Mysore jambu savari 2022: ನಾಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ, ಅಭಿಮನ್ಯು ಮೇಲೆ ಅಂಬಾರಿ, ಕಾರ್ಯಕ್ರಮಗಳ ವಿವರ
Oct 04, 2022 08:57 PM IST
Mysore jambu savari 2022: ನಾಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ
- ನಾಳೆ ಅಪರಾಹ್ನ 2.36ರಿಂದ 2.50 ಗಂಟೆಯೊಳಗೆ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲು ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿಯ ಶುಭ ಮಹೂರ್ತದಲ್ಲಿ ಮೈಸೂರಿನಲ್ಲಿ ದಸರಾ ಜಂಬೂ ಸವಾರಿ ನಡೆಯಲಿದೆ.
ನಾಳೆ ಅಪರಾಹ್ನ 2.36ರಿಂದ 2.50 ಗಂಟೆಯೊಳಗೆ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಗಜಪಡೆಯ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ.
ಸಂಜೆ 5.7ರಿಂದ 5.18ರ ನಡುವಿನ ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಸಿಎಂ ಬೊಮ್ಮಾಯಿ, ಕರ್ನಾಟಕ ರಾಜ್ಯ ಹೈಕೋರ್ಟ್ನ ಮುಖ್ಯನ್ಯಾಯಮೂತ್ತಿ ಸೇರಿದಂತೆ ಎಂಟು ಮಂದಿ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
2019ರಲ್ಲಿ ಅಂಬಾರಿ ಹೊರುವ ಆನೆಯಾಗಿ ಅರ್ಜುನ ನಿವೃತ್ತಿ ಹೊಂದಿದ್ದನು. ಬಳಿಕ ಅಭಿಮನ್ಯುವಿಗೆ ಅಂಬಾರಿ ಹೊರುವ ಅವಕಾಶ ದೊರಕಿತ್ತು. ಕೊರೊನಾ ಕಾರಣದಿಂದ ಅರಮನೆಯ ಆವರಣದಲ್ಲಿ ಮಾತ್ರ ಅಂಬಾರಿ ಹೊರಲಾಗಿತ್ತು. ಆದರೆ, ಈ ವರ್ಷ ಬನ್ನಿಮಂಟಪದವರೆಗೆ ಅಭಿಮನ್ಯು ಅಂಬಾರಿ ಹೊರಲಿದ್ದಾನೆ.
750 ಕೆ.ಜಿ. ತೂಕದ ಅಂಬಾರಿ, ಗಾದಿ ಇತ್ಯಾದಿಗಳು ಸೇರಿ 200 ಕೆ.ಜಿ. ಒಟ್ಟು 950 ಕೆ.ಜಿ. ತೂಕವನ್ನು ಅಭಿಮನ್ಯು ಹೊರಲಿದ್ದಾನೆ. ಅಭಿಮನ್ಯವಿನ ಜತೆಗೆ ಹದಿಮೂರು ಆನೆಗಳು, ಅಶ್ವಪಡೆಗಳು, 43 ಸ್ತಬ್ಧಚಿತ್ರಗಳು, ಜಾನಪದ ತಂಡಗಳು ಇರಲಿವೆ.
ಅರಮನೆ ಆವರಣದಲ್ಲಿ 20 ಸಾವಿರ ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್ ಇರುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತದೆ.
ಜಂಬೂ ಸವಾರಿ ಬಗ್ಗೆ
ಜಂಬೂ ಸವಾರಿ (ಆನೆ ಮೆರವಣಿಗೆ): ದಸರಾದ ಕೊನೆಯ ದಿನದಂದು ನಡೆವ ಜಂಬೂ ಸವಾರಿಯ ಸಂದರ್ಭದಲ್ಲಿ ವಿಶೇಷ ತರಬೇತಿ ಪಡೆದ ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು (750 ಕಿ.ಗ್ರಾಂ ಚಿನ್ನದಿಂದ ಮಾಡಲ್ಪಟ್ಟಿದೆ) ಭವ್ಯ ಮೆರವಣಿಗೆಯಲ್ಲಿ ಸಾಗಿಸುತ್ತವೆ. ಇದು ಮೈಸೂರು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದ ಬಳಿ ಮುಕ್ತಾಯಗೊಳ್ಳುತ್ತದೆ. ಮೆರವಣಿಗೆಯಲ್ಲಿ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳೂ ಇರಲಿವೆ.
ಕೋವಿಡ್ ನಿಂದ ಎರಡು ವರ್ಷ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತವಾಗಿದ್ದ ಮೈಸೂರು ದಸರಾ ಈ ಬಾರಿ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳಗಿನಿಂದಲೇ ಆಯುಧ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.
ಸಂಭ್ರಮಬೆಳಗ್ಗೆಯಿಂದಲೇ ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನ ಆಯುಧ ಪೂಜೆ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆ 6 ರಿಂದ ಚಂಡಿಕಾ ಹೋಮ ನಡೆದು 9 ಗಂಟೆಗೆ ಹೋಮ ಪೂರ್ಣವತಿ ಆಯಿತು. 10.30 ರ ಸುಮಾರಿಗೆ ಮತ್ತೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಆನೆ ಬಾಗಿಲಿಗೆ ತ ರಲಾಗಿತ್ತು. ಆ ನಂತರ ಆನೆ ಬಾಗಿಲಿನ ಮೂಲಕ ಕಲ್ಯಾಣ ಮಂಟಪದ ಒಳಗೆ ತೆರಳಿ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಕುರಿತು ಸಂಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ.