ಕನ್ನಡ ಸುದ್ದಿ  /  Lifestyle  /  Dasharatha Maharaja Narrated Shani Stotra Check Here

Dasharatha Maharaja narrated Shani Stotra: ದಶರಥ ವಿರಚಿತ ಶನಿಸ್ತೋತ್ರ ಇಲ್ಲಿದೆ

ಶನಿದೇವರು ಎಂದರೆ ಕರ್ಮಫಲವನ್ನು ನೀಡುವ ದೇವರು. ಕರ್ಮಫಲಗಳಲ್ಲಿ ಶುಭ ಹಾಗೂ ಅಶುಭ ಫಲಗಳಿಗೇನೂ ಕೊರತೆ ಇಲ್ಲ. ಶನಿದೆಸೆ, ಸಾಡೇಸಾತಿ ಎಂದರೆ ಆಸ್ತಿಕರು ಸಂಕಷ್ಟಕ್ಕೆ ಬೆದರುತ್ತಾರೆ. ಆಗ ಪರಿಹಾರಕ್ಕೆ ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರ (Dasharatha Maharaja narrated Shani Stotra) ವನ್ನು ಹೇಳಬೇಕೆನ್ನುತ್ತಾರೆ. ಆ ಸ್ತೋತ್ರ ಇಲ್ಲಿದೆ..

ಕರ್ಮಫಲ ನೀಡುವ ದೇವರು ಶನಿದೇವ
ಕರ್ಮಫಲ ನೀಡುವ ದೇವರು ಶನಿದೇವ (WA)

ಶನಿದೇವರು ಎಂದರೆ ಕರ್ಮಫಲವನ್ನು ನೀಡುವ ದೇವರು. ಕರ್ಮಫಲಗಳಲ್ಲಿ ಶುಭ ಹಾಗೂ ಅಶುಭ ಫಲಗಳಿಗೇನೂ ಕೊರತೆ ಇಲ್ಲ. ಶನಿದೆಸೆ, ಸಾಡೇಸಾತಿ ಎಂದರೆ ಆಸ್ತಿಕರು ಸಂಕಷ್ಟಕ್ಕೆ ಬೆದರುತ್ತಾರೆ. ಆಗ ಪರಿಹಾರಕ್ಕೆ ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರವನ್ನು ಹೇಳುವಂತೆ ಸೂಚಿಸಲಾಗುತ್ತದೆ.

ಶನಿದೇವರನ್ನು ಮೆಚ್ಚಿಸಲು ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರ ಹೇಳಬೇಕು ಎನ್ನುತ್ತಾರೆ ಹಿರೀಕರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪಿಪ್ಪಲಾದ ಮುನಿಯು ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನಿತ್ಯಪಠಣ ಮಾಡಿದರೆ ಅದುವೇ ನಮ್ಮನ್ನು ಶನಿಪೀಡೆಯಿಂದ ಪಾರುಮಾಡುತ್ತದೆ ಎಂದು ದಶರಥ ಮಹಾರಾಜ ಹೇಳಿದ್ದ ಎಂಬ ಉಲ್ಲೇಖ ಪುರಾಣದಲ್ಲಿದೆ. ಹಾಗಾದರೆ, ದೃಶರಥ ಕೃತ ಶನಿಸ್ತೋತ್ರ ಯಾವುದು? ಇಲ್ಲಿದೆ ಗಮನಿಸಿ.

ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿಃ |

ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ |

ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ ||

ಭಾವಾರ್ಥ: ಈ ಶನೈಶ್ಚರ ಸ್ತೋತ್ರದ ದ್ರಷ್ಟಾರ ಅಥವಾ ಕರ್ತೃ ದಶರಥನೂ, ಸ್ತೋತ್ರ ದೇವತೆ ಶನಿಯೂ ಆಗಿದ್ದಾರೆ. ಇದು ತ್ರಿಷ್ಟುಪ್ ಛಂದಸ್ಸಿನ ರಚನೆ. ಶನೈಶ್ಚರನನ್ನು ಸಂಪ್ರೀತಗೊಳಿಸಲು ಈ ಸ್ತೋತ್ರ ಪಠಿಸಲಾಗುತ್ತದೆ.

ದಶರಥ ಉವಾಚ :

ಕೋಣೋ ಅಂತಕೋ ರೌದ್ರಯಮೋSಥ ಬಭ್ರುಃ |

ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ||

ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ |

ತಸ್ಮೈನಮಃ ಶ್ರೀ ರವಿನಂದನಾಯ || 1 ||

ಭಾವಾರ್ಥ : ಕೋಣ, ಅಂತಕ, ರೌದ್ರ, ಯಮ, ಬಭ್ರು, ಕೃಷ್ಣ, ಶನಿ, ಪಿಂಗಲ, ಮಂದ, ಸೌರಿ ಇವು ಶನಿದೇವನ ಹತ್ತು ಹೆಸರುಗಳು. ಇವುಗಳನ್ನು ನಿತ್ಯವೂ ಪಠಿಸುವುದರಿಂದ ಯಾರು ಸಂಪ್ರೀತನಾಗಿ ಪೀಡೆಗಳನ್ನು ಪರಿಹರಿಸುವನೋ ಅಂಥ ರವಿತನಯನಿಗೆ ನನ್ನ ನಮಸ್ಕಾರ.

ಸುರಾಸುರಾಃ ಕಿಂ ಪುರುಷೋರಗೇಂದ್ರಾ|

ಗಂಧರ್ವ ವಿದ್ಯಾಧರ ಪನ್ನಗಾಶ್ಚ ||

ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |

ತಸ್ಮೈ ನಮಃ ಶ್ರೀರವಿನಂದನಾಯ || 2 ||

ಭಾವಾರ್ಥ: ದೇವತೆಗಳು, ಅಸುರರು, ಕಿಂಪುರುಷರು, ಸರ್ಪ ಕುಲ, ಗಂಧರ್ವ – ವಿದ್ಯಾಧರರು, ಪನ್ನಗರೇ ಆದಿಯಾಗಿ ಯಾರು ಕೂಡಾ ವಿಷಮಸ್ಥಾನ ಸ್ಥಿತನಾಗಿರುವ ಇವನ ಪೀಡೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಅಂಥ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ನರಾನರೇಂದ್ರಾಃ ಪಶವೋಮೃಗೇಂದ್ರಾ |

ವನ್ಯಾಶ್ಚಯೇ ಕೀಟ ಪತಂಗ ಭೃಂಗಾಃ ||

ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |

ತಸ್ಮೈ ನಮಃ ಶ್ರೀರವಿನಂದನಾಯ || 3 ||

ಭಾವಾರ್ಥ: ಮನುಷ್ಯರು, ರಾಜರು, ಪಶುಗಳು, ಮೃಗರಾಜ ಸಿಂಹನಾದಿಯಾಗಿ ಎಲ್ಲ ಪ್ರಾಣಿಗಳು, ಕೀಟಗಳು, ಪತಂಗಗಳು, ಭ್ರಮರಗಳು ಕೂಡಾ ವಿಷಮಸ್ಥಾನ ಸ್ಥಿತನಾದ ಈತನಿಂದ ಪೀಡಿಸಲ್ಪಡುವರು. ಅಂಥ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ದೇಶಾಶ್ಚ ದುರ್ಗಾಣಿ ವನಾನಿಯತ್ರ |

ಸೇನಾನಿವೇಶಾಃ ಪುರಪತ್ತನಾನಿ ||

ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |

ತಸ್ಮೈ ನಮಃ ಶ್ರೀರವಿನಂದನಾಯ || 4 ||

ಭಾವಾರ್ಥ: ದೇಶಗಳು, ಕೋಟೆ ಕೊತ್ತಲಗಳು, ವನಗಳು, ಸೈನಿಕರ ನೆಲೆಗಳು, ನಗರ – ಪಟ್ಟಣಗಳು ಇವೆಲ್ಲವೂ ವಿಷಮಸ್ಥಾನ ಸ್ಥಿತನಾದ ಈತನ ಬಾಧೆಗೆ ಒಳಗಾಗುವರು. ಅಂತಹಾ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ತಿಲೈರ್ಯವೈರ್ಮಾಷ ಗುಡಾನ್ನ ದಾನೈ |

ರ್ಲೋಹೇನ ನೀಲಾಂಬರದಾನತೋ ವಾ ||

ಪ್ರೀಣಾತಿ ಮಂತ್ರೈರ್ನಿಜವಾಸರೇ ಚ |

ತಸ್ಮೈ ನಮಃ ಶ್ರೀರವಿನಂದನಾಯ || 5 ||

ಭಾವಾರ್ಥ: ಶನೈಶ್ಚರನ ವಾರವಾಗಿರುವ ಶನಿವಾರದಂದು ಎಳ್ಳು, ಗೋಧಿ, ಉದ್ದು, ಬೆಲ್ಲ, ಅನ್ನದಾನ ಮಾಡುವುದರಿಂದ; ಶನೈಶ್ಚರನ ಮಂತ್ರಗಳನ್ನು ಪಠಿಸುತ್ತಾ ಕಬ್ಬಿಣ, ನೀಲವರ್ಣದ ವಸ್ತ್ರ ದಾನ ಮಾಡುವುದರಿಂದ ಸುಪ್ರೀತನಾಗುವ ದೇವನು ಈತನೆ. ಅಂತಹಾ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಪ್ರಯಾಗ ಕೂಲೇ ಯಮುನಾತಟೇ ಚ |

ಸರಸ್ವತಿ ಪುಣ್ಯ ಜಲೇ ಗುಹಾಯಾಮ್ ||

ಯೋ ಯೋಗೀನಾಂ ಧ್ಯಾನಗತೋSಪಿ ಸೂಕ್ಷ್ಮಃ |

ತಸ್ಮೈ ನಮಃ ಶ್ರೀರವಿನಂದನಾಯ || 6 ||

ಭಾವಾರ್ಥ: ಪ್ರಯಾಗದ ದಂಡೆಯ ಮೇಲೆ, ಯಮುನಾ ನದಿಯ ದಡದಲ್ಲಿ, ಸರಸ್ವತಿ ನದಿಯ ಪುಣ್ಯ ತೀರ್ಥದಲ್ಲಿ, ಮತ್ತು ಗುಹೆಗಳಲ್ಲಿ ನೆಲೆಸಿರುವ ಮಹಾಯೋಗಿಗಳ ಧ್ಯಾನದ ಸೂಕ್ಷ್ಮರೂಪಿಯಾಗಿ ಯಾರು ಅಂತರ್ಗತರಾಗಿರುವರೋ ಅಂತಹಾ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟಃ |

ತದೀಯ ವಾರೇಸ ನರಃ ಸುಖೀಸ್ಯಾತ್ ||

ಗ್ರಹಾದ್ಗತೋಯೋನ ಪುನಃ ಪ್ರಯಾತಿ |

ತಸ್ಮೈ ನಮಃ ಶ್ರೀರವಿನಂದನಾಯ || 7 ||

ಭಾವಾರ್ಥ: ಶನಿವಾರದಂದು ಬೇರೆ ಊರಿನಿಂದ ತನ್ನ ಸ್ವಗೃಹಕ್ಕೆ ಬರುವ ಮನುಜನು ಸುಖಿ. ಆ ದಿನ ಮನೆಯಿಂದ ಹೊರಗೆ ಹೋದವನು ಮತ್ತೆ ಬರಲಾರ. ಇಂಥ ಫಲವನ್ನು ಉಂಟುಮಾಡುವ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ |

ತ್ರಾತಾ ಹರೀಶೋ ಹರಿತೇ ಪಿನಾಕಿ ||

ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿಃ |

ತಸ್ಮೈ ನಮಃ ಶ್ರೀರವಿನಂದನಾಯ || 8 ||

ಭಾವಾರ್ಥ : ಸ್ವರ್ಗ, ಮರ್ತ್ಯ, ಪಾತಾಳಗಳೆಂಬ ಮೂರು ಲೋಕಗಳನ್ನು ಸೃಷ್ಟಿಸಿದ ಬ್ರಹ್ಮ, ಪಾಲಕ ಶ್ರೀಹರಿ, ಲಯಕರ್ತ ಮಹಾದೇವ ಸ್ವರೂಪಿಯೂ; ಋಗ್ ಯಜು ಸಾಮಗಳೆಂಬ ವೇದತ್ರಯಗಳ ಮೂರ್ತರೂಪವೂ ಆಗಿರುವ ಪ್ರಭಾವಿ ರವಿಪುತ್ರನಿಗೆ ನನ್ನ ನಮಸ್ಕಾರ.

ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ |

ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ ||

ಪಠೇತ್ತು ಸೌಖ್ಯಂ ಭುವಿಭೋಗಯುಕ್ತಃ |

ಪ್ರಾಪ್ನೋತಿ ನಿರ್ವಾಣ ಪದಂ ತದಂತೇ || 9 ||

ಭಾವಾರ್ಥ : ಶನೈಷ್ಚರನ ಈ ಅಷ್ಟಕ ಸ್ತೋತ್ರಗಳನ್ನು ಯಾರು ನಿತ್ಯವೂ ಉಷಃಕಾಲದಲ್ಲಿ ಪಠಿಸುವರೋ ಅವರು ಸದ್ಗುಣಿಗಳಾದ ಪುತ್ರರು, ಪಶುಗಳು, ಬಾಂಧವರೊಂದಿಗೆ ಭೂಮಿಯಲ್ಲಿ ಸಮಸ್ತ ಭೋಗಗಳನ್ನು ಹೊಂದಿ, ಸುಖಸೌಖ್ಯಾದಿಗಳನ್ನು ಅನುಭವಿಸುವರು. ಅಷ್ಟು ಮಾತ್ರವಲ್ಲ ಮರಣಾನಂತರ ಮೋಕ್ಷವನ್ನೂ ಹೊಂದುವರು.

ಕೋಣಸ್ಥೈಃ ಪಿಂಗಲೋ ಬಭ್ರುಃ |

ಕೃಷ್ಣೋರೌದ್ರೋ ಅಂತಕೋ ಯಮಃ ||

ಸೌರಿಃ ಶನೈಶ್ಚರೋ ಮಂದಃ |

ಪಿಪ್ಪಲಾದೇನ ಸಂಸ್ತುತಃ || 10 ||

ಭಾವಾರ್ಥ: ಪಿಪ್ಪಲಾದ ಮುನಿಯು ಶನಿದೇವನನ್ನು ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ, ಮಂದ ಎಂಬ ಹೆಸರುಗಳಿಂದ ಸ್ತುತಿಸಿದ್ದಾರೆ.

ಏತಾನಿ ದಶನಾಮಾನಿ |

ಪ್ರಾತರುತ್ಥಾಯ ಯಃ ಪಠೇತ್ ||

ಶನೈಶ್ಚರ ಕೃತಾಪೀಡಾ |

ನ ಕದಾಚಿತ್ ಭವಿಷ್ಯತಿ || 11 ||

ಭಾವಾರ್ಥ: ಉಷಃಕಾಲದಲ್ಲಿ ಎದ್ದು ಶನೈಶ್ಚರನ ಈ ಹತ್ತು ಹೆಸರುಗಳನ್ನು ಪಠಿಸುವವರಿಗೆ ಶನೈಶ್ಚರನಿಂದ ಯಾವುದೇ ಬಗೆಯ ಅನಿಷ್ಟವೂ ಉಂಟಾಗದು.

ಈ ಸ್ತೋತ್ರವನ್ನು ಪಠಿಸುವ ಕ್ರಮಕ್ಕೆ ಈ ಕೆಳಗಿನ ವಿಡಿಯೋವನ್ನು ಗಮನಿಸಬಹುದು.

ಆದಾಗ್ಯೂ ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಪ್ರಾಥಮಿಕ ತಿಳಿವಳಿಕೆಗಷ್ಟೇ ಸೀಮಿತ. ಇದರಲ್ಲಿ ಇರುವ ಅಂಶಗಳೆಲ್ಲವೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಜ ಮತ್ತು ನಿಖರವಾದುದು ಎಂದು ಹೇಳಲಾಗದು. ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆಯನ್ನು ನಿಮ್ಮ ನಿಮ್ಮ ಜಾತಕಾನುಸಾರ ಪರಿಶೀಲಿಸಿ ಪಡೆದುಕೊಳ್ಳುವುದು ಕ್ಷೇಮಕರ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ