praveen nettaru murder case: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮಿತ್ತೂರ್ ಸಮುದಾಯ ಹಾಲ್ ಸೀಜ್ ಮಾಡಿದ ಎನ್ಐಎ
Feb 24, 2023 07:12 AM IST
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಿತ್ತೂರ್ ಫ್ರೀಡಂ ಕಮ್ಯೂನಿಟಿ ಹಾಲ್
ಎನ್ಐಎ ಪ್ರಕಾರ, ಇಡುಕ್ಕಿ ಗ್ರಾಮದ ಮಿತ್ತೂರ್ ಫ್ರೀಡಂ ಕಮ್ಯುನಿಟಿ ಹಾಲ್ ಅನ್ನು ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಬಳಸಲಾಗಿದೆ.
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ಐಎ ತಂಡ ಮತ್ತೊಂದು ಕ್ರಮ ಕೈಗೊಂಡಿದ್ದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಇಡುಕ್ಕಿ ಗ್ರಾಮದಲ್ಲಿ ಇರುವ ಮಿತ್ತೂರ್ ಸಮುದಾಯ ಹಾಲ್/ಸ್ವಾತಂತ್ರ್ಯ ಸಮುದಾಯ ಸಭಾಂಗಣವನ್ನು ರಾಷ್ಟ್ರೀಯ ತನಿಖಾ ದಳ - ಎನ್ಐಎ ಸೀಜ್ ಮಾಡಿದೆ ಎಂದು ವರದಿಯಾಗಿದೆ.
ಈ ಸಮುದಾಯ ಹಾಲ್ ನಲ್ಲಿ ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಬಳಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದ ನಂತರ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಎನ್ಐಎ ಹೇಳುವ ಪ್ರಕಾರ, ಇಡುಕ್ಕಿ ಗ್ರಾಮದ ಮಿತ್ತೂರ್ ಫ್ರೀಡಂ ಕಮ್ಯುನಿಟಿ ಹಾಲ್ ಅನ್ನು ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಬಳಸಲಾಗಿದೆ.
ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಈ ಹಾಲ್ ಅನ್ನು ಬಳಸಲಾಗುತ್ತಿತ್ತು ಎಂದು ತನಿಖೆಯ ಸಮಯದಲ್ಲಿ ಮಾಹಿತಿ ಬಹಿರಂಗವಾದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಇಡುಕ್ಕಿ ಗ್ರಾಮದಲ್ಲಿ ಇರುವ ಮಿತ್ತೂರ್ ಸಮುದಾಯ ಹಾಲ್/ಸ್ವಾತಂತ್ರ್ಯ ಸಮುದಾಯ ಸಭಾಂಗಣವನ್ನು ನಿಯಮಗಳ ಪ್ರಕಾರ ಸೀಜ್ ಮಾಡಲಾಗಿದೆ ಎಂದು ಏಜೆನ್ಸಿ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಕುಲದೀಪ್ ಜೈನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಥೆ ವಿಕ್ರಮ್ ಅವರಿಗೆ ಹಾಲ್ ಅನ್ನು ವಶಕ್ಕೆ ಪಡೆಯುವ ಆದೇಶ ನೀಡಲಾಗಿದೆ. ಸಮುದಾಯ ಸಭಾಂಗಣದ ಮಾಲೀಕರಿಗೆ ಸಭಾಂಗಣವನ್ನು ಯಾರಿಗೂ ಬಾಡಿಗೆಗೆ ನೀಡದಂತೆ ನಿರ್ದೇಶಿಸಲಾಗಿದೆ ಎಂದು ಏಜೆನ್ಸಿ ಹೇಳಿದೆ. ಈ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡುವ, ವರ್ಗಾವಣೆ ಮಾಡುವ, ಲೀಸ್ ಗೆ ಕೊಡುವ ಮತ್ತು ಇನ್ಯಾವುದೇ ರೀತಿಯಲ್ಲಿ ಇಲ್ಲಿ ಕೆಲಸಗಳುೆ ಮಾಡುವುದಕ್ಕೆ ನಿರ್ಬಂಧಿಸಲಾಗಿದೆ.
ಕಳೆದ ವರ್ಷ ಜುಲೈನಲ್ಲಿ ದಕ್ಷಿಣ ಕನ್ನಡದಲ್ಲಿ ಬೆಳ್ಳಾರೆಯಲ್ಲಿರುವ ತನ್ನ ಬ್ರಾಯ್ಲರ್ ಅಂಗಡಿಯ ಮುಂದೆ ಬೈಕ್ ನಿಲ್ಲಿಸುತ್ತಿದ್ದಾಗ ದಾಳಿ ಮಾಡಿದ್ದ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದ್ದರು. ಪ್ರಕರಣದ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ 14 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಇನ್ನು ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧಕಾರ್ಯ ಮುಂದುವರೆಸಲಾಗಿದೆ. ಪ್ರಕರಣದ ತನಿಖೆಗಾಗಿ ರಹಸ್ಯ ತಂಡವನ್ನು ರಚಿಸಲಾಗಿತ್ತು.
ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಮತ್ತು 2047 ರ ವೇಳೆಗೆ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಕಾರ್ಯಸೂಚಿಯನ್ನು ಮತ್ತಷ್ಟು ಹೆಚ್ಚಿಸಲು ಪಿಎಫ್ಐ ತನ್ನ ಕಾರ್ಯಸೂಚಿಯ ಭಾಗವಾಗಿತ್ತು ಎಂದು ಎನ್ಐಎ ತನಿಖೆಯಲ್ಲಿ ಬಹಿರಂಗಪಡಿಸಿದೆ.
ಐಪಿಸಿ ಸೆಕ್ಷನ್ 120 ಬಿ, 153 ಎ, 302 ಮತ್ತು 34 ಹಾಗೂ ಯುಎ (ಪಿ) ಕಾಯ್ದೆ, 1967ರ ಸೆಕ್ಷನ್ 16, 18 ಮತ್ತು 20 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 25 (1) (ಎ) ಅಡಿಯಲ್ಲಿ 20 ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ 240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಡಿಪಿಐ ನಿಂದ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಟಿಕೆಟ್ ನೀಡುವುದಾಗಿ ಘೋಷಿಸಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿದೆ. ಶಾಫಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಶಾಫಿ ಬೆಳ್ಳಾರೆ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿತ್ತು, ಸದ್ಯ ಆತ ಜೈಲಿನಲ್ಲಿದ್ದಾನೆ.
ಪ್ರಕರಣದ ಆರೋಪಿಗಳಲ್ಲಿ ಮುಸ್ತಫಾ ಪೈಚಾರ್, ಮಸೂದ್ ಕೆಎ, ಕೊಡಾಜೆ ಮೊಹಮ್ಮದ್ ಶೆರಿಫ್, ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್ ಶ್ರೀ ಮತ್ತು ಥುಫೈಲ್ ಎಂಹೆಚ್ ಪ್ರಸ್ತುತ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ ಎಂದು ಚಾರ್ಜ್ಶೀಟ್ ತಿಳಿಸಲಾಗಿದೆ.