Gadayikallu: ಜ್ಯೋತಿರಾಜ್ ಹೊಸ ಸಾಹಸ, 1700 ಅಡಿ ಎತ್ತರದ ಗಡಾಯಿಕಲ್ಲು ಏರಲು ಮುಂದಾದ ಸಾಹಸಿ
ಈಗಾಗಲೇ ಅಪಾಯಕಾರಿ ಬೆಟ್ಟಗಳನ್ನು, ಕಲ್ಲು, ಕೋಟೆಗಳನ್ನು ಕೋತಿಯಂತೆ ಸರಸರ ಏರಿ ಕೋತಿರಾಜ್ ಎಂದೇ ಜನಪ್ರಿಯತೆ ಪಡೆದಿರುವ ಜ್ಯೋತಿರಾಜ್ ಅವರು ಹೊಸ ಸಾಹಸವೊಂದಕ್ಕೆ ಮುಂದಾಗಿದ್ದಾರೆ.
ಮಂಗಳೂರು: ಈಗಾಗಲೇ ಅಪಾಯಕಾರಿ ಬೆಟ್ಟಗಳನ್ನು, ಕಲ್ಲು, ಕೋಟೆಗಳನ್ನು ಕೋತಿಯಂತೆ ಸರಸರ ಏರಿ ಕೋತಿರಾಜ್ ಎಂದೇ ಜನಪ್ರಿಯತೆ ಪಡೆದಿರುವ ಜ್ಯೋತಿರಾಜ್ ಅವರು ಹೊಸ ಸಾಹಸವೊಂದಕ್ಕೆ ಮುಂದಾಗಿದ್ದಾರೆ. ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗ ಜಲಪಾತ ಸೇರಿದಂತೆ ಹಲವೆಡೆ ಸಾಹಸ ಮೆರೆದಿರುವ ಜ್ಯೋತಿರಾಜ್ ಇದೀಗ ಗಡಾಯಿ ಕಲ್ಲಿನ ಮೇಲೆ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.
ಎಲ್ಲಿದೆ ಗಡಾಯಿಕಲ್ಲು?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ತಾಲೂಕಿನಲ್ಲಿರುವ ಗಡಾಯಿ ಕಲ್ಲು ಚಾರಣಿಗರಿಗೆ ಅಚ್ಚುಮೆಚ್ಚು. ಇದು ಜಮಲಾಬಾದ್, ನರಸಿಂಹಗಢ ಎಂಬ ಹೆಸರುಗಳಿಂದಲೂ ಜನಪ್ರಿಯತೆ ಪಡೆದಿದೆ. ಧರ್ಮಸ್ಥಳಕ್ಕೆ ಹೋಗುವವರು ನಿತ್ಯ ಈ ಬೃಹತ್ ಬೆಟ್ಟವನ್ನು ನೋಡಬಹುದು. ಇದು ಕುದುರೆಮುಖ ಪರ್ವತ ಶ್ರೇಣಿಯ ಒಂದು ಭಾಗ. ಟಿಪ್ಪು ಸುಲ್ತಾನ್ ತನ್ನ ತಾಯಿಯ ಸ್ಮರಣಾರ್ಥ ಈ ಕೋಟೆಯನ್ನು ಕಟ್ಟಿದ್ದಾನೆ ಎನ್ನಲಾಗಿದೆ. ಮಂಗಳೂರು, ಉಪ್ಪಿನಂಗಡಿ, ಮೂಡಬಿದಿರೆಯಿಂದ ಧರ್ಮಸ್ಥಳಕ್ಕೆ ಹೋಗುವಾಗ ಈ ಗಡಾಯಿ ಕಲ್ಲು ಕಾಣಿಸುತ್ತದೆ.
ಗಡಾಯಿಕಲ್ಲಿಗೆ ಹೋಗಬೇಕಾದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. 20 ರೂಪಾಯಿ ಪ್ರವೇಶ ಶುಲ್ಕವಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ.
ಈ ಗಡಾಯಿ ಕಲ್ಲಿನ ಮೇಲ್ಬಾಗಕ್ಕೆ ಹೋಗಲು ಬಂಡೆಗಲ್ಲನ್ನು ಕೆತ್ತಿ ನಿರ್ಮಿಸಿರುವ 1876 ಮೆಟ್ಟಿಲುಗಳಿವೆ. ಚಾರಣಿಗರು ಅಥವಾ ಪ್ರವಾಸ ಪ್ರಿಯರು ಈ ಮೆಟ್ಟಿಲ ಮೇಲೆ ನಡೆಯುತ್ತ ಉಸ್ಸಪ್ಪ ಅನ್ನು ಮೇಲೆ ಸಾಗುತ್ತಾರೆ. ಆದರೆ, ಜ್ಯೋತಿರಾಜ್ ಈ ಮೆಟ್ಟಿಲುಗಳ ನೆರವಿಲ್ಲದೆ ಗಡಾಯಿಕಲ್ಲು ಹತ್ತುವ ಸಾಹಸ ಮಾಡಲಿದ್ದಾರೆ.
ಈಗಾಗಲೇ ಎಂಟು ಜನರ ಜತೆಗೆ ಜ್ಯೋತಿರಾಜ್ ಗಡಾಯಿಕಲ್ಲು ಹತ್ತಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಬಸವರಾಜ್, ರಾಜಶೇಖರ್, ಪವನ್ ಜೋಸ್, ನಿಂಗರಾಜು ಮದನ್, ನವೀನ್, ಅಭಿ, ಪವನ್ಕುಮಾರ್ ಈ ತಂಡದಲ್ಲಿದ್ದಾರೆ.
ಈಗಾಗಲೇ ಗಡಾಯಿಕಲ್ಲು ಹತ್ತಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರನ್ನೂ ಈ ತಂಡ ಭೇಟಿ ಮಾಡಿದೆ. ಕಾನೂನಿನ ಚೌಕಟ್ಟಿನೊಳಗೆ ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿ ಕಲ್ಲನ್ನು ಜ್ಯೋತಿರಾಜ್ ಏರಲಿದ್ದಾರೆ. ಸುರಕ್ಷತೆಯ ಕಾರಣಕ್ಕಾಗಿ ಸೊಂಟಕ್ಕೆ ರೋಪ್ ಧರಿಸಿ ಈ ಸಾಹಸ ನಡೆಸಲು ಇವರಿಗೆ ಅನುಮತಿ ನೀಡಲಾಗಿದೆ. ಈ ಹಿಂದೆ ರೋಪ್ ಇಲ್ಲದೆಯೇ ಸಾಕಷ್ಟು ಸಾಹಸ ನಡೆಸಿದ ಇವರು ಈ ಬೃಹತ್ ಬೆಟ್ಟ ಏರುವ ಸಂದರ್ಭದಲ್ಲಿ ಸುರಕ್ಷತೆಗಾಗಿ ರೋಪ್ ಕಟ್ಟಿಕೊಳ್ಳಲಿದ್ದಾರೆ.
ಯಾರು ಜ್ಯೋತಿರಾಜ್?
ಕರ್ನಾಟಕದಲ್ಲಿ ಜನಪ್ರಿಯತೆ ಪಡೆದಿರುವ ಜ್ಯೋತಿರಾಜ್ ಮೂಲತಃ ತಮಿಳುನಾಡಿನವರು. ಅವರು ತಮಿಳುನಾಡಿನ ಮಧುರೆ ಜಿಲ್ಲೆಯ ತೇನಿ ಗ್ರಾಮದಲ್ಲಿ ಜನಿಸಿದರು. ಬಾಲ್ಯದಿಂದಲೇ ಪೋಷಕರಿಂದ ಬೇರ್ಪಟ್ಟ ಇವರು ಬಾಗಲಕೋಟೆಯ ದಂಪತಿಯ ಆಶ್ರಯದಲ್ಲಿ ಬೆಳೆದರು. ಈ ಕುಟುಂಬ ಚಿತ್ರದುರ್ಗದಲ್ಲಿ ನೆಲೆ ನಿಂತಿದ್ದರು. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗಲೇ ಚಿತ್ರದುರ್ಗದ ಬೆಟ್ಟ, ಬಂಡೆಗಳನ್ನು ಹತ್ತಲು ಆರಂಭಿಸಿದ ಇವರು ಇದೀಗ ಕೋತಿರಾಜ್ ಆಲಿಯಾಸ್ ಜ್ಯೋತಿರಾಜ್ ಆಗಿ ಜನಪ್ರಿಯತೆ ಪಡೆದಿದ್ದಾರೆ.