Bengaluru Rains: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಆಲಿಕಲ್ಲು ಸಹಿತ ಭಾರಿ ಮಳೆ; ವಾಹನ ಸವಾರರು ಹೈರಾಣ
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಗಿದೆ.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವರುಣ ಅಬ್ಬರಿಸುತ್ತಿದ್ದು, ಗುಡುಗು, ಆಲಿಕಲ್ಲು ಸಹಿತ ಭಾರಿ ಮಳೆಗೆ (Bengaluru Rain) ಬೆಂಗಳೂರು ಮಂದಿ ಪರದಾಡುವಂತಾಗಿದೆ.
ನಗರದ ಪ್ರಮುಖ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಎಂ.ಜಿ ರಸ್ತೆ, ಟ್ರಿನಿಟಿ ಸರ್ಕಲ್, ಶಿವಾಜಿನಗರ, ಆರ್ಟಿ ನಗರ, ಹೆಬ್ಬಾಳ, ಸಿವಿ ರಾಮನ್ ನಗರ, ಚಿನ್ನಸ್ವಾಮೀ ಕ್ರೀಡಾಂಗಣ, ಮೆಜೆಸ್ಟಿಕ್, ಜಯನಗರ, ದೊಮ್ಮಲೂರು ಹಾಗೂ ವಿಧಾನಸಸೌಧ ಸುತ್ತ ಮುತ್ತಲಿನ ಪ್ರದೇಶದ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಬೆಳಗ್ಗೆ ಭಾರಿ ಬಿಸಿಲು ಇದ್ದರಂದ ಮಧ್ಯಾಹ್ನದ ಹೊತ್ತಿಗೆ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ನೋಡ ನೋಡುತ್ತಿದ್ದಂತೆ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಇಂದರಿಂದ ವಾಹನ ಸವಾರರು, ಫುಡ್ ಡೆಲಿವರಿ ಮಾಡುವಂತಹ ಬೈಕ್ ಸವಾರರು ನಡು ರಸ್ತೆಗಳಲ್ಲೇ ಸಿಲುಕಿ ಪರದಾಡುವಂತಾಗಿದೆ.
ಆಲಿಕಲ್ಲು ಸಹಿತ ಜೋರು ಮಳೆಯ ದೃಶ್ಯಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಲ್ಲೇಶ್ವರಂನ ಮಂತ್ರಿ ಮಾಲ್ ಸಮೀಪ ಭಾರಿ ಆಲಿಕಲ್ಲು ಬಿದ್ದಿದೆ.
ಕುಮಾರಕೃಪಾ ರಸ್ತೆಯಲ್ಲಿ ಕಾರು ಹಾಗೂ ಆಟೋ ಮೇಲೆ ಮರದ ಕೊಂಬೆಗಳು ಬಿದ್ದಿದ್ದು, ಅಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸರ್ ಎಂ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಬಳಿ ಬೃಹತ್ ಗಾತ್ರದ ಮರ ಧರೆಗುರಳಿದೆ.