ಕನ್ನಡ ಸುದ್ದಿ  /  Karnataka  /  Vijayapura News Mb Patil Shivanand Patil In Vijayapura District In Charge Minister Race Karnataka Political Update Mnk

Vijayapura News: ಎಂ ಬಿ ಪಾಟೀಲ್‌, ಶಿವಾನಂದ ಪಾಟೀಲ್‌ ಮುಸುಕಿನ ಗುದ್ದಾಟ; ಇಬ್ಬರ ಪೈಕಿ ಯಾರ ಮುಡಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಭಾಗ್ಯ?

ವಿಜಯಪುರ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಸಚಿವದ್ವಯರ ನಡುವೆ ಮುಸುಕಿನ ಕಾಳಗ ಏರ್ಪಟ್ಟಿದೆ. ಎಂ.ಬಿ. ಪಾಟೀಲ್‌ ಮತ್ತು ಶಿವಾನಂದ ಪಾಟೀಲ್‌ ಇಬ್ಬರು ಘಟಾನುಗಳ ಸಚಿವರಿಗೆ ಯಾರಿಗೆ ಉಸ್ತುವಾರಿ ಸ್ಥಾನ ಸಿಗಬಹುದು? ಇದನ್ನು ಕಾಂಗ್ರೆಸ್‌ ಹೈ ಕಮಾಂಡ್‌ ನಿರ್ಧರಿಸಲಿದೆ.

ಎಂ ಬಿ ಪಾಟೀಲ್‌, ಶಿವಾನಂದ್‌ ಪಾಟೀಲ್‌ ಮುಸುಕಿನ ಗುದ್ದಾಟ; ಇಬ್ಬರ ಪೈಕಿ ಯಾರ ಮುಡಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಭಾಗ್ಯ?
ಎಂ ಬಿ ಪಾಟೀಲ್‌, ಶಿವಾನಂದ್‌ ಪಾಟೀಲ್‌ ಮುಸುಕಿನ ಗುದ್ದಾಟ; ಇಬ್ಬರ ಪೈಕಿ ಯಾರ ಮುಡಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಭಾಗ್ಯ?

Vijayapura News: ಸಚಿವ ಸ್ಥಾನ ಹಾಗೂ ಸ್ವಂತ ಜಿಲ್ಲೆಯವರು ಉಸ್ತುವಾರಿ ಸಚಿವರಿಲ್ಲದೇ ಸೊರಗಿದ್ದ ವಿಜಯಪುರ (Vijayapura) ಜಿಲ್ಲೆಗೆ ಈ ಬಾರಿ ಡಬಲ್ ಧಮಾಕಾ ದೊರಕಿದ್ದು, ಜಿಲ್ಲೆಯ ಇಬ್ಬರು ನಾಯಕರು ಪ್ರಭಾವಿ ಖಾತೆ ಅಲಂಕರಿಸಿದ್ದಾರೆ.

ಬಬಲೇಶ್ವರ (Babaleshwara) ಶಾಸಕ ಎಂ.ಬಿ. ಪಾಟೀಲರು (MB Patil) ಬೃಹತ್ -ಮಧ್ಯಮ ಕೈಗಾರಿಕೆ ಸಾರಥ್ಯ ವಹಿಸಿದರೆ, ಬಸವನ ಬಾಗೇವಾಡಿ (Basavana Bagevadi) ಶಾಸಕ ಶಿವಾನಂದ ಪಾಟೀಲ (Shivanad Patil) ಜವಳಿ ಖಾತೆ ಸಾರಥ್ಯ ವಹಿಸಿದ್ದಾರೆ. ಈ ಪ್ರಭಾವಿ ನಾಯಕರಲ್ಲಿ ಯಾರು ಜಿಲ್ಲೆ ಉಸ್ತುವಾರಿ ಸ್ಥಾನ ಅಲಂಕರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಈ ಹಿಂದೆಯೂ ಸಹ ಅಂದರೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇಬ್ಬರು ಸಚಿವರಾಗಿದ್ದ ಸಂದರ್ಭದಲ್ಲಿ ಶಿವಾನಂದ ಪಾಟೀಲರು ಬಾಗಲಕೋಟೆ ಉಸ್ತುವಾರಿಯಾದರೆ, ದಿ.ಎಂ.ಸಿ. ಮನಗೂಳಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಸಿದ್ಧರಾಮಯ್ಯ ಅವರ ಪೂರ್ಣಪ್ರಮಾಣದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರು ಐದು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: ಬಸನಗೌಡ ಪಾಟೀಲ ಯತ್ನಾಳರಿಗೆ ಪ್ರತಿಪಕ್ಷ ನಾಯಕ ಪಟ್ಟ ಸಾಧ್ಯತೆ; ಬಿಜೆಪಿ ವಲಯದಲ್ಲಿ ಹೆಚ್ಚಿದ ಒಲವು

ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಮಂತ್ರಿ ಭಾಗ್ಯ ದೊರಕದ ಕಾರಣ ಬೆಳಗಾವಿ ಜಿಲ್ಲೆಯವರೇ ಉಸ್ತುವಾರಿ ವಹಿಸಿಕೊಳ್ಳುವಂತಾಯಿತು. ಶಶಿಕಲಾ ಜೊಲ್ಲೆ, ದಿ.ಉಮೇಶ ಕತ್ತಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡಿದ್ದರು. ಈಗ ಜಿಲ್ಲೆಯವರೇ ಇಬ್ಬರು ಮಂತ್ರಿಗಳಾಗಿದ್ದಾರೆ, ಈ ಇಬ್ಬರಲ್ಲಿ ಯಾರು ಉಸ್ತುವಾರಿ ಸ್ಥಾನ ದೊರಕಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಹೈಕಮಾಂಡ್‌ ಅಂಗಳದಲ್ಲಿ ನಿರ್ಧಾರ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂ.ಬಿ. ಪಾಟೀಲರಿಗೆ ಮೊದಲ ಪಟ್ಟಿಯಲ್ಲಿಯೇ ಸಚಿವ ಭಾಗ್ಯ ದೊರಕಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲರಿಗೆ ಸಚಿವರಾಗುವ ಭಾಗ್ಯ ದೊರಕಿತು ಏತನ್ಮಧ್ಯೆ ವಿಜಯಪುರ ಜಿಲ್ಲೆಯ ಉಸ್ತುವಾರಿಯನ್ನು ಯಾರಿಗೆ ವಹಿಸಬೇಕು ಎಂಬುದು ಹೈಕಮಾಂಡ್‌ಗೆ ತಲೆನೋವಾಗಿದೆ.

ಇನ್ನು ಈ ಇಬ್ಬರು ನಾಯಕರ ಬೆಂಬಲಿಗರು ನಮ್ಮ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಈ ಇಬ್ಬರಲ್ಲಿ ಯಾರಾದರೂ ಅವರನ್ನು ಸ್ವಾಗತಿಸುವೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಮಂತ್ರಿಸ್ಥಾನ ಸಿಕ್ಕಿರಲಿಲ್ಲ ಹೀಗಾಗಿ ವಿಜಯಪುರ ಜಿಲ್ಲಾ ಉಸ್ತುವಾರಿಯನ್ನು ಬೇರೆ ಜಿಲ್ಲೆಯವರ ಪಾಲಾಗಿತ್ತು. ಬೇರೆ ಜಿಲ್ಲೆಯವರಾಗಿದ್ದರಿಂದ ವಿಜಯಪುರ ಜಿಲ್ಲೆಯ ಸಮಸ್ಯೆ, ಅಭಿವೃದ್ಧಿಗೆ ಅಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಆಗಿರಲಿಲ್ಲ, ಸದ್ಯ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅದರಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯಾರಾಗುತ್ತಾರೆಂದು ಪ್ರಶ್ನೆ ಉದ್ಭವಿಸಿದೆ.

ಒಟ್ಟಿನಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಲು ಈ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು ಇದರಲ್ಲಿ ಯಾರಿಗೆ ಜಿಲ್ಲಾ ಉಸ್ತುವಾರಿ ಪಟ್ಟ ಸಿಗಲಿದೆ ಎಂದು ಕಾದು ನೋಡಬೇಕಿದೆ.

ವರದಿ: ಸಮೀವುಲ್ಲಾ ಉಸ್ತಾದ

IPL_Entry_Point