Vijayapura Monuments: ವಿಜಯಪುರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯ; ಇವುಗಳ ಅಸಲಿ ಹೆಸರು ತಿಳಿಯಿರಿ PHOTOS
- Original names of Vijayapur monuments: ಐತಿಹಾಸಿಕ ವಿಜಯಪುರ ನಗರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯವಾಗಿವೆ. ರೂಢನಾಮಗಳ ಅಬ್ಬರದಲ್ಲಿ ಮೂಲ ನಾಮಗಳೇ ಜನರಿಗೆ ಮರೆತು ಹೋಗಿವೆ. ವಿಶ್ವವಿಖ್ಯಾತ ಸ್ಮಾರಕಗಳು ತಮ್ಮ ರೂಢನಾಮದಿಂದಲೇ ವಿಶ್ವದ ಇತಿಹಾಸ ಪುಟಗಳಲ್ಲಿ ರಾರಾಜಿಸುತ್ತಿರುವುದು ವಿಪರ್ಯಾಸ.
- Original names of Vijayapur monuments: ಐತಿಹಾಸಿಕ ವಿಜಯಪುರ ನಗರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯವಾಗಿವೆ. ರೂಢನಾಮಗಳ ಅಬ್ಬರದಲ್ಲಿ ಮೂಲ ನಾಮಗಳೇ ಜನರಿಗೆ ಮರೆತು ಹೋಗಿವೆ. ವಿಶ್ವವಿಖ್ಯಾತ ಸ್ಮಾರಕಗಳು ತಮ್ಮ ರೂಢನಾಮದಿಂದಲೇ ವಿಶ್ವದ ಇತಿಹಾಸ ಪುಟಗಳಲ್ಲಿ ರಾರಾಜಿಸುತ್ತಿರುವುದು ವಿಪರ್ಯಾಸ.
(1 / 5)
ಇಂಜನಿಯರಿಂಗ್ ಲೋಕದ ಅದ್ಭುತ ಎಂದೇ ವರ್ಣಿಸಲಾಗಿರುವ ಗೋಳಗುಮ್ಮಟದ ಜೊತೆಗೆ ಅನೇಕ ವೈವಿಧ್ಯಮಯ ಸ್ಮಾರಕಗಳು ವಿಜಯಪುರದಲ್ಲಿವೆ. ಕೇವಲ ತಳಪಾಯ, ಒಂದು ಅಂತಸ್ತು ಅದು ಅಪೂರ್ಣವಿರುವ ಬಾರಾಕಮಾನ್ ಕಟ್ಟಡವನ್ನು ನೋಡಲು ಕುತ್ತಿಗೆ ಮೇಲಕೆತ್ತಬೇಕು, ಅಷ್ಟೊಂದು ವಿಭಿನ್ನ ಸ್ಮಾರಕಗಳು ಇಲ್ಲಿವೆ. ಆದರೆ ಈ ಎಲ್ಲ ಸ್ಮಾರಕಗಳ ಮೂಲ ಹೆಸರುಗಳು ಮಾಯವಾಗಿವೆ. ರೂಢನಾಮಗಳು ಎಷ್ಟೊಂದು ಗಾಢವಾಗಿ ಬೇರೂರಿವೆ ಎಂದರೆ ಸ್ಮಾರಕಗಳ ಮೂಲ ನಾಮ ಹುಡಕಲು ದೊಡ್ಡ ಸಂಶೋಧನೆಯೇ ನಡೆಸಬೇಕಾದ ಅನಿವಾರ್ಯತೆ ಇದೆ. ಐತಿಹಾಸಿಕ ಸ್ಮಾರಕಗಳ, ಆಕಾರ, ಗಾತ್ರವನ್ನು ನೋಡಿ ಜನ ಅವುಗಳಿಗೆ ತಮ್ಮದೆ ಆದ ರೂಢನಾಮಗಳುನ್ನು ನೀಡಿದ್ದಾರೆ. ಅನೇಕ ಸ್ಮಾರಕಗಳು ತಮ್ಮ ಮೂಲ ಹೆಸರನ್ನೇ ಕಳೆದುಕೊಂಡಿದ್ದು ಅಪರೂಪಕ್ಕೆ ಯಾರಾದರೂ ಆ ಸ್ಥಳಗಳ ಮೂಲನಾಮ ಉಚ್ಚರಿಸಿದರೆ, ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟಸಾಧ್ಯ.
(2 / 5)
ಅಲಿ ರೋಜಾ: ಎರಡನೇಯ ಅಲಿ ಆದಿಲ್ಶಾಹ ತನ್ನ ಸಮಾಧಿಗಾಗಿ ಕಟ್ಟಡವೊಂದನ್ನು ನಿರ್ಮಿಸಲು ತೀರ್ಮಾನಿಸಿದ್ದ. ಗೋಳಗುಮ್ಮಟ ಹಾಗೂ ಇಬ್ರಾಹಿಂರೋಜಾಗಿಂತ ಕಲಾತ್ಮಕವಾದ ಹಾಗೂ ಎತ್ತರವಾದ ಕಟ್ಟಡವನ್ನು ಕಟ್ಟುವುದು ಆತನ ಮಹದಾಸೆಯಾಗಿತ್ತು. ಅದಕ್ಕಾಗಿ ಆತ ಕಾರ್ಯಪ್ರವೃತ್ತನೂ ಆಗಿದ್ದ, ಆದರೆ ಕಟ್ಟಡದ ಕೆಲಸ ಪ್ರಗತಿಯಲ್ಲಿರುವಾಗಲೇ ಆತ ವಿಧಿವಶನಾದ. ಅವನ ಆಸೆ ಈಡೇರದೇ ಹೋಯಿತು. ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿತು. ಆ ಕಟ್ಟಡದ ಮೂಲ ಹೆಸರು ಅಲಿ ರೋಜಾ, ಕಟ್ಟಡದ ರಚನೆಯಲ್ಲಿ ಬಹು ಕಮಾನುಗಳು ಇರುವುದರಿಂದ ಜನರು ಇದನ್ನು ಬಾರಾಕಮಾನ್ ಎಂದು ಕರೆಯತೊಡಗಿದರು. ಅಂದಿನಿಂದ ಅರ್ಧಕ್ಕೆ ನಿಂತ ಯಾವುದೇ ಕೆಲಸಗಳಿಗೂ ‘ಬಾರಾ ಕಮಾನ’ ರೂಢನಾಮವಾಯಿತು.
(3 / 5)
ಹೈದರ್ ಬುರುಜ್: ವಿಜಯಪುರ ಜಿಲ್ಲೆಯ ಜನತೆಗೆ ಅಲಿ ಬುರ್ಜ್ ಅಥವಾ ಹೈದರ್ ಬುರುಜ್ ಎಲ್ಲಿದೆ ಎಂದು ಕೇಳಿ ನೋಡಿ. ಇಲ್ಲಿ ಉಪಲಿ ಬುರುಜ್ ಇದೆ, ಹೈದರ ಬುರುಜ್ ಇಲ್ಲ ಎಂಬ ಉತ್ತರ ಬರುತ್ತದೆ. ವಾಸ್ತವವಾಗಿ ಉಪಲಿ ಬುರುಜಿನ ಮೂಲ ಹೆಸರೇ ಹೈದರ್ ಬುರುಜ್, ಸೇನಾ ಸರದಾರ ಹೈದರಖಾನ್ ಈ ಯುದ್ಧ ಗೋಪುರವನ್ನು ಕಟ್ಟಿಸಿದನೆಂದು ಅಲ್ಲಿನ ಶಾಸನ ಸಾರುತ್ತದೆ. ನಂತರದ ದಿನಗಳಲ್ಲಿ ವಿಜಯಪುರದ ಅವನತಿಯಾದಾಗ ಜನರು ಈ ಬುರುಜ್ ಗೋಡೆಗೆ ಬೆರಣಿ (ಕುಳ್ಳು) ಅಂಟಿಸುತ್ತಿದ್ದರು. ಹೀಗಾಗಿ ಕಾಲಕ್ರಮೇಣ ಇದು ಉಪಲಿ ಬುರುಜು ಎಂದಾಯಿತು. ಉಪಲಿ ಎಂದರೆ ಬೆರಣಿ. ಇನ್ನೂ ಕೆಲವರ ಪ್ರಕಾರ ಇದು ಎತ್ತರ ಸ್ಥಳದಲ್ಲಿರುವದರಿಂದ ಇದರ ಹೆಸರು ಉಪರಿ ಬುರುಜ್ ಆಗಿದೆ ಎಂಬ ವಾದವೂ ಇದೆ. ಏನೇ ಇರಲಿ ಈ ಸ್ಮಾರಕದ ಮೂಲ ಹೆಸರನ್ನು ಜನರು ಸಂಪೂರ್ಣವಾಗಿ ಮರೆತಿದ್ದಾರೆ. ತನ್ನ ರೂಢನಾಮದಿಂದಲೇ ಈ ಸ್ಮಾರಕ ಜಗತ್ಪಸಿದ್ಧವಾಗಿದೆ.
(4 / 5)
ಮುಸ್ತಫಾಖಾನ್ ದರ್ವಾಜಾ: ಇನ್ನು ಬಡಿಕಮಾನ್ ಎಂಬ ಕಮಾನಿನ ಹೆಸರಿನ ಕಮಾಲ್ ಬೇರೆ, ಇದರ ಎತ್ತರವನ್ನು ನೋಡಿ ಜನ ಇದನ್ನು ಬಡಿ (ದೊಡ್ಡ) ಕಮಾನ್ ಎಂದು ಕರೆಯುತ್ತಾರೆ. ಈ ಕಮಾನಿನ ನಿಜನಾಮ ಮುಸ್ತಫಾಖಾನ್ ದರ್ವಾಜಾ ಎಂದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಅದು ಅಂದಿನ ಪ್ರಧಾನ ಮಂತ್ರಿ ಮುಸ್ತಫಾಖಾನ ಮನೆಯ ಬಾಗಿಲು!
(5 / 5)
ಫತೇಹ್ ದರ್ವಾಜಾ: ಮನಗೂಳಿ ರಸ್ತೆಯಲ್ಲಿರುವ ಐತಿಹಾಸಿಕ ಕೋಟೆಗೋಡೆ ಮಹಾದ್ವಾರ ಮನಗೂಳಿ ಅಗಸಿ ಎಂದು ಕರೆಯುತ್ತಾರೆ. ಈ ಅಗಸಿಯ ಮೂಲ ಹೆಸರು ಫತೇಹ್ ದರ್ವಾಜಾ ಆದರೆ ಇಂದಿಗೂ ಜನರು ಇದನ್ನು ‘ಮನಗೂಳಿ ಅಗಸಿ' ಎಂದೇ ಕರೆಯುತ್ತಾರೆ. ಫತೇಹ ದರ್ವಾಜಾ ಎಂದು ಕೇಳಿದರೆ ಯಾರಿಗೂ ಅರ್ಥವಾಗುವುದೇ ಇಲ್ಲ. ಅಸಾರ್ ಮಹಲ್ ಬಳಿ ಕೂಡ ಒಂದು ವಿಭಿನ್ನವಾದ ಕಮಾನ್ ಇದೆ. ಇದರ ಆಕಾರವನ್ನು ನೋಡಿ ಜನ ಇದನ್ನು ಪಸಾರಿ ಕಮಾನ್ ಎಂದೇ ಕರೆಯುತ್ತಾರೆ. ಆದರೆ ಇದರ ಮೂಲನಾಮವೇ ಬೇರೆ. ಇನ್ನೂ ಹಲವಾರು ಸ್ಮಾರಕಗಳ ಮೂಲ ಹೆಸರುಗಳು ಹೇಳ ಹೆಸರಿಲ್ಲದೇ ಮಾಯವಾಗಿವೆ. ಸ್ಮಾರಕಗಳನ್ನು ನೆನೆಯುವುದು ಅವುಗಳ ಹೆಸರಿನಿಂದಲೇ, ಸ್ಮಾರಕಗಳ ಇತಿಹಾಸ ಪ್ರಾರಂಭವಾಗುವುದೇ ಹೆಸರಿನಿಂದಲೇ, ಈ ಕಾರಣಕ್ಕೆ ಈ ಬಗ್ಗೆ ಸಂಶೋಧನೆ ನಡೆಸಬೇಕು, ಮೂಲ ನಾಮಗಳ ಫಲಕಗಳನ್ನು ಸ್ಮಾರಕಗಳ ಪಕ್ಕದಲ್ಲಿ ಬೃಹತ್ ಅಕ್ಷರಗಳಲ್ಲಿ ಅಳವಡಿಸುವುದು ಸೂಕ್ತ ಎಂಬ ಅಭಿಪ್ರಾಯ ವಿಜಯಪುರ ಜನತೆಯಿಂದ ಕೇಳಿಬರುತ್ತಿದೆ.
ಇತರ ಗ್ಯಾಲರಿಗಳು