ಕನ್ನಡ ಸುದ್ದಿ  /  Entertainment  /  Sharan New Movie Announced On His 51st Birthday

Sharan 51st Birthday: ಶರಣ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ...ವಿಶೇಷ ದಿನದಂದು ಹೊಸ ಸಿನಿಮಾ ಘೋಷಿಸಿದ ನಟ

ಶರಣ್‌ ನಟಿಸುತ್ತಿರುವ ಈ ಸಿನಿಮಾ ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು ಅವರು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಗಮನ ಸೆಳೆಯಲಿದ್ದಾರಂತೆ. ಫೆಬ್ರವರಿ 20 ರಿಂದ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

 ಇಂದು ಶರಣ್‌ 51ನೇ ಹುಟ್ಟುಹಬ್ಬ
ಇಂದು ಶರಣ್‌ 51ನೇ ಹುಟ್ಟುಹಬ್ಬ (PC: Sharan Hruday)

ಸ್ಯಾಂಡಲ್‌ವುಡ್‌ ನಟ ಶರಣ್‌ ಇಂದು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶರಣ್‌ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಈ ವಿಶೇಷ ದಿನದಂದು ಶರಣ್‌ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಶರಣ್‌ ಇದುವರೆಗೂ ಯಾವ ಚಿತ್ರಗಳಲ್ಲಿ ಕೂಡಾ ಮಾಡದಂತ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

ಅಂದ ಹಾಗೆ 'ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ' ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್, ಶರಣ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶರಣ್ ಎಲೆಕ್ಟ್ರಿಷಿಯನ್ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಶರಣ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ಅಡಿ ಬಿ. ಬಸವರಾಜ್ ಹಾಗೂ ಶ್ರೀಧರ್ ನಿರ್ಮಾಣ ಮಾಡುತ್ತಿದ್ದಾರೆ. ಅರವಿಂದ್‌ ಕುಪ್ಲಿಕರ್‌, ಈ ಚಿತ್ರಕ್ಕೆ ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ ನಟನೆಯ 'ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ', ಅರವಿಂದ್‌ ನಿರ್ದೇಶನದ ಮೊದಲ ಸಿನಿಮಾ.

ಶರಣ್‌ ನಟಿಸುತ್ತಿರುವ ಈ ಸಿನಿಮಾ ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು ಅವರು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಗಮನ ಸೆಳೆಯಲಿದ್ದಾರಂತೆ. ಫೆಬ್ರವರಿ 20 ರಿಂದ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಟೈಟಲ್ ಹಾಗೂ ಇನ್ನಿತರ ಮಾಹಿತಿ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ.

ಶರಣ್‌ ಅವರ ತಂದೆ ತಾಯಿ ರಂಗಭೂಮಿ ಕಲಾವಿದರು. ಶ್ರುತಿ ಕೂಡಾ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 1996ರಲ್ಲಿ ಸಿದ್ದಲಿಂಗಯ್ಯ ಅವರು ನಿರ್ದೇಶಿಸಿದ್ದ 'ಪ್ರೇಮ ಪ್ರೇಮ ಪ್ರೇಮ' ಚಿತ್ರದ ಪುಟ್ಟ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ಶರಣ್‌, ನಂತರ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಈಗ ನಾಯಕನಾಗಿ ಮಿಂಚುತ್ತಿದ್ದಾರೆ. 'ರಾಂಬೋ' ಚಿತ್ರದ ಮೂಲಕ ಹೀರೋ ಆಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ ಶರಣ್‌, ವಿಕ್ಟರಿ, ಜಯಲಲಿತಾ, ಬುಲೆಟ್‌ ಬಸ್ಯಾ, ಜೈ ಮಾರುತಿ 800, ನಟರಾಜ ಸರ್ವಿಸ್‌, ರಾಜ್‌ ವಿಷ್ಣು, ಸತ್ಯ ಹರಿಶ್ಚಂದ್ರ, ವಿಕ್ಟರಿ 2, ಅಧ್ಯಕ್ಷ ಇನ್‌ ಅಮೆರಿಕ, ಅವತಾರ ಪುರುಷ, ಗುರು ಶಿಷ್ಯರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯಕ್ಕೆ ಶರಣ್‌ 'ಛೂ ಮಂತರ್‌' ಹಾಗೂ 'ಅವತಾರ ಪುರುಷ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಶರಣ್‌ ಪುತ್ರ ಹೃದಯ್‌ ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ತೆರೆ ಕಂಡ 'ಗುರು ಶಿಷ್ಯರು' ಚಿತ್ರದಲ್ಲಿ ಹೃದಯ್‌ ಖೋ ಖೋ ಆಟಗಾರನಾಗಿ ನಟಿಸಿದ್ದರು. ಶರಣ್‌ ಕಿರಿಯ ಸಹೋದರಿ ಉಷಾ ಅವರ ಪುತ್ರಿ ಕೀರ್ತಿ ಕೃಷ್ಣ ಕೂಡಾ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 'ಧರಣಿ' ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೀರ್ತಿ ಬಾಲನಟಿಯಾಗಿ ಕೂಡಾ ಅಭಿನಯಿಸಿದ್ದಾರೆ.

IPL_Entry_Point