ಕನ್ನಡ ಸುದ್ದಿ  /  Entertainment  /  Sandalwood News Mandya Mp Actress Sumalatha Ambareesh Invited Dharwad Fan To Abishek Aviva Bidapa Reception Rsm

Sumalatha Ambareesh: ಧಾರವಾಡದ ವಿಶೇಷ ಚೇತನ ಅಭಿಮಾನಿಗೆ ಖುದ್ದು ಕರೆ ಮಾಡಿ ಅಭಿಷೇಕ್‌ ಅವಿವಾ ಆರತಕ್ಷತೆಗೆ ಆಹ್ವಾನಿಸಿದ ಸುಮಲತಾ ಅಂಬರೀಶ್‌

ಸುಮಲತಾ ಅಂಬರೀಶ್‌, ವಿಶೇಷ ಚೇತನ ಅಭಿಮಾನಿ ಬಗ್ಗೆ ತಿಳಿದುಕೊಂಡು ಅವರಿಗೆ ವಿಡಿಯೋ ಕಾಲ್‌ ಮಾಡಿ ಮಗನ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ತನಗೆ ಇನ್ವೈಟ್‌ ಮಾಡಿರುವುದು ಸೌಭಾಗ್ಯಗೆ ಕೂಡಾ ಬಹಳ ಖುಷಿ ಆಗಿದೆ.

ಅಭಿಷೇಕ್‌ ಅವಿವಾ ಆರತಕ್ಷತೆ ವಿಶೇಷ ಅಭಿಮಾನಿಗೆ ಆಹ್ವಾನ
ಅಭಿಷೇಕ್‌ ಅವಿವಾ ಆರತಕ್ಷತೆ ವಿಶೇಷ ಅಭಿಮಾನಿಗೆ ಆಹ್ವಾನ

ಜೂನ್‌ 5 ರಂದು ಸ್ಯಾಂಡಲ್‌ವುಡ್‌ ನಟ ಅಭಿಷೇಕ್‌ ಅಂಬರೀಶ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಹಾಗೂ ಜುಡಿತ್‌ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಯಂಗ್‌ ರೆಬೆಲ್‌ ಸ್ಟಾರ್‌ ಮದುವೆ ಆಗಿದ್ದಾರೆ. ಇಂದು ಜೂನ್(7)‌ ಇಬ್ಬರ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸೆಲೆಬ್ರಿಟಿಗಳ ಮದುವೆ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಸಾಮಾನ್ಯರಿಗೆ ಅವಕಾಶ ಇರುವುದಿಲ್ಲ. ಆದರೆ ಇಲ್ಲಿ ಅಭಿಮಾನಿಯೊಬ್ಬರು ಅಭಿಷೇಕ್‌-ಅವಿವಾ ಮದುವೆ ಆರತಕ್ಷತೆಗೆ ಆಗಮಿಸುತ್ತಿದ್ದಾರೆ. ಅವರಿಗೆ ಸ್ವತ: ಸುಮಲತಾ ಖುದ್ದು ಆಹ್ವಾನ ನೀಡಿದ್ದಾರಂತೆ. ಯಾರಪ್ಪಾ ಆ ವಿಶೇಷ ಅಭಿಮಾನಿ ಎಂಬ ಪ್ರಶ್ನೆಗೆ ಉತ್ತರ, ಅವರ ಹೆಸರು ಸೌಭಾಗ್ಯ. ಧಾರವಾಡದ ವಿಶೇಷ ಚೇತನ ಅಭಿಮಾನಿ. ಜಿಲ್ಲೆಯ ಮದಿಹಾಳ ಬಡಾವಣೆಯ ನಿಂಗಾಜಿ ಯಮನೂರ ಹಾಗೂ ಸುಜಾತ ದಂಪತಿ ಪುತ್ರಿ ಸೌಭಾಗ್ಯ ಅವರಿಗೆ ಸುಮಲತಾ ಅವರು ಆಹ್ವಾನ ಪತ್ರಿಕೆ ಕಳಿಸಿದ್ದು ಮಾತ್ರವಲ್ಲದೆ, ಕರೆ ಮಾಡಿ ಇಂದು ಆರತಕ್ಷತೆಗೆ ಬರಲು ಹೇಳಿದ್ದಾರಂತೆ. 19 ವರ್ಷದ ಸೌಭಾಗ್ಯ ಅಂಬರೀಶ್‌ ಹಾಗೂ ಸುಮಲತಾ ಅವರ ಅಪ್ಪಟ ಅಭಿಮಾನಿ.

ಅಂಬರೀಶ್‌ ನಿಧನರಾದಾಗಿನಿಂದ ಸೌಭಾಗ್ಯ ಅವರನ್ನು ಪದೇ ಪದೆ ನೆನೆಯುತ್ತಿದ್ದಾಳೆ, ಸದಾ ಅಂಬರೀಶ್‌ ಸುಮಲತಾ ಅವರ ಬಗ್ಗೆಯೇ ಮಾತನಾಡುತ್ತಾರೆ. ಪೇಪರ್‌ನಲ್ಲಿ ಅಂಬರೀಶ್‌ ಅಥವಾ ಸುಮಲತಾ ಅವರ ಫೋಟೋ ಕಂಡರೆ ಸಾಕು, ಅದನ್ನು ಕತ್ತರಿಸಿ ಒಂದು ಬುಕ್‌ನಲ್ಲಿ ಅಂಟಿಸಿ ಅವರಿಬ್ಬರ ಬಗ್ಗೆ ಬರೆಯುತ್ತಾಳೆ. ಅಂಬರೀಶ್‌ ನಿಧನದ ಸುದ್ದಿಯನ್ನು ಟಿವಿಯಲ್ಲಿ ನೋಡಿದಾಗಿನಿಂದ ಪ್ರತಿದಿನ ಗೋಡೆ ಮೇಲೆ ಅಂಬಿ ಹಾಗೂ ಸುಮಲತಾ ಹೆಸರನ್ನು ಬರೆಯುತ್ತಿದ್ದಳು. ನಂತರ ನಾವು ಅದನ್ನು ಬುಕ್‌ನಲ್ಲಿ ಬರೆಯುವಂತೆ ಸೂಚಿಸಿದೆವು ಎಂದು ಸೌಭಾಗ್ಯ ಹೆತ್ತವರು ಹೇಳುತ್ತಾರೆ.

ಇದು ಒಮ್ಮೆ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಇದನ್ನು ನೋಡಿದ ಸುಮಲತಾ ಅವರು ವಿಶೇಷ ಚೇತನ ಅಭಿಮಾನಿ ಬಗ್ಗೆ ತಿಳಿದುಕೊಂಡು ಅವರಿಗೆ ವಿಡಿಯೋ ಕಾಲ್‌ ಮಾಡಿ ಮಗನ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ತನಗೆ ಇನ್ವೈಟ್‌ ಮಾಡಿರುವುದು ಸೌಭಾಗ್ಯಗೆ ಕೂಡಾ ಬಹಳ ಖುಷಿ ಆಗಿದೆ. ಇಂದು ಅಪ್ಪ-ಅಮ್ಮನೊಂದಿಗೆ ಸೌಭಾಗ್ಯ ಬೆಂಗಳೂರಿಗೆ ಆಗಮಿಸಿ ರಿಸೆಪ್ಷನ್‌ನಲ್ಲಿ ಭಾಗಿಯಾಗಲಿದ್ದಾರೆ. ಸುಮ್ಮನೆ ಭಾಗಿ ಆಗುವುದಲ್ಲ , ಸುಮಲತಾ ಅವರಿಗಾಗಿ ಸೌಭಾಗ್ಯ ಒಂದು ಸೀರೆ, ಧಾರವಾಡ ಪೇಡಾ ಜೊತೆಗೆ ನವ ವಧು-ವರರಿಗೆ ನೀಡಲು ಹೂವಿನ ಬೊಕೆ ತೆಗೆದುಕೊಂಡು ಬರುತ್ತಿದ್ದಾರೆ.

ಅಭಿಮಾನಿಗಳನ್ನು ಆಹ್ವಾನಿಸಿದ ಅಭಿಷೇಕ್‌ ಅಂಬರೀಶ್‌

ಒಂದೆಡೆ ಸುಮಲತಾ ಅಂಬರೀಶ್‌, ತಮ್ಮ ವಿಶೇಷ ಅಭಿಮಾನಿಯನ್ನು ಆರತಕ್ಷತೆಗೆ ಆಹ್ವಾನಿಸಿದ್ದರೆ ಅಭಿಷೇಕ್‌ ಕೂಡಾ ಅಂಬಿ ಅಭಿಮಾನಿಗಳಿಗೆ ಸೋಷಿಯಲ್‌ ಮೀಡಿಯಾ ಮೂಲಕ ಆಹ್ವಾನಿಸಿದ್ದಾರೆ. ''ಇದೇ ಜೂನ್‌ 7ರ ಬುಧವಾರ ಸಂಜೆ 7 ಗಂಟೆಗೆ ನನ್ನ ವಿವಾಹ ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು ಎಲ್ಲಾ ನನ್ನ ನೆಚ್ಚಿನ ರೆಬೆಲ್‌ ಸ್ಟಾರ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಿಸಿ ಆಶೀರ್ವದಿಸಿ ಹಾಗೂ ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಅಭಿಮಾನ ನಮ್ಮ ಕುಟುಂಬದ ಮೇಲೆ ಇರಲೆಂದು ಆಶಿಸುತ್ತೇನೆ ನಿಮ್ಮ ಪ್ರೀತಿಯ ಅಭಿಷೇಕ್‌ ಅಂಬರೀಶ್‌'' ಎಂದು ಅಭಿಷೇಕ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಇಂದು ನಡೆಯಲಿರುವ ಆರತಕ್ಷೆಗೆ ಹೆಚ್ಚಿನ ಸಂಖ್ಯೆ ಸೆಲೆಬ್ರಿಟಿಗಳು ಆಗಮಿಸುವ ಸಾಧ್ಯತೆ ಇದೆ.

IPL_Entry_Point