PM Modi Dinner Party: ಪ್ರಧಾನಿ ಮೋದಿ ಔತಣಕೂಟದಲ್ಲಿ ಭಾಗವಹಿಸಿದ್ದ ಯಶ್, ರಿಷಬ್ ಶೆಟ್ಟಿ...ಫೋಟೋಗಳು ವೈರಲ್
ಭಾನುವಾರ ಸಂಜೆ ರಾಜಭವನದಲ್ಲಿ ಔತಣ ಕೂಟ ನಡೆದಿದ್ದು ಆ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಜಾವಗಲ್ ಶ್ರೀನಾಥ್, ಮಯಾಂಕ್ ಅಗರ್ವಾಲ್, ವೆಂಕಟೇಶ್ ಪ್ರಸಾದ್, ತರುಣ್ ಮೆಹ್ತಾ ಸೇರಿದಂತೆ ಕನ್ನಡ ಚಿತ್ರರಂಗ, ಕ್ರೀಡೆ, ಉದ್ಯಮ ಹಾಗೂ ಇನ್ನಿತರ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ.
ಯಶ್ ಹಾಗೂ ರಿಷಬ್ ಶೆಟ್ಟಿ ಈಗ ಎಲ್ಲಿ ಹೋದರೂ ಜನರು ಅವರನ್ನು ಗುರುತಿಸುತ್ತಾರೆ. ದೇಶದ ಯಾವ ರಾಜ್ಯಕ್ಕೆ ಹೋಗಲೀ ವಿದೇಶಕ್ಕೆ ಹೋಗಲೀ ಇಬ್ಬರೂ ಪ್ಯಾನ್ ಇಂಡಿಯಾ ಸ್ಟಾರ್ಗಳಿಗೆ ಅದ್ಧೂರಿ ವೆಲ್ಕಮ್ ದೊರೆಯುತ್ತಿದೆ. ಇದೀಗ ಯಶ್ ಹಾಗೂ ರಿಷಬ್ ಇಬ್ಬರೂ ಪ್ರಧಾನಿ ಮೋದಿ ಔತಣಕೂಟದಲ್ಲಿ ಪಾಲ್ಗೊಂಡಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಫೆಬ್ರವರಿ 12 ರಂದು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ಅಲ್ಲಿಂದ ರಾಜಭವನಕ್ಕೆ ತೆರಳಿದ್ದ ಮೋದಿ ಇಂದು (ಫೆಬ್ರವರಿ 13) ನಡೆಯಲಿರುವ ಏರೋ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಭಾನುವಾರ ಸಂಜೆ ರಾಜಭವನದಲ್ಲಿ ಔತಣ ಕೂಟ ನಡೆದಿದ್ದು ಆ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಜಾವಗಲ್ ಶ್ರೀನಾಥ್, ಮಯಾಂಕ್ ಅಗರ್ವಾಲ್, ವೆಂಕಟೇಶ್ ಪ್ರಸಾದ್, ತರುಣ್ ಮೆಹ್ತಾ ಸೇರಿದಂತೆ ಕನ್ನಡ ಚಿತ್ರರಂಗ, ಕ್ರೀಡೆ, ಉದ್ಯಮ ಹಾಗೂ ಇನ್ನಿತರ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಈ ಔತಣಕೂಟದಲ್ಲಿ ರಿಷಬ್ ಶೆಟ್ಟಿ ಹಾಗೂ ಯಶ್ ಇಬ್ಬರೂ ಪಾಲ್ಗೊಂಡಿದ್ದು ರಾಜಭವನದ ಸಿಬ್ಬಂದಿಗಳು ಇವರೊಂದಿಗೆ ತೆಗೆಸಿಕೊಂಡಿದ್ದಾರೆ ಎನ್ನಲಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮುಂಬೈ-ಹೈದರಾಬಾದ್ಗೆ ಯಶ್ ಪ್ರಯಾಣ
ಯಶ್ ಹೆಸರು ಸದ್ಯ ಸೌತ್ ಮಾತ್ರವಲ್ಲದೆ ಬಾಲಿವುಡ್ನಲ್ಲಿ ಕೂಡಾ ಹರಿದಾಡುತ್ತಿದೆ. ಕೆಲವು ನಿರ್ದೇಶಕ ಮತ್ತು ನಿರ್ಮಾಪಕರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಹೀಗಿರುವಾಗಲೇ ಇನ್ನೊಂದು ಬದಿಯಲ್ಲಿ ಯಶ್ 'ಕೆಜಿಎಫ್ 3' ಚಿತ್ರದಲ್ಲಿ ಕೂಡಾ ಮುಂದುವರಿಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಏಕೆಂದರೆ, ಇದುವರೆಗೂ ಯಶ್ ತಮ್ಮ ಕೂದಲಿಗೆ ಕತ್ತರಿ ಹಾಕಿಲ್ಲ. ಎಲ್ಲಿ ಹೋದರೂ ಕೆಜಿಎಫ್ ಲುಕ್ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಚಾಪ್ಟರ್ 3 ಚಿತ್ರದ ಕೆಲಸ ಶುರು ಆಗಿರಬಹುದು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಯಶ್ ಮುಂಬೈ, ಹೈದರಾಬಾದ್ ಓಡಾಡುತ್ತಿದ್ದಾರೆ. 4-5 ದಿನಗಳ ಹಿಂದಷ್ಟೇ ಮುಂಬೈ ಕಲೀನಾ ಏರ್ಪೋರ್ಟಿನಲ್ಲಿ ಕಾಣಿಸಿಕೊಂಡಿದ್ದ ಯಶ್, 2 ದಿನಗಳ ಹಿಂದೆ ಹೈದರಾಬಾದ್ನಲ್ಲಿ ನಡೆದ ಫಾರ್ಮುಲಾ ಇ ರೇಸಿಂಗ್ನಲ್ಲಿ ಭಾಗವಹಿಸಿದ್ದರು. ಈ ವೇಳೆ ಯಶ್ ಹೊಸ ಹೇರ್ ಸ್ಟೈಲ್ ನೋಡುಗರ ಗಮನ ಸೆಳೆದಿತ್ತು. ಯಶ್ ಜೊತೆಗೆ ಟಾಲಿವುಡ್ನ ಅಕ್ಕಿನೇನಿ ನಾಗಾರ್ಜುನ, ಅಖಿಲಾ ಅಕ್ಕಿನೇನಿ, ನಾಗಚೈತನ್ಯ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಊರ್ವಶಿ ರೌಟೇಲಾ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಇತ್ತೀಚೆಗೆ 'ಕಾಂತಾರ' ಪ್ರೀಕ್ವೆಲ್ ಘೋಷಿಸಿದ್ದರು. ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿಷಬ್, ಈಗ ನೀವು ನೋಡಿರುವುದೇ 'ಕಾಂತಾರ' ಸೀಕ್ವೆಲ್, ಇನ್ನೇನಿದ್ರೂ ಮುಂದೆ ಬರೋದು ಪ್ರೀಕ್ವೆಲ್ ಎಂದಿದ್ದರು. ಜೂನ್ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗುವ ಸುಳಿವು ಕೂಡಾ ನೀಡಿದ್ದರು. ಈ ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ನಟಿಸಬಹುದು ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡುತ್ತಿದೆ. ಈ ನಡುವೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ, ರಿಷಬ್ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದಾರೆ. ಚಿತ್ರತಂಡವಾಗಲಿ, ರಿಷಬ್ ಶೆಟ್ಟಿಯಾಗಲಿ ಈ ವಿಚಾರವನ್ನು ಅಧಿಕೃತಪಡಿಸಿಲ್ಲ. ಬದಲಿಗೆ ಊರ್ವಶಿ ಅವರೇ ರಿಷಬ್ ಶೆಟ್ಟಿಯೊಂದಿಗೆ ನಿಂತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. 'ಕಾಂತಾರ 2' ಎಂಬ ಹ್ಯಾಷ್ಟ್ಯಾಗ್ನೊಂದಿಗೆ ರಿಷಬ್ ಹೆಸರು ಮತ್ತು ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ. 'ಕಾಂತಾರ 2' ಲೋಡಿಂಗ್ ಎಂದೂ ಬರೆದುಕೊಂಡಿದ್ದಾರೆ. ಬಾಲಿವುಡ್ನ ಕೆಲವು ಸಿನಿಮಾ ವಿಮರ್ಶಕರು ಕೂಡಾ ಊರ್ವಶಿ, ಕಾಂತಾರ ಪ್ರೀಕ್ವೆಲ್ನಲ್ಲಿ ನಟಿಸಲಿದ್ದಾರೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.