ಕನ್ನಡ ಸುದ್ದಿ  /  Sports  /  Cricket News Ipl 2023 Here Is Why Ishan Kishan Did Not Bat Against Gujarat Titans Qualifier 2 Mumbai Indians Jra

Ishan Kishan: ಗುಜರಾತ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲೇ ಇಲ್ಲ ಇಶಾನ್ ಕಿಶನ್; ಕಾರಣ ಇದು

IPL 2023: ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಅಗ್ರ ಕ್ರಮಾಂಕದ ಬ್ಯಾಟರ್‌ ಇಶಾನ್‌ ಕಿಶನ್‌ ಬ್ಯಾಟ್‌ ಬೀಸಲಿಲ್ಲ. ಇದಕ್ಕೆ ಕಾರಣವೇನು ಎಂಬ ಮಾಹಿತಿ ಈ ಸುದ್ದಿಯಲ್ಲಿದೆ.

ಇಶಾನ್‌ ಕಿಶನ್
ಇಶಾನ್‌ ಕಿಶನ್

ಐಪಿಎಲ್ (IPL 2023) ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಂಬೈ ಇಂಡಿಯನ್ಸ್‌ (Mumbai Indians), ಪ್ರಸಕ್ತ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿದೆ. ಕಳೆದ ಬುಧವಾರ (ಮೇ 24) ಚೆಪಾಕ್‌ ಮೈದಾನಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದ್ದ ರೋಹಿತ್‌ ಶರ್ಮಾ ಬಳಗ, ಮತ್ತೊಂದು ಕಪ್‌ ಗೆಲ್ಲುವ ಅವಕಾಶ ಪಡೆಯಿತು. 2017ರಿಂದಲೂ, ಪ್ಲೇಆಫ್‌ಗೆ ಎಂಟ್ರಿ ಕೊಟ್ಟ ಬಳಿಕ ರೋಹಿತ್ ಶರ್ಮಾ ಬಳಗವು ಎಲ್ಲಿಯೂ ಸೋತಿಲ್ಲ. ಆದರೆ, ಶುಕ್ರವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧದ ಮಹತ್ವದ ಕ್ವಾಲಿಫೈಯರ್‌ ಪಂದ್ಯದಲ್ಲಿ ತಂಡವು ಗೆಲುವು ಸಾಧಿಸಲು ವಿಫಲವಾಯ್ತು. (ಐಪಿಎಲ್)

ಶುಬ್ಮನ್ ಗಿಲ್​ (129) ಸ್ಫೋಟಕ ಶತಕ ಹಾಗೂ ಮೋಹಿತ್‌ ಶರ್ಮಾ ಐದು ವಿಕೆಟ್‌ ನೆರವಿನಿಂದ ಸುಲಭವಾಗಿ ಗೆದ್ದ ಗುಜರಾತ್‌ ಫೈನಲ್‌ ಪ್ರವೇಶಿಸಿತು. ಹೀಗಾಗಿ ಮುಂಬೈ ಪ್ರಯತ್ನ ವಿಫಲವಾಯ್ತು.

ಮಹತ್ವದ ಪಂದ್ಯದಲ್ಲಿ 234 ರನ್‌ಗಳ ಪ್ರಬಲ ಗುರಿ ಪಡೆದ ಮುಂಬೈ, ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಚೇಸ್‌ ಮಾಡಲಾಗದ ಗುರಿ ನೋಡಿ ಬೆಪ್ಪಾಗಿತ್ತು. ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರೂನ್ ಗ್ರೀನ್ ಪ್ರಯತ್ನವೂ ವಿಫಲವಾಯ್ತು. ಸೂರ್ಯಕುಮಾರ್ ಯಾದವ್‌ 61 ರನ್‌ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. 15ನೇ ಓವರ್‌ನಲ್ಲಿ ಅವರು ಔಟಾದ ಬಳಿಕ, ತಂಡದ ಚೇಸಿಂಗ್‌ ಏಕಾಏಕಿ ಕುಸಿಯಿತು. ಮುಂದೆ 18.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ತಂಡವು ಹೀನಾಯ ಸೋಲೊಪ್ಪಿತು.

ಮುಂಬೈ ಇಂಡಿಯನ್ಸ್‌ ಸೋಲಿಗೆ ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖವಾದದ್ದು, ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಅಲಭ್ಯತೆ. ಪವರ್‌ಪ್ಲೇನಲ್ಲಿ ಮುಂಬೈ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದ ಕಿಶನ್, ಈ ಪಂದ್ಯದಲ್ಲಿ ಇನ್ನಿಂಗ್ಸ್‌ ತೆರೆಯಲಿಲ್ಲ. ಅಲ್ಲದೆ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟ್‌ ಬೀಸಲಿಲ್ಲ. ಇದುವರೆಗಿನ ಪಂದ್ಯಗಳಲ್ಲಿ ತಂಡಕ್ಕೆ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ, ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅವರು‌ ಬ್ಯಾಟ್‌ ಬೀಸಲು ಮೈದಾನಕ್ಕೆ ಇಳಿಯಲಿಲ್ಲ. ಅವರ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ನೆಹಾಲ್ ವಧೇರಾ ಅವರನ್ನು ಆಡುವ ಬಳಗಕ್ಕೆ ಸೇರಿಸಲಾಯ್ತು. ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆಗೆ ಬ್ಯಾಟ್‌ ಬೀಸಲು ಬಂದ ಅವರು, ಕೇವಲ 4 ರನ್ ಗಳಿಸಿ ಔಟಾದರು.

ಇಶಾನ್‌ ಕಿಶನ್‌ಗೆ ಏನಾಯ್ತು?

ಗುಜರಾತ್ ಇನ್ನಿಂಗ್ಸ್‌ ವೇಳೆ ಕ್ರಿಸ್ ಜೋರ್ಡಾನ್ 16ನೇ ಓವರ್ ಬೌಲಿಂಗ್‌ ಮಾಡಿದ ನಂತರ ಪಕ್ಕದಲ್ಲಿ ಬರುತ್ತಿದ್ದ ಇಶಾನ್‌ಗೆ ಡಿಕ್ಕಿಯಾಗಿದ್ದಾರೆ. ಈ ವೇಳೆ ಜೋರ್ಡಾನ್ ಅವರ ಮೊಣಕೈ ಇಶಾನ್ ಅವರ ಎಡಗಣ್ಣಿಗೆ ಬಡಿದಿದೆ. ಇದರಿಂದ ಇಶಾನ್‌ ನೋವನುಭವಿಸಿದರು. ಈ ವೇಳೆ ಫಿಸಿಯೋ ಬಂದು ಇಶಾನ್‌ ಅವರ ಕಣ್ಣನ್ನು ಪರಿಶೀಲಿಸಿದ ಬಳಿಕ, ಮೈದಾನದಿಂದ ಅವರನ್ನು ಕರೆದೊಯ್ದರು. ಈ ಗಾಯದಿಂದಾಗಿ ರೋಹಿತ್ ಶರ್ಮಾ ಅವರೊಂದಿಗೆ ಇಶಾನ್‌ ಇನ್ನಿಂಗ್ಸ್ ತೆರೆಯಲು ಬಂದಿಲ್ಲ. ಹೀಗಾಗಿ ಇಶಾನ್‌ ಬದಲಿಗೆ ವಿಷ್ಣು ಆಡುವ ಬಳಗ ಸೇರಿಕೊಂಡರು. ಅಗ್ರ ಕ್ರಮಾಂಕ ಮಾತ್ರವಲ್ಲದೆ ಯಾವುದೇ ಕ್ರಮಾಂಕದಲ್ಲಿ ಇಶಾನ್‌ ಬ್ಯಾಟಿಂಗ್‌ ಮಾಡಲಿಲ್ಲ. ಇದು ತಂಡಕ್ಕೆ ದೊಡ್ಡ ನಷ್ಟವಾಯ್ತು.

“ನಾವು ಅದನ್ನು ನಿರೀಕ್ಷಿಸಿರಲಿಲ್ಲ. ಅವರಿಗೆ ಸಣ್ಣ ಗಾಯಗಳಾಗಿವೆ. ಅದು ಹೇಗಾಯಿತು ಎಂದು ನನಗೆ ತಿಳಿದಿಲ್ಲ” ಎಂದು ಗುಜರಾತ್‌ ಟೈಟಾನ್ಸ್‌ ವಿರುದ್ಧದ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.