Martin Kannada movie: ಟೀಸರ್ ಬಿಡುಗಡೆಗೆ ಪ್ರೀಮಿಯರ್ ಷೋ; ಭಿನ್ನ ಯತ್ನದ ಮೂಲಕ ಗಮನ ಸೆಳೆದ ʼಮಾರ್ಟಿನ್ʼ ಚಿತ್ರತಂಡ
ಮಾರ್ಟಿನ್ ಸೆಟ್ಟೇರಿದ ಸಮಯದಿಂದಲೂ ಸುದ್ದಿ ಮಾಡುತ್ತಲೇ ಇದೆ. ಇತ್ತೀಚೆಗಷ್ಟೇ ಚಿತ್ರ ಟೀಸರ್ ಅನ್ನು ಪ್ರೀಮಿಯರ್ ಷೋ ಮಾಡುವ ಮೂಲಕ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕ ಪ್ರಭುಗಳು ಇದನ್ನು ಮೆಚ್ಚಿಕೊಂಡು ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ.
́́ʼಮಾರ್ಟಿನ್ʼ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಚಿತ್ರ. 2021ರಲ್ಲಿ ಬಿಡುಗಡೆಯಾದ ಪೊಗರು ಚಿತ್ರದ ನಂತರ ಧ್ರುವ ಅವರ ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. ಮಾರ್ಟಿನ್ ಸೆಟ್ಟೇರಿದ ಸಮಯದಿಂದಲೂ ಸುದ್ದಿ ಮಾಡುತ್ತಲೇ ಇದೆ. ಇತ್ತೀಚೆಗಷ್ಟೇ ಚಿತ್ರ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕ ಪ್ರಭುಗಳು ಇದನ್ನು ಮೆಚ್ಚಿಕೊಂಡು ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ.
ಭಿನ್ನವಾಗಿ ಟೀಸರ್ ಬಿಡುಗಡೆ ಮಾಡಿದ ತಂಡ
ಯಾವುದೇ ಚಿತ್ರ ಬಿಡುಗಡೆಗೂ ಮುನ್ನ ಪ್ರೀಮಿಯರ್ ಷೋ ಮಾಡುವುದು ಇತ್ತೀಚಿನ ಸಿನಿರಂಗದ ಟ್ರೆಂಡ್. ಬಹುತೇಕ ಎಲ್ಲಾ ಸಿನಿಮಾಗಳೂ ಪ್ರೀಮಿಯರ್ ಷೋ ಆಯೋಜಿಸುತ್ತವೆ. ಆದರೆ ಮಾರ್ಟಿನ್ ಸಿನಿಮಾದ ಟೀಸರ್ಗೆ ಪ್ರೀಮಿಯರ್ ನಡೆದಿದೆ. ಬಹುಶಃ ಭಾರತದಲ್ಲಿ ಪ್ರೀಮಿಯರ್ ಮೂಲಕ ಟೀಸರ್ ಬಿಡುಗಡೆ ಮಾಡಿದ ಮೊದಲ ಚಿತ್ರವಿದು ಎನ್ನಬಹುದು. ಮಾಗಡಿ ರಸ್ತೆಯ ವಿರೇಶ್ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಪ್ರೀಮಿಯರ್ ಇದ್ದು ನೂರಾರು ಮಂದಿ ಅಭಿಮಾನಿಗಳು ಭಾಗವಹಿಸಿದ್ದರು.
ಮಾರ್ಟಿನ್ ಸಿನಿಮಾ ಕನ್ನಡ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 5 ಭಾಷೆಯ ಟೀಸರ್ ಅನ್ನು ಒಟ್ಟಿಗೆ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೂ ಮುನ್ನ ಜನಪದ ಕಲಾತಂಡಗಳ ವೈಭವದ ಮರವಣಿಗೆ ನಡೆಸಲಾಗಿತ್ತು. ಇದು ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ತಂದುಕೊಟ್ಟಿತ್ತು. ಟೀಸರ್ ನೋಡಿದ ಅಭಿಮಾನಿಗಳು ಫಿದಾ ಆಗಿರುವುದು ಸುಳ್ಳಲ್ಲ.
ಟೀಸರ್ ಬಿಡುಗಡೆಯ ದಿನ ಸಂಜೆ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಆ ವೇಳೆ ಚಿತ್ರತಂಡದ ಸದಸ್ಯರು ʼಮಾರ್ಟಿನ್ʼ ಬಗ್ಗೆ ಮಾತನಾಡಿದರು.
ನಟ ಧ್ರುವ ಸರ್ಜಾ ಮಾತನಾಡಿ ʼಟೀಸರ್ಗೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಹಾಗೂ ಮೆಚ್ಚುಗೆಯ ಮಾತುಗಳಿಗೆ ಮನ ತುಂಬಿ ಬಂದಿದೆ. ನಮ್ಮ ಮಾವ ಅರ್ಜುನ್ ಸರ್ಜಾ ಈ ಚಿತ್ರದ ಕಥೆ ಬರೆದಿದ್ದಾರೆ. ಎ.ಪಿ.ಅರ್ಜುನ್ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ. ರಾಮ್ - ಲಕ್ಷ್ಮಣ್ ಸೇರಿದಂತೆ ಖ್ಯಾತ ಸಾಹಸ ನಿರ್ದೇಶಕರ ಸಾಹಸ ಸಂಯೋಜನೆಯಲ್ಲಿ ಮೂಡಿ ಬಂದಿರುವ ಸಾಹಸ ದೃಶ್ಯಗಳು ಚೆನ್ನಾಗಿದೆ. ಇಡೀ ತಂಡದ ಕಾರ್ಯವೈಖರಿ ಟೀಸರ್ನಲ್ಲಿ ಕಾಣುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿʼ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಎ.ಪಿ. ಅರ್ಜುನ್ ʼನಾನು ಹಾಗೂ ಧ್ರುವ ಹೀರೋ, ನಿರ್ದೇಶಕರ ತರಹ ಕೆಲಸ ಮಾಡುವುದಿಲ್ಲ. ಬದಲಾಗಿ ಸ್ನೇಹಿತರಾಗಿ ಕೆಲಸ ಮಾಡುತ್ತೇವೆ. ಹತ್ತು ವರ್ಷಗಳ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ಬಂದಿದ್ದ ʼಅದ್ದೂರಿʼ ಚಿತ್ರ ಸಾಕಷ್ಟು ಯಶಸ್ಸು ಕಂಡಿತ್ತು. ಈಗ ʼಮಾರ್ಟಿನ್ʼ ಮೂಲಕ ಒಟ್ಟಿಗೆ ಕೆಲಸ ಮಾಡಿದ್ದೇವೆ. ʼಮಾರ್ಟಿನ್ʼ ಪಕ್ಕಾ ಆಕ್ಷನ್ ಚಿತ್ರ. ಅರ್ಜುನ್ ಸರ್ಜಾ ಚಿತ್ರಕಥೆ ಬರೆದಿದ್ದಾರೆ. ಉದಯ್ ಕೆ. ಮೆಹ್ತಾ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರ. ಎಲ್ಲರನ್ನು ಮೆಚ್ಚಿಸುವ ಜವಾಬ್ದಾರಿ ನಮಗಿದೆ. ಇಡೀ ನನ್ನ ತಂಡದ ಸಹಕಾರದಿಂದ ʼಮಾರ್ಟಿನ್" ಉತ್ತಮವಾಗಿ ಬಂದಿದೆ. ಟೀಸರ್ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತುಂಬಾ ಖುಷಿಯಾಗಿದೆʼ ಎಂದರು.
ʼಮಾರ್ಟಿನ್ʼ ಚಿತ್ರದ ಟೀಸರ್ ಚೆನ್ನಾಗಿದೆ. ಇದು ಧ್ರುವ ಅಭಿನಯದ ಐದನೇ ಚಿತ್ರ. ಧ್ರುವನಿಗೆ ಕಥೆ ಒಪ್ಪಿಸುವುದು ಸುಲಭವಲ್ಲ. ಆತ ಚಿತ್ರಕ್ಕಾಗಿ ತುಂಬಾ ಶ್ರಮ ಪಡುತ್ತಾನೆ. ನಮ್ಮ ಕುಟುಂಬದವರಿಗೆ ಧ್ರುವ ಎಂದರೆ ಪ್ರೀತಿ. ಅದರಲ್ಲೂ ನಮ್ಮ ತಾಯಿಗೆ ಧ್ರುವನ ಮೇಲೆ ವಿಶೇಷ ಪ್ರೀತಿ. ಅವರು ಇವತ್ತು ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು ಎಂದು ಅರ್ಜುನ್ ಸರ್ಜಾ ಚಿತ್ರತಂಡಕ್ಕೆ ಶುಭಾ ಹಾರೈಸಿದರು.
ನಾಯಕಿಯರಾದ ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಸ ಸಂಯೋಜಕರಾದ ರಾಮ್ - ಲಕ್ಷ್ಮಣ್ ಮುಂತಾದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.