ್ರತಿಫಲವಿದೆ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಬೂದು ಬಣ್ಣ
ವೃಶ್ಚಿಕ
ಕೆಲಸ ಕಾರ್ಯದಲ್ಲಿ ದೊರೆಯುವ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೂಡಿದ ಬಂಡವಾಳಕ್ಕೆ ಮೋಸವಾಗುವುದಿಲ್ಲ. ಸಾಲವಾಗಿ ನೀಡಿದ್ದ ಹಣ ಮರಳಿ ದೊರೆಯುವುದು. ನಿಮ್ಮಲ್ಲಿರುವ ಹಟದ ಗುಣ ಬೇರೆಯವರಲ್ಲಿ ಬೇಸರ ಮೂಡಿಸುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸನ್ನಿವೇಶವನ್ನು ಬದಲಾಯಿಸಿಕೊಳ್ಳುವಿರಿ. ಮನದಲ್ಲಿರುವ ದುಗುಡವನ್ನು ದೂರ ಮಾಡಿ ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬರುವುದಿಲ್ಲ. ಹೊಸ ರೀತಿಯ ನಿರೀಕ್ಷೆಗಳೊಂದಿಗೆ ಉದ್ಯೋಗವನ್ನು ಬದಲಿಸಲು ನಿರ್ಧರಿಸುವಿರಿ. ಪ್ರಯಾಣದಿಂದ ವಿಶೇಷ ಅನುಕೂಲತೆಗಳು ದೊರೆಯಲಿವೆ. ಸಂಗಾತಿ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಕಂಡುಕೊಳ್ಳುವುದು ಒಳ್ಳೆಯದು.
ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಕಂದು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).