ಕನ್ನಡ ಸುದ್ದಿ  /  Sports  /  Cricket News Virender Sehwag Provide Free Education To Children Of Odisha Train Accident Victims Sehwag Twitter Jra

Virender Sehwag: ಒಡಿಶಾ ರೈಲು ಅಪಘಾತದಲ್ಲಿ ಮಡಿದವರ ಮಕ್ಕಳಿಗೆ ಉಚಿತ ಶಿಕ್ಷಣ; ಸೆಹ್ವಾಗ್ ಉದಾರ ನಡೆಗೆ ನೆಟ್ಟಿಗರ ಸಲಾಂ

Odisha train accident: ಒಡಿಶಾ ರೈಲು ದುರಂತದಕ್ಕೆ ಸಂಬಂದಿಸಿದಂತೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಉದಾರ ನಿರ್ಧಾರ ನೆಟ್ಟಿಗರ ಗಮನ ಸೆಳೆದಿದೆ.

ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್ (File)

ಶುಕ್ರವಾರ ಸಂಭವಿಸಿದ ಒಡಿಶಾ ರೈಲು ದುರಂತಕ್ಕೆ (Odisha train accident) ಇಡೀ ವಿಶ್ವವೇ ಮರುಗಿದೆ. ಅಪಘಾತದಿಂದಾಗಿ ಸಮಾರು 275 ಜನರು ಸಾವನ್ನಪ್ಪಿದ್ದರೆ, 1175ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ (Shalimar-Chennai Coromandel Express), ಬೆಂಗಳೂರು-ಹೌರಾ ಸೂಪರ್ ಫಾಸ್ಟ್ (Bengaluru-Howrah super fast) ಮತ್ತು ಗೂಡ್ಸ್ ರೈಲುಗಳ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಿಂದಾಗಿ ದುರಂತ ಅಂತ್ಯ ಕಂಡವರಿಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಲವರು ಸಂತ್ರಸ್ತ ಕುಟುಂಬದ ನೆರವಿಗೆ ನಿಂತಿದ್ದಾರೆ. ಅದೇ ರೀತಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಕೂಡಾ, ರೈಲು ದುರಂತದಿಂದ ಸಾವನ್ನಪ್ಪಿದವರ ಕುಟುಂಬಸ್ಥರ ನೆರವಿಗೆ ಬಂದಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸೆಹ್ವಾಗ್‌ ಹೇಳಿಕೊಂಡಿದ್ದಾರೆ. ಅಪಘಾತದ ಸ್ಥಳದ ಫೋಟೋದೊಂದಿಗೆ ಟ್ವೀಟ್‌ ಮಾಡಿರುವ ವೀರು, “ಈ ಚಿತ್ರವು ನಮ್ಮನ್ನು ದೀರ್ಘಕಾಲ ಕಾಡುತ್ತದೆ. ಇಂತಹ ದುಃಖದ ಸಮಯದಲ್ಲಿ, ಈ ದುರಂತ ಅಪಘಾತದಲ್ಲಿ ಜೀವ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಬಲ್ಲೆ. ಅಂತಹ ಮಕ್ಕಳಿಗೆ ನಾನು ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತೇನೆ" ಎಂದು ಭರವಸೆ ನೀಡಿದ್ದಾರೆ. ಆ ಮೂಲಕ ಉದಾರತೆ ಮೆರೆದಿದ್ದಾರೆ.

ಸಂತ್ರಸ್ತರಿಗೆ ನೆರವಾಗುವ ಸೆಹ್ವಾಗ್‌ ಉದಾರತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿಯೂ ಸೆಹ್ವಾಗ್ ಅವರ ನಿಲುವಿಗೆ ಜನರು ವಂದಿಸಿದ್ದಾರೆ.

ಇದೇ ವೇಳೆ ಮತ್ತೊಂದು ಟ್ವೀಟ್‌ ಮಾಡಿರುವ ಸೆಹ್ವಾಗ್, ಅಪಘಾತದ ನಂತರ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಪಡಿಸಿದ್ದಾರೆ. "ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ಧೈರ್ಯಶಾಲಿ ಪುರುಷರು, ಮಹಿಳೆಯರು ಮತ್ತು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವ ವೈದ್ಯಕೀಯ ತಂಡ ಮತ್ತು ಸ್ವಯಂಸೇವಕರಿಗೆ ವಂದನೆಗಳು . ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅವರು ಬರೆದಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ರೈಲು ಅಪಘಾತಕ್ಕೆ ಮಾನವ ದೋಷವೇ ಕಾರಣ ಎಂದು ತಿಳಿದುಬಂದಿದೆ. ಭಾನುವಾರ (ಜೂನ್ 4) ಬಾಲಸೋರ್ ರೈಲು ದುರಂತದ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲನೆ ನಡೆಸಿದ್ದು, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿ ಬದಲಾವಣೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಸದ್ಯ ಒಡಿಶಾದ ಬಾಲಸೋರ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ರೈಲು ಅಪಘಾತವಾದ 50 ಗಂಟೆಗಳ ಬಳಿಕ ರೈಲು ಹಳಿಗಳ ಮೇಲಿನ ಅವಶೇಷಗಳ ತೆರವು ಕಾರ್ಯಾಚರಣೆ ಮುಕ್ತಾಯವಾಗಿದ್ದು, ಹಳಿಗಳ ಪರಿಶೀಲನೆ ಕೂಡ ನಡೆದಿದೆ. ಹೀಗಾಗಿ ಇಂದಿನಿಂದ (ಜೂನ್ 5, ಸೋಮವಾರ) ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭ ಆಗುತ್ತಿದೆ. ಬಾಲಸೋರ್ ರೈಲು ದುರಂತದಿಂದಾಗಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಹೊರಡಬೇಕಿದ್ದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.