Karnataka Election: ಮತದಾನದ ದಿನ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ; ದುಪ್ಪಟ್ಟು ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್ ಮಾಲೀಕರು
Bengaluru news: ಮೇ 10 ರಂದು ತಮ್ಮ ಮತ ಚಲಾಯಿಸಲು ಅನೇಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು, ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) ಹಿನ್ನೆಲೆ ಮತದಾನ ದಿನದಂದು ( ಮೇ 10, ಬುಧವಾರ) ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮೆಟ್ರೋ ರೈಲು ಓಡಾಟದ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ನಮ್ಮ ಮೆಟ್ರೋ (Namma Metro) ತಿಳಿಸಿದೆ.
ಮೇ 10 ರಂದು ತಡರಾತ್ರಿಯವರೆಗೆ ಸೇವಾವಧಿ ವಿಸ್ತರಣೆ ಮಾಡಲಾಗಿದೆ. ಅಂದು ರಾತ್ರಿ 11 ಗಂಟೆಯ ಬದಲಾಗಿ ಮಧ್ಯರಾತ್ರಿ 12.05 ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ಗಳಿಂದ ಕೊನೆಯ ರೈಲುಗಳು ಹೊರಡಲಿವೆ ಎಂದು ಬಿಎಂಆರ್ಸಿಎಲ್ (BMRCL) ಮಾಹಿತಿ ನೀಡಿದೆ.
ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ ಮಜೆಸ್ಟಿಕ್ನಿಂದ ನಾಲ್ಕು ದಿಕ್ಕುಗಳಲ್ಲಿಯೂ ಕೊನೆಯ ರೂಲು ರಾತ್ರಿ 12.35ಕ್ಕೆ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ ರಾತ್ರಿ 11.30ಕ್ಕೆ ಮೆಟ್ರೋ ರೈಲು ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಹಾಗೂ ರೇಷ್ಮೆ ಸಂಸ್ಥೆ ಕಡೆಗೆ ಹೊರಡುತ್ತವೆ.
ಚುನಾವಣೆ ದಿನ ದೂರದ ಊರುಗಳಿಂದ ಮತದಾನ ಮುಗಿಸಿ ಸಾಕಷ್ಟು ಮಂದಿ ಆಗಮಿಸುತ್ತಾರೆ. ಈ ಹಿನ್ನೆಲೆ 1 ಗಂಟೆ 5 ನಿಮಿಷಗಳ ಕಾಲ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ. ಗುರುವಾರ (ಮೇ 11) ಎಂದಿನಂತೆ ಬೆಳಿಗ್ಗೆ 5 ಗಂಟೆಗೆ ಕೊನೆಯ ನಿಲ್ದಾಣಗಳಿಂದ ರೈಲು ಸೇವೆ ಆರಂಭವಾಗಲಿದೆ ಮತ್ತು ಮೆಜೆಸ್ಟಿಕ್ನಿಂದ ಮೊದಲ ರೈಲು 5.30ಕ್ಕೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್ ಮಾಲೀಕರು:
ಮೇ 10 ರಂದು ತಮ್ಮ ಮತ ಚಲಾಯಿಸಲು ಅನೇಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು, ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಬಸ್ ದರ 800 ರೂ. ಇತ್ತು, ಈಗ 1800ಕ್ಕೆ ಏರಿಕೆಯಾಗಿದೆ. ಅದೇ ರೀತಿ 950ರೂ. ಇದ್ದ ಮಂಗಳೂರು ಟಿಕೆಟ್ ದರ ಇದೀಗ 2200ರೂ. ಆಗಿದೆ. ಶಿವಮೊಗ್ಗಕ್ಕೆ ತೆರಳುವ ಬಸ್ ಟಿಕೆಟ್ ದರ 900ರಿಂದ 2160 ರೂ., ಉಡುಪಿ 900 ರಿಂದ 2200 ರೂ., ಬೆಳಗಾವಿ 1100 ರಿಂದ 2800 ರೂ., ಹಾಸನ 650 ರಿಂದ 2200 ರೂ., ಗೋವಾ 1100 ರಿಂದ 3500 ರೂ., ಚಿಕ್ಕಮಗಳೂರು 700 ರಿಂದ 1500 ರೂ., ಕಲಬುರಗಿ 1400 ರಿಂದ 2500 ರೂ , ಬಾಗಲಕೋಟೆ 1400 ರಿಂದ 2300 ರೂ., ಯಾದಗಿರಿ 1400 ರಿಂದ 1999 ರೂ., ಅಥಣಿ 1400 ರಿಂದ 2200 ರೂ., ಕೊಡಗು 700 ರಿಂದ 1400 ರೂ., ಬಳ್ಳಾರಿ 900 ರಿಂದ 2500 ರೂ.ಗೆ ಏರಿಸಲಾಗಿದೆ.
ಚುನಾವಣೆಗಾಗಿ 5,000ಕ್ಕೂ ಹೆಚ್ಚು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಯೋಜನೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಸಾವಿರಾರು ಬಸ್ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದ್ದು, ಇಂದು ಮತ್ತು ನಾಳೆ (ಮೇ 9 ಮತ್ತು ಮೇ 10) ರಂದು ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಸ್ ಕೊರತೆ ಕಾಡುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಕೆಎಸ್ಆರ್ಟಿಸಿಯು ತನ್ನ ಬಸ್ಗಳಲ್ಲಿ ಶೇಕಡಾ 45 ಬಸ್ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನೀಡಿದೆ. ಇದೇ ರೀತಿ ಬಿಎಂಟಿಸಿಯು ತನ್ನ ಬಸ್ಗಳಲ್ಲಿ ಶೇಕಡಾ 27 ಬಸ್ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಹೀಗಾಗಿ 8,100 ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸುಮಾರು 3,700 ಬಸ್ಗಳು ಚುನಾವಣಾ ಕರ್ತವ್ಯದಲ್ಲಿವೆ. ಇದೇ ರೀತಿ, 1868 ಬಿಎಂಟಿಸಿ ಬಸ್ಗಳೂ ಚುನಾವಣಾ ಡ್ಯೂಟಿಗೆ ನಿಯೋಜನೆಯಾಗಿದೆ. ಆದರೆ, ವೋಲ್ವೊ ಮತ್ತು ಇತರೆ ಪ್ರಿಮಿಯಂ ಬಸ್ಗಳನ್ನು ಚುನಾವಣಾ ಕರ್ತವ್ಯಕ್ಕೆ ನೀಡಲಾಗಿಲ್ಲ.
ಹೆಚ್ಚುವರಿ ರೈಲು
ಮತದಾನಕ್ಕೆ ವಿವಿಧ ಊರುಗಳಿಗೆ ತೆರಳುವವರಿಗೆ ನೈರುತ್ಯ ರೈಲ್ವೆ ಹೆಚ್ಚುವರಿ ರೈಲುಗಳನ್ನು ಘೋಷಿಸಿದೆ. ಇಂದು ಮೂರು ವಿಶೇಷ ರೈಲುಗಳು ಇರಲಿವೆ. ಬೆಂಗಳೂರು ಮತ್ತು ಬೆಳಗಾವಿ ಮಧ್ಯೆ ಒಂದು ವಿಶೇಷ ರೈಲು ಇರಲಿದೆ. ಈ ರೈಲು ಹುಬ್ಬಳ್ಳಿ ಮಾರ್ಗವಾಗಿ ತೆರಳುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಕಲಬುರಗಿ ಮಾರ್ಗವಾಗಿ ಬೆಂಗಳೂರಿನಿಂದ ಬೀದರ್ಗೆ ಒಂದು ವಿಶೇಷ ರೈಲು ಇರಲಿದೆ. ಬೆಂಗಳೂರಿನ ಯಶವಂತಪುರದಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿದೆ.