ಕನ್ನಡ ಸುದ್ದಿ  /  Karnataka  /  Early Surveys Shows Karnataka May Witness Hung Assembly After 2023 Election

Karnataka Assembly Election: ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ?: ಸಮೀಕ್ಷೆಗಳು ಹೇಳುವುದೇನು?

ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, ಆರಂಭಿಕ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಸದ್ಯ ನಡೆದಿರುವ ಸಮೀಕ್ಷೆಗಳ ಪ್ರಕಾರ 2023ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 70, ಕಾಂಗ್ರೆಸ್‌ಗೆ 100 ಹಾಗೂ ಜೆಡಿಎಸ್‌ಗೆ 20 ಸೀಟುಗಳು ಲಭಿಸಲಿವೆ ಎನ್ನಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೇ ಈ ಸಂಖ್ಯೆಗಳಲ್ಲಿ ಬದಲಾವಣೆ ಆಗಬಹುದು ಸಮೀಕ್ಷೆಗಳು ಸ್ಪಷ್ಟಪಡಿಸಿವೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (PTI)

ಬೆಂಗಳೂರು: ಕರ್ನಾಟಕದ 2023ರ ವಿಧಾನಸಭೆ ಚುನಾವಣೆಯ ಅಖಾಡ ಸಿದ್ಧವಾಗಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿವೆ. ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂಬುದು ಬಿಜೆಪಿ ಆಸೆಉಯಾದರೆ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಮರಳಿ ಅಧಿಕಾರ ಪಡೆಯಬೇಕು ಎಂಬುದು ಕಾಂಗ್ರೆಸ್‌ ಬಯಕೆ. ಇವರಿಬ್ಬರ ಜಗಳದಲ್ಲಿ, ತನಗೆ ಅಧಿಕಾರ ಸಿಕ್ಕರೆ ಅದೃಷ್ಟ ಎಂಬುದು ಜೆಡಿಎಸ್‌ ಅನಿಸಿಕೆ.

ಆದರೆ ರಾಜ್ಯದ ಮತದಾರನ ಮನಸ್ಸಿನಲ್ಲೀರುವುದೇನು ಎಂಬುದನ್ನು ತಿಳಿಯಲು ಇನ್ನೂ ಬಹಳ ಸಮಯವಿದೆ. ಆದರೆ ಆರಂಭಿಕ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಹೌದು, ಕರ್ನಾಟಕ ವಿಧಾನಸಬೆ ಚುನಾವಣೆ ಬಗ್ಗೆ ಈಗಾಗಲೇ ಸಮೀಕ್ಷೆಗಳು ಆರಂಭವಾಗಿದ್ದು, ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ಕಸರತ್ತು ನಡೆಸಲಾಗುತ್ತಿದೆ.

ಕಳೆದ ಮೇ-ಜೂನ್‌ನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಬಿರುಸಿನ ಸ್ಪರ್ಧೆ ಏರ್ಪಡಲಿದ್ದು, ಜೆಡಿಎಸ್‌ ಕೆಲವು ನಿರ್ದಿಷ್ಟ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಲಿದೆ ಎಂದು ಹೇಳಲಾಗಿತ್ತು. ಅಲ್ಲದೇ ಪ್ರತಿಪಕ್ಷ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದೂ ಅಂದಾಜಿಸಲಾಗಿತ್ತು. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಸೀಟುಗಳ ಸಂಖ್ಯೆಯಲ್ಲಿ ಅಪಾರ ವ್ಯತ್ಯಾಸ ಇರುವುದಿಲ್ಲ ಎಂದೂ ಹೇಳಲಾಗಿತ್ತು.

ಇದೀಗ ಆಗಸ್ಟ್‌ ತಿಂಗಳಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ, ಬಹುತೇಕ ಇದೇ ಫಲಿತಾಂಶ ಬರುವ ಲಕ್ಷಣಗಳಿವೆ ಎಂದು ಹೇಳಲಾಗಿದೆ. ಅಂದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ರಾಜ್ಯದ ಮತದಾರರ ಮೇಲೆ ಅಷ್ಟೊಂದು ಪ್ರಭಾವ ಬೀರಿಲ್ಲ ಎಂಬುದು ಸಮೀಕ್ಷೆಗಳಿಂದ ತಿಳಿದು ಬರುತ್ತದೆ.

ಕಳೆದ ಆಗಸ್ಟ್‌ ತಿಂಗಳಲ್ಲಿ ರಾಜ್ಯಾದ್ಯಂತ ಸುರಿದ ಭಾರೀ ಮಳೆ ಮತ್ತು ಅದರಿಂದ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆ ಬಗ್ಗೆ ಜನರಲ್ಲಿ ಅಷ್ಟೊಂದು ಅಸಮಧಾನ ಕಂಡುಬರುತ್ತಿಲ್ಲ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಪ್ರತಿಪಕ್ಷ ಕಾಂಗ್ರೆಸ್‌ ಇದನ್ನೇ ಪ್ರಬಲ ಅಸ್ತ್ರ ಮಾಡಿಕೊಂಡಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ರಯತ್ನ ಆರಂಭಿಸಿದೆ.

ಆದರೆ ಜನರು ಮಳೆಯ ಹೊರತಾಗಿ ಬೇರೆ ಬೇರೆ ಅಂಶಗಳನ್ನೂ ಪರಿಗಣಿಸುತ್ತಿದ್ದಾರೆ ಎನ್ನಲಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಮತ್ತು ಅದರಿಂದ ಉದ್ಭವವಾದ ಸಮಸ್ಯೆಗಳ ಬಗ್ಗೆ ಜನರಲ್ಲಿ ತುಸು ಆಕ್ರೋಶ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ನಡೆದಿರುವ ಸಮೀಕ್ಷೆಗಳ ಪ್ರಕಾರ 2023ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 70, ಕಾಂಗ್ರೆಸ್‌ಗೆ 100 ಹಾಗೂ ಜೆಡಿಎಸ್‌ಗೆ 20 ಸೀಟುಗಳು ಲಭಿಸಲಿವೆ ಎನ್ನಲಾಗಿದೆ. ಅಂದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಅಂದರೆ ಸರ್ಕಾರ ರಚಿಸಲು ಬೇಕಾದ 113 ಮ್ಯಾಜಿಕ್‌ ನಂಬರ್‌ ದೊರೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದು ಸದ್ಯದ ಪರಿಸ್ಥಿತಿಯಾಗಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೇ ಈ ಸಂಖ್ಯೆಗಳಲ್ಲಿ ಭಾರೀ ಬದಲಾವಣೆ ಆಗಲೂಬಹುದು ಎಂದು ಸಮೀಕ್ಷೆಗಳು ಸ್ಪಷ್ಟಪಡಿಸಿವೆ.

ಬಿಜೆಪಿಯ ಹಿಂದುತ್ವ, ಕಾಂಗ್ರೆಸ್‌ನ ರಾಜ್ಯ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ ಮತ್ತು ಜೆಡಿಎಸ್‌ನ ಪ್ರಾದೇಶಿಕ ಕಾರ್ಯಸೂಚಿಗಳು ಚುನಾವಣಾ ವಿಷಯಗಳಾಗಲಿವೆ ಎಂದೂ ಸಮೀಕ್ಷೆ ಅಂದಾಜಿಸಿದೆ. ಮೂರೂ ರಾಜಕೀಯ ಪಕ್ಷಗಳಿಗೂ ತಮ್ಮದೇ ಆದ ಬೆಂಬಲಿಗರ ಪಡೆ ಇದ್ದು, ಮೂರೂ ರಾಜಕೀಯ ಪಕ್ಷಗಳೂ ನಿರ್ದಿಷ್ಟ ರಣತಂತ್ರದೊಂದಿಗೆ ಕಣಕ್ಕಿಳಿಯಲಿವೆ ಎಂದು ಸಮೀಕ್ಷೆಗಳು ಹೇಳಿವೆ.

ಆದರೆ ಅಂತಿಮವಾಗಿ ರಾಜ್ಯದ ಮತದಾರ ಯಾರ ಕೊರಳಿಗೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬುದನ್ನು ತಿಳಿಯಲು 2023ರ ವಿಧಾನಸಭೆ ಚುನಾವಣಾ ಫಲಿತಾಂಶಕ್ಕಾಗಿ ಕಾಯಬೇಕಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point